ನದಿಯಲ್ಲಿ ಈಜಲು ಹೋದ ನಾಲ್ವರು ನೀರು ಪಾಲು
ಮೈಸೂರು, ಮೇ 13: ಪ್ರತ್ಯೇಕ ಪ್ರಕರಣಗಳಲ್ಲಿ ಮೈಸೂರಿನ ಇಬ್ಬರು ಯುವಕರು ಸೇರಿದಂತೆ ನಾಲ್ವರು ನೀರು ಪಾಲಾಗಿದ್ದಾರೆ.
ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಸಮೀಪದ ಬಲಮುರಿ ಬಳಿ ಈಜಲು ಕಾವೇರಿ ನದಿಗೆ ಇಳಿದ ಇಬ್ಬರು ಸುಳಿಗೆ ಸಿಕ್ಕಿ ಮೃತಪಟ್ಟಿದ್ದಾರೆ. ಮೈಸೂರಿನ ಗಾಂಧಿನಗರದ ಬಸವರಾಜು ಪುತ್ರ ಶಿವು (21) ಮತ್ತು ಸಿದ್ದರಾಜು ಅವರ ಪುತ್ರ ಅಜಿತ್ ಮಹದೇವು (21) ಮೃತರು. 6 ಯುವಕರ ತಂಡ ಬಲಮುರಿಗೆ ವಿಹಾರಕ್ಕೆ ಬಂದಿತ್ತು.
ಮುಳುಗುತ್ತಿದ್ದ ಶಿವು ಅವರನ್ನು ಸ್ನೇಹಿತರು ರಕ್ಷಿಸಿ ದಡಕ್ಕೆ ತಂದಿದ್ದಾರೆ. ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಕೆ.ಆರ್. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅಸುನೀಗಿದ್ದಾರೆ. ಅಜಿತ್ ಅವರು ನದಿಯ ಆಳದಲ್ಲಿ ಸಿಲುಕಿದ್ದರಿಂದ ರಕ್ಷಿಸಲು ಸಾಧ್ಯವಾಗಿಲ್ಲ. ಪೊಲೀಸರು ನುರಿತ ಈಜುಗಾರರನ್ನು ಕರೆಸಿ ಶವಕ್ಕಾಗಿ ಶೋಧ ನಡೆಸಿದರು.

ಮತ್ತೊಂದು ಪ್ರಕರಣದಲ್ಲಿ ಕೊಡಗು ಜಿಲ್ಲೆಯ ಸುಂಟಿಕೊಪ್ಪ ಸಮೀಪದ ಕಂಬಿಬಾಣೆಯ ಚಿಕ್ಲಿಹೊಳೆ ಜಲಾಶಯದಲ್ಲಿ ಈಜಲು ತೆರಳಿದ್ದ ಕೊಡಗರಹಳ್ಳಿ ಸ್ಕೂಲ್ ಬಾಣೆ ನಿವಾಸಿ ಸಹದೇವ ಅವರ ಪುತ್ರ ಪವನ್ (19) ಹಾಗೂ ಕಂಬಿಬಾಣೆ ಮುನೀಶ್ವರ ದೇವಾಲಯದ ಸಮೀಪದ ನಿವಾಸಿ ಸುಬ್ರಮಣಿ ಅವರ ಪುತ್ರ ನಂದೀಶ್ (16) ಮೃತಪಟ್ಟಿದ್ದಾರೆ.












Click it and Unblock the Notifications