ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ 5 ಕೋಟಿ ಡೀಲ್ ಆಗಿದೆ: ಎಚ್ಡಿಕೆ ಸ್ಪೋಟಕ ಹೇಳಿಕೆ
ಮೈಸೂರು, ಮಾರ್ಚ್ 5: ""ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ 5 ಕೋಟಿಯ ಡೀಲ್ ನಡೆದಿದೆ. ಇದು ನನಗಿರುವ ಮೂಲಗಳ ಮಾಹಿತಿ. ಕಳೆದು ಮೂರು ತಿಂಗಳಿನಿಂದ ಈ ಡೀಲ್ ನಡೆದಿದೆ'' ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸ್ಪೋಟಕ ಮಾಹಿತಿ ಹೊರಹಾಕಿದ್ದಾರೆ.
ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್ಡಿಕೆ, ""ರಾಜಕಾರಣಿಗಳ ಸಿಡಿ ಇದೆ ಎನ್ನುವಂತವರನ್ನು ಮೊದಲು ಒದ್ದು ಏರೋಪ್ಲೇನ್ ಹತ್ತಿಸಬೇಕು. ಸಿಡಿ ಇದೆ ಎಂದು ಕೆಲವರು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಇದು ಬ್ಲ್ಯಾಕ್ಮೇಲ್ನ ಕಾರ್ಯತಂತ್ರ, ಇದಕ್ಕೆ ಪುಷ್ಠಿ ಕೊಟ್ಟು ಬೆಳಸಬೇಡಿ. ಈ ರೀತಿಯ ಸಿಡಿ ಇದೆ ಎನ್ನುವವರನ್ನು ಬಂಧಿಸಿ ಅವರ ಬಳಿ ಇರುವ ಸಿಡಿಗಳನ್ನು ಸರ್ಕಾರವೇ ಜನರ ಮುಂದೆ ಬಿಡುಗಡೆ ಮಾಡಲಿ'' ಎಂದು ಆಗ್ರಹಿಸಿದರು.

ಆ ಮಾಜಿ ಸಿಎಂ ಎಂದು ಬಾಯಿ ಬಿಡಿಸಿ
""ಅದ್ಯಾರೋ ಒಬ್ಬ ಮಾಜಿ ಸಿಎಂ ಅದೆಲ್ಲೋ ಹೋಗಿ ಬರುತ್ತಾರೆ. ಅದರ ಸಿಡಿ ನನ್ನ ಬಳಿ ಇದೆ ಅಂತಾನೆ. ರಾಜ್ಯದಲ್ಲಿ ದೇವೇಗೌಡ, ಎಸ್ಎಂ ಕೃಷ್ಣ ಹಾದಿಯಾಗಿ ತುಂಬಾ ಜನ ಇದ್ದಾರೆ. ಯಾರು ಆ ಮಾಜಿ ಸಿಎಂ ಎಂದು ಬಾಯಿ ಬಿಡಿಸಿ. ಸುಮ್ಮನೇ ನಾವು ಹೊರಗೆ ಓಡಾಡುವಾಗ ಮುಜುಗರ ತರಬೇಡಿ. ಇಂತಹ ಹೇಳಿಕೆಗಳಿಂದ ಜನ ನಮ್ಮನ್ಮು ಅನುಮಾನದಿಂದ ನೋಡುವ ಹಾಗೇ ಮಾಡಬೇಡಿ. ಹಿಂದೆ ಅದ್ಯಾವುದೋ ಆ್ಯಂಕರ್ ವಿಚಾರದಲ್ಲೂ ನನ್ನ ಹೆಸರು ತಂದರು. ಆಗಲೂ ಸರಿಯಾಗಿ ಜಾಡಿಸಿದ್ದೇನೆ. ನನಗೆ ಈ ವಿಚಾರದಲ್ಲಿ ಯಾವುದೇ ಭಯವೂ ಇಲ್ಲ. ಈ ಪ್ರಕರಣದಲ್ಲಿ ನಾನು ತುಂಬಾ ಕ್ಲೀನ್ ಆಗಿದ್ದೇನೆ. ಆದರೆ ನನ್ನ ಉದ್ದೇಶ, ಇಂತಹ ಬ್ಲ್ಯಾಕ್ ಮೇಲ್ಗಳು ನಿಲ್ಲಬೇಕು. ಇಂತಹ ಪ್ರಕರಣಗಳು ಹೇಸಿಗೆ ಬರುವಂತಹ ಸ್ಥಿತಿ ನಿರ್ಮಾಣ ಮಾಡಿದೆ'' ಎಂದರು.

