ಅರಣ್ಯ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸುತ್ತಿರುವ ಹುಲಿ!
ಮೈಸೂರು, ಜನವರಿ 04: ಎಚ್.ಡಿ.ಕೋಟೆಯ ಅಂತರಸಂತೆ ಅರಣ್ಯ ವಲಯ ವ್ಯಾಪ್ತಿಯಲ್ಲಿ ಕಾಣಿಸಿಕೊಂಡ ಹುಲಿಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಸಾಕಾನೆಗಳ ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದರೂ ಹುಲಿ ಮಾತ್ರ ತಪ್ಪಿಸಿಕೊಂಡು ಓಡಾಡುತ್ತಿರುವುದು ಅರಣ್ಯಾಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಒಂದೆಡೆ ಹುಲಿ ಜಾನುವಾರುಗಳನ್ನು ಹಿಡಿದು ತಿನ್ನುತ್ತಿದ್ದರೆ, ಮತ್ತೊಂದೆಡೆ ಚಿರತೆ ರೈತರ ಕೊಟ್ಟಿಗೆಗೆ ನುಗ್ಗಿ ಕುರಿಗಳನ್ನು ತಿಂದು ಹಾಕುತ್ತಿದೆ. ಸದ್ಯ ಇದೆರಡನ್ನು ಸೆರೆಹಿಡಿಯಬೇಕಾದ ಪರಿಸ್ಥಿತಿ ಅರಣ್ಯ ಇಲಾಖೆಗೆ ಬಂದೊದಗಿದ್ದು, ಇದೀಗ ಸಾಕಾನೆಗಳ ಮೂಲಕ ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದೆ.

ಕಳೆದೈದು ದಿನಗಳಿಂದಲೂ ಹುಲಿಯನ್ನು ಸೆರೆಹಿಡಿಯಲು ಕಸರತ್ತು ನಡೆಸಲಾಗುತ್ತಿದೆ. ಆದರೆ ಹುಲಿಯ ಸುಳಿವು ಕಾರ್ಯಾಚರಣೆ ನಡೆಸುತ್ತಿರುವ ತಂಡಕ್ಕೆ ಸಿಕ್ಕಿರಲಿಲ್ಲ. ಆದರೆ ಬುಧವಾರ ಮಧ್ಯಾಹ್ನ ಮಾನಂದವಾಡಿ ರಸ್ತೆಯನ್ನು ದಾಟುವಾಗ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಹುಲಿ ಕಾಣಿಸಿಕೊಂಡಿದ್ದು, ಇದರಿಂದ ಮತ್ತಷ್ಟು ಆತಂಕ ಶುರುವಾಗಿದೆ.
ನಾಗರಹೊಳೆ ಅರಣ್ಯ ವ್ಯಾಪ್ತಿಯ ಅಂತರಸಂತೆ ವಲಯದ ಸಮೀಪದ ಸೋಗಳ್ಳಿ ಗ್ರಾಮದ ವಿದ್ಯುತ್ ಸ್ಥಾವರದ ಬಳಿ ಕಾಣಿಸಿಕೊಂಡ ಹುಲಿಯ ಚಿತ್ರವನ್ನು ಬಸ್ಸಿನಲ್ಲಿದ್ದ ಕೆಲವರು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ.

ತಕ್ಷಣ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ. ಮೊದಲಿಗೆ ಅಂತರಸಂತೆ ವ್ಯಾಪ್ತಿಯ ಹೊಸಹಳ್ಳಿ ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಈ ಹುಲಿ ಈಗ ಸೋಗಳ್ಳಿಯಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ಈ ವ್ಯಾಪ್ತಿಯಲ್ಲಿ ಇಂದಿನಿಂದಲೇ (ಗುರುವಾರ) ಸೆರೆ ಹಿಡಿಯಲು ಕಾಡಾನೆಗಳ ಮೂಲಕ ಕಾರ್ಯಾಚರಣೆ ಆರಂಭಗೊಂಡಿದೆ. ಒಂದೆಡೆ ಬೋನಿನಲ್ಲಿ ಹಸುವಿನ ಮಾಂಸವಿರಿಸಿ ಸೆರೆ ಹಿಡಿಯುವ ಯತ್ನವೂ ನಡೆಯುತ್ತಿದೆ.
ಇದರ ನಡುವೆ ಒಂದೆಡೆ ಹುಲಿಯ ಸೆರೆಗೆ ಕಾರ್ಯಾಚರಣೆ ನಡೆಯುತ್ತಿದ್ದರೆ ಇನ್ನೊಂದೆಡೆ ಎಚ್.ಡಿ.ಕೋಟೆ ಪಟ್ಟಣದೊಳಕ್ಕೆ ನುಗ್ಗಿರುವ ಚಿರತೆ ಕಾಳಿದಾಸ ರಸ್ತೆಯಲ್ಲಿರುವ ಮನೆ ಬಳಿಯ ಕೊಟ್ಟಿಗೆಯಲ್ಲಿದ್ದ ಕುರಿಗಳ ಮೇಲೆ ದಾಳಿ ಮಾಡಿ 6 ಕುರಿಗಳನ್ನು ಕೊಂದು, 2 ಕುರಿಗಳನ್ನು ಗಾಯಗೊಳಿಸಿ ಪರಾರಿಯಾಗಿರುವ ಘಟನೆಯೂ ನಡೆದಿದೆ. ಪಟ್ಟಣದೊಳಕ್ಕೆ ಚಿರತೆಗಳು ಬಂದು ಕುರಿ, ನಾಯಿಗಳ ಮೇಲೆ ದಾಳಿ ಮಾಡುತ್ತಿರುವುದರಿಂದ ಜನ ಆತಂಕಗೊಂಡಿದ್ದಾರೆ.
ಹುಲಿ ಮತ್ತು ಚಿರತೆಯ ಹಾವಳಿಯಿಂದಾಗಿ ಜನ ನೆಮ್ಮದಿಕಳೆದುಕೊಂಡು ಬದುಕುವಂತಾಗಿದೆ. ಅರಣ್ಯ ಇಲಾಖೆ ಇವುಗಳನ್ನು ಸೆರೆ ಹಿಡಿದು ಅರಣ್ಯಕ್ಕೆ ಬಿಡುವ ತನಕ ಈ ಭಯ ಜನರಿಂದ ದೂರವಾಗುವ ಲಕ್ಷಣಗಳೇ ಕಂಡು ಬರುತ್ತಿಲ್ಲ.












Click it and Unblock the Notifications