ಜಿಟಿಡಿ ಪಕ್ಷಕ್ಕೆ ಸ್ವಾಗತಿಸಿ ಪ್ರಶ್ನೆ ಮುಂದಿಟ್ಟ ಕಾಂಗ್ರೆಸ್ ಮಾಜಿ ಶಾಸಕ!
ಮೈಸೂರು, ಸೆಪ್ಟೆಂಬರ್ 02; ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ ಕಾಂಗ್ರೆಸ್ ಸೇರುವುದಾಗಿ ಘೋಷಣೆ ಮಾಡಿದ್ದಾರೆ. ಚಾಮರಾಜ ಕ್ಷೇತ್ರದ ಮಾಜಿ ಶಾಸಕ, ಕಾಂಗ್ರೆಸ್ ನಾಯಕ ವಾಸು ಜಿ. ಟಿ. ದೇವೇಗೌಡರನ್ನು ಪಕ್ಷಕ್ಕೆ ಸ್ವಾಗತಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ವಾಸು, "ಬೇರೆ ಪಕ್ಷದಿಂದ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಯಾರೇ ಬರುವುದಾದರೂ ಸ್ವಾಗತ, ಹೈಕಮಾಂಡ ಒಪ್ಪಿಗೆ ನೀಡಿದರೆ ಬರುವುದು ಬೇಡ ಅನ್ನಲು ನಾವು ಯಾರು?" ಎಂದು ಹೇಳಿದರು.
"ಮೊದಲು ಪಕ್ಷದ ಸಿದ್ಧಾಂತ ಒಪ್ಪಬೇಕು. ಆ ಮೇಲೆ ಪಕ್ಷವನ್ನು ಸೇರಬೇಕು. ಪಕ್ಷವನ್ನು ಆಳಲು ಬರುವವರ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳಬೇಕು. ಪಕ್ಷದಿಂದ ಸ್ಪರ್ಧೆ ಮಾಡಲು ಅರ್ಜಿ ಹಾಕಬೇಕು. ತೀರ್ಮಾನ ಮಾಡಬೇಕಿರುವುದು ಹೈಕಮಾಂಡ್" ಎಂದು ಮಾಜಿ ಶಾಸಕರು ಸ್ಪಷ್ಟಪಡಿಸಿದರು.

"ಪಕ್ಷದ ಬಂದ ಮೇಲೆ ಟಿಕೆಟ್ ಕೇಳಬಾರದು ಎನ್ನಲು ನಾನು ಯಾರು?. ಅವರು ಮಕ್ಕಳಿಗೂ ಟಿಕೆಟ್ ಕೇಳಲಿ, ಹೆಂಡತಿಗೂ ಟಿಕೆಟ್ ಕೇಳಲಿ. ನನಗೂ ಮೂವರು ಮಕ್ಕಳಿದ್ದಾರೆ. ಚಾಮರಾಜ ಕೊಡಿ, ನರಸಿಂಹರಾಜ ಕೊಡಿ, ಕೃಷ್ಣರಾಜ ಕೊಡಿ ಎಂದು ನಾವು ನಾಯಕರನ್ನು ತಯಾರು ಮಾಡುತ್ತಿದ್ದರೆ ತಪ್ಪಾಗುವುದಿಲ್ಲವೇ?" ಎಂದು ವಾಸು ಪ್ರಶ್ನಿಸಿದರು.
"ನಾನು ಅರ್ಜಿ ಹಾಕಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಬಂದಿಲ್ಲ. ಹಿಂದಿನಿಂದಲೂ ಪಕ್ಷದಲ್ಲಿ ಇದ್ದೇನೆ. ಈಗಲೂ ಇದ್ದೇನೆ, ಮುಂದೆಯೂ ಇರುತ್ತೇನೆ. ನನಗೆ ಟಿಕೆಟ್ ಕೊಡದಿದ್ದಾಗಲೂ ನಾನು ಪಕ್ಷ ಬಿಟ್ಟು ಹೋಗಿಲ್ಲ" ಎಂದು ಮಾಜಿ ಶಾಸಕ ವಾಸು ಹೇಳಿದರು.
"ಚಾಮರಾಜ ಕ್ಷೇತ್ರದಲ್ಲಿ ಟಿಕೆಟ್ಗೆ ನಾನು ಪ್ರಬಲ ಆಕಾಂಕ್ಷಿಯಲ್ಲ ಎಂದು ಹೇಳಿದವರು ಯಾರು?. ನಾನು ಆರೋಗ್ಯವಾಗಿದ್ದೇನೆ, ರಾಜಕೀಯದಲ್ಲಿ ಸಕ್ರಿಯವಾಗಿದ್ದೇನೆ. ದಿನನಿತ್ಯದ ಕೆಲಸಗಳನ್ನು ಮಾಡುತ್ತೇಲೆ ಇದ್ದೇನೆ. ಪಕ್ಷದ ವಿಚಾರದಲ್ಲಿ ನಾನು ಬದಲಾಗಿಲ್ಲ" ಎಂದು ವಾಸು ತಿಳಿಸಿದರು.