ಮಂತ್ರಿಯ ರಾಜೀನಾಮೆ ಕೊಡಿಸಬೇಕೆಂಬ ಉದ್ದೇಶ ಇತ್ತು
""ದೊಡ್ಡ ದೊಡ್ಡವರೇ ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಇದ್ದಾರೆ. ಇದನ್ನು ತನಿಖೆ ಮಾಡಿಸುವ ಜವಾಬ್ದಾರಿ ಸರ್ಕಾರದ್ದಾಗಿದೆ. ನಾನು ಈ ಪ್ರಕರಣ ನೋಡಿ ಖುಷಿ ಪಡುವವನ್ನಲ್ಲ'' ಎಂದರು.
ನನ್ನ ಸರ್ಕಾರ ಬೀಳಿಸಿದರು ಎನ್ನುವ ಕಾರಣಕ್ಕೆ ನಾನೂ ಒಂದು ಕಲ್ಲು ಹೊಡೆಯಬೇಕು ಅಂತ ಹೊಡೆಯೋದಿಲ್ಲ. ಇದೀಗ ಹಲವು ರೀತಿಯ ವ್ಯಾಖ್ಯಾನ ಶುರುವಾಗಿದೆ. ಪ್ರಕರಣ ಹಳ್ಳ ಹಿಡಿಯುವಂತದ್ದು ಏನು? ಆ ಮಂತ್ರಿಯ ರಾಜೀನಾಮೆ ಕೊಡಿಸಬೇಕೆಂಬ ಉದ್ದೇಶ ಇತ್ತು. ಇದೀಗ ಆ ರಾಜೀನಾಮೆ ಕೊಡಿಸುವಲ್ಲಿ ಅವರು ಸಫಲರಾಗಿದ್ದಾರೆ'' ಎಂದು ಮಾಜಿ ಸಿಎಂ ಎಚ್ಡಿಕೆ ತಿಳಿಸಿದರು.

ಇದೀಗ ಆ ಹೆಣ್ಣುಮಗಳನ್ನು ಕಟ್ಟಿಕೊಂಡು ಅವರಿಗೆ ಏನು?
""ಅವರಿಬ್ಬರೇ ವಿಡಿಯೋ ಮಾಡಿಕೊಂಡಿದ್ದಾರೆ. ಆದರೆ ಆ ವಿಡಿಯೋ ಹೊರಗೆ ಕೊಟ್ಟವರು ಯಾರು? ಗೊತ್ತಿಲ್ಲ. ಇಂತಹ ವಿಚಾರದಲ್ಲಿ ಸುಮ್ಮನೇ ಕಲ್ಲು ಹೊಡೆಯಬಾರದು. ಇವತ್ತು ರಾಜಕೀಯ ತುಂಬಾ ಕಲುಷಿತವಾಗಿದೆ. ಕೆಸರನ್ನು ನಮ್ಮ ಮೇಲೆ ನಾವೇ ಎರಚಿಕೊಂಡ ಹಾಗೆ. ಇಂತಹ ಪ್ರಕರಣದಿಂದ ನಮ್ಮನ್ನು ಜನ ತಪ್ಪಾಗಿ ತಿಳಿದುಕೊಳ್ಳುತ್ತಾರೆ. ಹೀಗಾಗಿ ಮೊದಲು ಇಂತವರನ್ನು ಒದ್ದು ಒಳಗೆ ಹಾಕಿ'' ಎಂದು ಒತ್ತಾಯಿಸಿದರು.

ಹಣವಿದ್ದವರಿಗೆ ಮಾತ್ರ ಚುನಾವಣೆ
ಇದೇ ವೇಳೆ, ಒನ್ ನೇಷನ್ ಒನ್ ಎಲೆಕ್ಷನ್ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಮೊದಲು ಹಣದಿಂದ ಚುನಾವಣೆ ನಡೆಯೋದು ನಿಲ್ಲಲಿ. ಚುನಾವಣೆಯ ವ್ಯವಸ್ಥೆಯ ಲೋಪ ಬದಲಾಗಲಿ. ಹಣವಿದ್ದವರಿಗೆ ಮಾತ್ರ ಚುನಾವಣೆ ಅನ್ನೋದು ನಿಲ್ಲಬೇಕು. ಆಮೇಲೆ ಈ ಬಗ್ಗೆ ಚರ್ಚೆ ಮಾಡೋಣ. ನನ್ನನ್ನು ಒಳಗೊಂಡಂತೆ ಬಿಜೆಪಿ, ಕಾಂಗ್ರೆಸ್ ಆತ್ಮ ವಿಮರ್ಶೆ ಮಾಡಬೇಕು. ಒನ್ ನೇಷನ್ ಒನ್ ಎಲೆಕ್ಷನ್ ವಿಚಾರದಲ್ಲಿ ಕಾಂಗ್ರೆಸ್ ಯೂಟರ್ನ್ ಹೊಡೆದಿದೆ. ಈ ವಿಚಾರದ ಚರ್ಚೆಯಲ್ಲಿ ಕಾಂಗ್ರೆಸ್ ಮೊದಲು ಭಾಗವಹಿಸಿತ್ತು. ಆ ನಂತರ ಸದನದಲ್ಲಿ ಯೂಟರ್ನ್ ಹೊಡೆಯಿತು. ಇದು ಯಾಕೆ ಅಂತ ಗೊತ್ತಾಗಲಿಲ್ಲ. ಪ್ರಸ್ತುತ ರಾಜಕಾರಣದ ಸ್ಥಿತಿ ಪ್ರಜಾಪ್ರಭುತ್ವದ ವ್ಯವಸ್ಥೆ ಬುಡಮೇಲು ಮಾಡಲಿದೆ. ಮೊದಲು ಅದು ಕೊನೆಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.












Click it and Unblock the Notifications