"ಜಿ.ಟಿ.ದೇವೇಗೌಡ ಅವರಷ್ಟು ವಿಶಾಲ ಹೃದಯ ನನಗಿಲ್ಲ" ಮತ್ತೆ ಸಾರಾ ಮಹೇಶ್ ವಾಕ್ಸಮರ
ಮೈಸೂರು, ಸೆಪ್ಟೆಂಬರ್ 6: "ಜಿ.ಟಿ.ದೇವೇಗೌಡ ಅವರಷ್ಟು ವಿಶಾಲ ಹೃದಯ ನನಗಿಲ್ಲ" ಎಂದು ಜಿಟಿಡಿಯವರ ಬಿಜೆಪಿ ಪರ ನಿಲುವಿಗೆ ಮಾಜಿ ಸಚಿವ ಸಾರಾ ಮಹೇಶ್ ಪರೋಕ್ಷವಾಗಿ ವ್ಯಂಗ್ಯ ಮಾಡಿದ್ದಾರೆ.
ಉಪಚುನಾವಣೆ ಮುನ್ನವೇ ಜೆಡಿಎಸ್ ಸೋಲಿನ ಭವಿಷ್ಯ ನುಡಿದ ಜಿಟಿ ದೇವೇಗೌಡ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ದಸರೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ. ಬಿಜೆಪಿಯವರು ಜನಾದೇಶದ ವಿರುದ್ಧ ಸರ್ಕಾರ ರಚಿಸಿದ್ದಾರೆ. ಅಂತಹವರ ಜೊತೆ ನಾಡಹಬ್ಬ ಆಚರಿಸುವುದಾದರೂ ಹೇಗೆ? ಜಿ.ಟಿ. ದೇವೇಗೌಡರಷ್ಟು ವಿಶಾಲ ಹೃದಯ ನನಗಿಲ್ಲ. ಸಚಿವ ವಿ.ಸೋಮಣ್ಣನವರು ಮಹಾಜ್ಞಾನಿಗಳು ಎಂದು ನನ್ನನ್ನು ಕರೆದಿದ್ದಾರೆ. ನಮ್ಮಂತಹ ಜ್ಞಾನ ಉಳ್ಳವರು ಅವರ ಜೊತೆ ಹೇಗೆ ಕೂರೋಣ ಹೇಳಿ. ಇದೇ ಕಾರಣದಿಂದ ದಸರಾ ಕಾರ್ಯಕ್ರಮದಿಂದ ಹಿಂದೆ ಸರಿದಿದ್ದೇನೆ" ಎಂದು ತಿಳಿಸಿದರು.
"ಉಪಚುನಾವಣೆ ನಡೆದರೆ ಹುಣಸೂರು ಕ್ಷೇತ್ರದಲ್ಲಿ ಪಕ್ಷಕ್ಕೆ ಹಿನ್ನಡೆಯಾಗುವ ವಾತಾವರಣವಿರುವುದು ನಿಜ. ಈ ಬಗ್ಗೆ ಜಿ.ಟಿ.ದೇವೇಗೌಡ ಅವರು ಹೇಳಿರುವುದು ನಿಜ. ಇದನ್ನು ಮುಂದಿನ ದಿನದಲ್ಲಿ ಜಿಟಿಡಿ ನೇತೃತ್ವದಲ್ಲಿ ಪಕ್ಷ ಸಂಘಟಿಸಿ ಸರಿಪಡಿಸಿಕೊಳ್ಳುತ್ತೇವೆ. ಈ ಹಿಂದೆ ಕಾಂಗ್ರೆಸ್ ಪಕ್ಷದ ಮೇಲಿನ ಅನುಕಂಪ ಹಾಗೂ ನಮ್ಮ ಪಕ್ಷದಿಂದ ಗೆದ್ದು ಹೊರ ಹೋದವರು ಮಾಡಿರುವ ಡ್ಯಾಮೇಜ್ ನಿಂದಾಗಿ ಪಕ್ಷದ ಪರಿಸ್ಥಿತಿ ಹುಣಸೂರಿನಲ್ಲಿ ಸರಿ ಇಲ್ಲ. ಇದನ್ನೇ ಜಿ.ಟಿ.ದೇವೇಗೌಡರು ಹೇಳಿದ್ದಾರೆ. ಮುಂದಿನ ದಿನದಲ್ಲಿ ಇದು ಸರಿಯಾಗಲಿದೆ" ಎಂದರು.