ಜಿ. ಟಿ. ದೇವೇಗೌಡರು ಕಾಂಗ್ರೆಸ್ ಸೇರಿ ಚಾಮುಂಡೇಶ್ವರಿ ಕ್ಷೇತ್ರದಿಂದ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬುದು ಸುದ್ದಿ. ಜಿಟಿಡಿ ಪುತ್ರ ಹರೀಶ್ ಗೌಡ ಸಹ ಚಾಮರಾಜ ಅಥವ ಕೆ. ಆರ್. ನಗರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎಂಬ ವಿಚಾರ ಮೈಸೂರಿನಲ್ಲಿ ಚರ್ಚೆಗೆ ಕಾರಣವಾಗಿದೆ.
ಕೆ. ಆರ್. ನಗರ ಕ್ಷೇತ್ರವನ್ನು ಜಿ. ಟಿ. ದೇವೇಗೌಡ ಪುತ್ರನಿಗೆ ಬಿಟ್ಟುಕೊಡಲು ಸ್ಥಳೀಯ ಮುಖಂಡ ರವಿಶಂಕರ್ ವಿರೋಧ ವ್ಯಕ್ತಪಡಿಸಿದ್ದಾರೆ. ಚಾಮರಾಜ ಕ್ಷೇತ್ರದಲ್ಲಿ ಜಿ. ಟಿ. ಹರೀಶ್ ಸ್ಪರ್ಧೆಗೆ ಸ್ಥಳೀಯ ಕಾಂಗ್ರೆಸ್ ಮುಖಂಡ ಕೆ. ಹರೀಶ್ ಗೌಡ ವಿರೋಧ ವ್ಯಕ್ತಪಡಿಸಿದ್ದಾರೆ.
ಅತ್ತ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯಗೆ ಟಿಕೆಟ್ ಕೊಡುವುದಿಲ್ಲ ಎಂದರೆ ನನಗೆ ಟಿಕೆಟ್ ಬೇಕು ಎಂದು ಸಿದ್ದರಾಮಯ್ಯ ಆಪ್ತ ಮರೀಗೌಡ ಬೇಡಿಕೆ ಇಟ್ಟಿದ್ದಾರೆ. ವಿಧಾನಸಭೆ ಚುನಾವಣೆಗೆ ಇನ್ನೂ 2 ವರ್ಷ ಬಾಕಿ ಇದೆ. ಆದರೆ ಮೈಸೂರಿನಲ್ಲಿ ಕಾಂಗ್ರೆಸ್ ಟಿಕೆಟ್ಗಾಗಿ ಬೇಡಿಕೆ ಜೋರಾಗಿದೆ.
ಜಿ. ಟಿ. ದೇವೇಗೌಡರು ಕಾಂಗ್ರೆಸ್ ಪಕ್ಷ ಸೇರುತ್ತೇನೆ ಎಂದು ಮಾತ್ರ ಘೋಷಣೆ ಮಾಡಿದ್ದಾರೆ. ಆದರೆ ಎಲ್ಲಿಂದ ಸ್ಪರ್ಧೆ ಮಾಡಲಿದ್ದಾರೆ?, ಪುತ್ರನನ್ನು ಎಲ್ಲಿಂದ ಕಣಕ್ಕಿಳಿಸಲಿದ್ದಾರೆ? ಎಂಬುದು ಇನ್ನೂ ತೀರ್ಮಾನವಾಗಿಲ್ಲ. ಆದರೆ ಮೈಸೂರು ರಾಜಕೀಯದಲ್ಲಿ ಜಿಟಿಡಿ ಕಾಂಗ್ರೆಸ್ ಸೇರ್ಪಡೆ ವಿಚಾರದ ಬಗ್ಗೆ ಬಾರೀ ಚರ್ಚೆ ನಡೆಯುತ್ತಿದೆ.
ಮಾಜಿ ಮುಖ್ಯಮಂತ್ರಿ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜಿ. ಟಿ. ದೇವೇಗೌಡ ಕಾಂಗ್ರೆಸ್ ಸೇರುವ ಕುರಿತು ಟ್ವೀಟ್ ಮಾಡಿದ್ದು, "ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ ನನ್ನ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್ ಜತೆ ಚರ್ಚಿಸಿದ್ದಾರೆ. ಈ ಬಗ್ಗೆ ಹೈಕಮಾಂಡ್ ಜತೆಗೆ ಚರ್ಚಿಸುವುದಾಗಿ ತಿಳಿಸಿದ್ದೇನೆ. ಸದ್ಯಕ್ಕೆ ನಡೆದಿರುವುದು ಇಷ್ಟೇ ಬೆಳವಣಿಗೆ. ಹೈಕಮಾಂಡ್ ಜತೆ ಚರ್ಚಿಸಿದ ಬಳಿಕ ಮುಂದಿನ ಬೆಳವಣಿಗೆ" ಎಂದು ಹೇಳಿದ್ದಾರೆ.












Click it and Unblock the Notifications