ಶ್ಯಾನುಭೋಗರ ಮಾತು ಕೇಳಿದ್ರೆ ಸಿಎಂ ಆಗುತ್ತಿರಲಿಲ್ಲ:ಸಿದ್ದರಾಮಯ್ಯ
ಮೈಸೂರು, ಫೆಬ್ರವರಿ 03: ನಮ್ಮೂರಿನ ಶ್ಯಾನುಭೋಗರ ಮಾತು ಕೇಳಿದ್ರೆ ನಾನು ಸಿಎಂ ಆಗುತ್ತಿರಲಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಸುತ್ತೂರಿನಲ್ಲಿ ಶನಿವಾರ (ಫೆಬ್ರವರಿ 02) ನಡೆದ ಭಜನಾ ಮೇಳ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮಪ್ಪ ಹಿಂದಿನಿಂದಲೂ ನಮ್ಮೂರಿನ ಶ್ಯಾನಭೋಗರ ಮಾತು ಹೆಚ್ಚಾಗಿ ಕೇಳುತ್ತಿದ್ದರು. ನಾನು ಅವರ ಮಾತು ಕೇಳಿದ್ದರೆ ಸಿಎಂ ಆಗುತ್ತಿರಲಿಲ್ಲ. ಊರಿನಲ್ಲಿ ಪಂಚಾಯಿತಿ ಸೇರಿಸಿ ಎಲ್ಲರನ್ನು ಒಪ್ಪಿಸಿ ನಾನು ಕಾನೂನು ಪದವಿ ಓದಿದೆ.
ನನ್ನ ಮಗ ಎಲ್.ಎಲ್.ಬಿ ಕೋರ್ಸ್ ಮಾಡಬೇಕು ಎಂದು ನಮ್ಮಪ್ಪ ಶ್ಯಾನುಭೋಗರ ಬಳಿ ಕೇಳಿದ್ದರು. ಆಗ ಶ್ಯಾನುಭೋಗರು, ಹೇ.. ಕುರುಬರು ಲಾಯರ್ ಓದಲು ಆಗುವುದಿಲ್ಲ ಬೇಡ. ಲಾಯರ್ ಗಿರಿ ಏನಿದ್ರೂ ಬ್ರಾಹ್ಮಣರ ಕೆಲಸ ಅಂತ ಆ ಶ್ಯಾನುಭೋಗರು ಹೇಳಿದ್ದರು. ಶ್ಯಾನುಭೋಗರ ಮಾತು ಕೇಳಿದ್ದ ನಮ್ಮಪ್ಪ ನನಗೆ ಓದಿಸೋಲ್ಲ ಎಂದಿದ್ದರು.

ಮನೆಯಲಿ ಗಲಾಟೆ ಮಾಡಿದೆ. ಎಲ್.ಎಲ್.ಬಿ ಓದಿಸಲಿಲ್ಲ ಅಂದ್ರೆ, ಪಾಲು ಕೊಟ್ಟು ಬಿಡು ಅಂತ ಕೇಳಿದ್ದೆ. ಆಗ ಊರಿನಲ್ಲಿ ಪಂಚಾಯಿತಿ ಸೇರಿಸಿ ಕೊನೆಗೆ ನಾನು ಎಲ್.ಎಲ್.ಬಿ ಓದಲು ಅನುಮತಿ ನೀಡಿದರು ಎಂದು ತಮ್ಮ ಕಾಲೇಜಿನ ದಿನವನ್ನು ನೆನಪಿಸಿಕೊಂಡರು.

ರಾಜ್ಯದ ಜನತೆಗೆ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದರು ಕೂಡ, ಚಾಮುಂಡೇಶ್ವರಿ ಜನರು ನನ್ನನ್ನು ಸೋಲಿಸಿದರು. ಆದರೆ ದೂರದ ಎಲ್ಲೋ ಬಾದಾಮಿ ಕ್ಷೇತ್ರದ ಜನ ಗೆಲ್ಲಿಸಿದರು. ವರುಣಾ ಕ್ಷೇತ್ರದಲ್ಲಿ ನಿಂತಿದ್ದರು ಕೂಡ ನೀವು ಆಶೀರ್ವಾದ ನೀಡುತ್ತಿದ್ದೀರಿ. ಹೀಗಾಗಿ ಈ ವರುಣಾ ಕ್ಷೇತ್ರ ಹಾಗೂ ಸುತ್ತೂರು ಮಠದ ಮೇಲೆ ನನಗೆ ಅಪಾರ ಗೌರವ ಇದೆ ಎಂದರು.












Click it and Unblock the Notifications