"ಜುಬಿಲಿಯಂಟ್ ಆಮಿಷಕ್ಕೆ ರಾಜ್ಯ ಸರ್ಕಾರ ಮಣಿದಿದೆ'
ಮೈಸೂರು, ಮೇ 19: ರಾಜ್ಯ ಸರ್ಕಾರವು ಜುಬಿಲಿಯಂಟ್ ಕಾರ್ಖಾನೆಯ ಆಮಿಷಕ್ಕೆ ಒಳಗಾಗಿದೆ ಎಂದು ಕಾಂಗ್ರೆಸ್ ಮಾಜಿ ಸಂಸದ ಆರ್.ಧೃವನಾರಾಯಣ್ ಗಂಭೀರ ಆರೋಪ ಮಾಡಿದರು.
ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ""ನಂಜನಗೂಡಿನ ಜುಬಿಲಿಯಂಟ್ ಕಾರ್ಖಾನೆ ಪುನರಾರಂಭ ವಿಚಾರಕ್ಕೆ ಸಂಬಂಧಿಸಿದಂತೆ, ಕಾರ್ಖಾನೆಯ ಆಮಿಷಕ್ಕೆ ಸರ್ಕಾರ ಮಣಿದಿದೆ'' ಎಂದು ಗಂಭೀರ ಆರೋಪ ಮಾಡಿದರಲ್ಲದೇ, ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ಕಾರ್ಖಾನೆಯನ್ನು ಪುನರಾರಂಭಿಸಲು ನಾವು ಆಕ್ಷೇಪಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಆದರೆ ಸಂಪೂರ್ಣ ತನಿಖೆ ಆಗಬೇಕಾಗಿದೆ, ಏಕೆಂದರೆ 70 ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಈ ಕಾರ್ಖಾನೆಯಿಂದಲೇ ಹರಡಿವೆ ಎಂದರು.

""ಈ ಹಿಂದೆ ತನಿಖೆಗೆ ಒತ್ತಾಯಿಸಿದಾಗ ಕಾರ್ಖಾನೆ ಎಂಡಿ ಅವರನ್ನು ಕರೆಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿ.ಸೋಮಣ್ಣ ಹೇಳಿದ್ದರು. ನಂತರ ಅವರೇ ಬದಲಾವಣೆ ಆದರು. ಕಾರ್ಖಾನೆ ಆರಂಭಕ್ಕೆ ಸಾಕಷ್ಟು ಪ್ರಭಾವ, ಒತ್ತಡ ಬಂತು ಅಂತ ಸ್ಥಳಿಯ ಶಾಸಕ ಹರ್ಷವರ್ಧನ್ ಹೇಳುತ್ತಿದ್ದಾರೆ. ಇದುವರೆಗೂ ಕಾರ್ಖಾನೆ ಮೇಲೆ ಯಾವುದೇ ಕೇಸ್ ದಾಖಲಾಗಿಲ್ಲ. ಇದನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು. ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ಚೀನಾದಿಂದ ಕಚ್ಚಾ ಪದಾರ್ಥಗಳು ಬಂದಿದೆ ಎಂಬುದನ್ನು ಸ್ಥಳೀಯ ಶಾಸಕರೇ ಹೇಳಿದ್ದಾರೆ. ದೆಹಲಿ ನಾಯಕರ ಒತ್ತಡಕ್ಕೆ ಸರ್ಕಾರ ಮಣಿದಿದೆ. ಪ್ರಕರಣದ ಸತ್ಯ ತಿಳಿಯಲು ಸರಕಾರವೇ ನೇಮಿಸಿದ್ದ ಹಿರಿಯ ಐಎಎಸ್ ಅಧಿಕಾರಿ ಹರ್ಷಗುಪ್ತ, ""ನಮ್ಮ ತನಿಖೆಗೆ ಜಿಲ್ಲೆಯ ಹಾಗೂ ಸ್ಥಳೀಯ ಅಧಿಕಾರಿಗಳು ಸ್ಪಂದಿಸಲಿಲ್ಲ'' ಎಂದು ಹೇಳಿ ತನಿಖೆಯನ್ನೇ ಕೈಚೆಲ್ಲಿದ್ದಾರೆ ಎಂದು ಆರೋಪಿಸಿದರು.
ಸರ್ಕಾರದ ಸಚಿವರುಗಳು ಒಂದೊಂದು ಹೇಳಿಕೆ ನೀಡುತ್ತಾ ಇದ್ದಾರೆ. ಈ ನಡವಳಿಕೆ ನೋಡಿದರೆ ಕಾರ್ಖಾನೆ ಮಾಲೀಕರ ಕಿಕ್ ಬ್ಯಾಕ್ ಆಮಿಷಕ್ಕೆ ಈ ಎಲ್ಲರೂ ಒಳಗಾಗಿದ್ದಾರೆಯೇ ಎಂಬ ಅನುಮಾನ ಮೂಡುತ್ತದೆ ಎಂದರು. ಸರ್ಕಾರ ಕೂಡಲೇ ತನಿಖೆ ನಡೆಸಬೇಕು ಎಂದು ಮಾಜಿ ಸಂಸದ ಧೃವನಾರಾಯಣ್ ಒತ್ತಾಯಿಸಿದ್ದಾರೆ.












Click it and Unblock the Notifications