ಅಗಸನಹುಂಡಿ ಬಳಿ ಬೋನಿಗೆ ಬಿದ್ದ ಹೆಣ್ಣು ಹುಲಿ ನೋಡಲು ಜಮಾಯಿಸಿದ ಜನ
ಮೈಸೂರು, ಅಕ್ಟೋಬರ್. 29: ಕಳೆದ ಕೆಲವು ತಿಂಗಳಿನಿಂದಲೂ ಮನೆಯಲ್ಲಿ ಸಾಕಿದ್ದ ಪ್ರಾಣಿಗಳ ಮೇಲೆ ದಾಳಿ ನಡೆಸಿ, ಅವುಗಳನ್ನು ಕೊಂದು ಆತಂಕ ಸೃಷ್ಟಿಸಿದ್ದ ಹೆಣ್ಣು ಹುಲಿಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಮೈಸೂರಿನ ಎಚ್.ಡಿ.ಕೋಟೆ ತಾಲೂಕಿನ ಅಗಸನಹುಂಡಿ ಬಳಿ 3 ವರ್ಷದ ಹೆಣ್ಣು ಹುಲಿ ಸೆರೆಯಾಗಿದ್ದು, ಈ ಹುಲಿ ಗ್ರಾಮದಲ್ಲಿರುವ ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸಿ ಕೊಲ್ಲುತ್ತಿತ್ತು. ಇದರಿಂದ ಜನರು ಆತಂಕಗೊಂಡು ಅರಣ್ಯ ಇಲಾಖೆಗೆ ದೂರು ನೀಡಿದ್ದರು.

ಸಾರ್ವಜನಿಕರ ದೂರಿನ ಮೇರೆಗೆ ವಾರದ ಹಿಂದೆ ಸೋಮೇಗೌಡರ ಜಮೀನಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಬೋನಿರಿಸಿದ್ದರು. ಜತೆಗೆ ಸ್ಥಳದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳೂ ಮೊಕ್ಕಂ ಹೂಡಿದ್ದರು.
ಇದೀಗ ಹುಲಿ ಸೆರೆಯಾಗಿದ್ದು, ಹುಲಿ ನೋಡಲು ಸ್ಥಳದಲ್ಲಿ ಗ್ರಾಮಸ್ಥರು ಜಮಾಯಿಸಿದ್ದಾರೆ. ಕೊನೆಗೆ ಜನರನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಸಿಬ್ಬಂದಿಗಳು ಹರಸಾಹಸಪಟ್ಟರು. ಸೆರೆಯಾದ ಹುಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮೇಟಿಕುಪ್ಪೆ ಅರಣ್ಯದಿಂದ ಹೊರಬಂದಿತ್ತು ಎನ್ನಲಾಗಿದೆ.

ಜಾಗ್ವಾರ್ ರಾಜಾ ಮರಣ
ಅಲ್ಲಿ ಹುಲಿ ಸೆರೆಯಾಗಿದ್ದರೆ ಇತ್ತ ಮೈಸೂರು ಮೃಗಾಲಯದಲ್ಲಿದ್ದ 13 ವರ್ಷದ ಜಾಗ್ವಾರ್ ರಾಜಾ ಸಾವಿಗೀಡಾಗಿದೆ. ಕೋಬ್ರಾ ಕಡಿತದಿಂದಾಗಿ ಅನಾರೋಗ್ಯಕ್ಕೀಡಾಗಿದ್ದ ಜಾಗ್ವಾರ್ ರಾಜಾ ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ (ಅ.29) ಮರಣ ಹೊಂದಿದ್ದಾನೆ ಎಂದು ಮೃಗಾಲಯದ ಪ್ರಕಟಣೆ ತಿಳಿಸಿದೆ.












Click it and Unblock the Notifications