ದಸರಾ ಮಹೋತ್ಸವಕ್ಕೆ ತಯಾರಿ: ಮಾವುತರು, ಕಾವಾಡಿಗರಿಗೆ 42 ಶೆಡ್ ನಿರ್ಮಾಣ
ಮೈಸೂರು, ಆಗಸ್ಟ್ 2: ತಮ್ಮ ಬೇಡಿಕೆ ಈಡೇರಿಸುವವರೆಗೆ ನಾವು ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ ಎಂದು ಮಾವುತರು, ಕಾವಾಡಿಗರು ದಸರಾ ಬಹಿಷ್ಕರಿಸಿರುವ ನಡುವೆಯೂ ಮೈಸೂರು ಅರಮನೆಯಲ್ಲಿ ಅವರಿಗಾಗಿ ಅರಣ್ಯ ಇಲಾಖೆ ಶೆಡ್ ನಿರ್ಮಾಣ ಮಾಡುತ್ತಿದೆ.
ಈ ಬಾರಿ ಸರ್ಕಾರ ದಸರಾವನ್ನು ಅದ್ಧೂರಿಯಾಗಿ ಆಚರಿಸಲು ಮುಂದಾಗಿದ್ದು, ಈ ಸಂಬಂಧ ಆಗಸ್ಟ್ 7 ರಂದು ವೀರನಹೊಸಳ್ಳಿಯಿಂದ ಗಜಪಯಣ ಆರಂಭಿಸುವುದರೊಂದಿಗೆ ದಸರಾಕ್ಕೆ ಮುನ್ನುಡಿ ಬರೆಯಲು ತಯಾರಿ ಶುರುವಾಗಿದೆ. ಮೈಸೂರು ದಸರಾ ಅಂದರೆ ಆನೆಗಳು ಇರಬೇಕು. ಆನೆಗಳು ಇರಬೇಕೆಂದರೆ ಅವುಗಳ ಜತೆ ಮಾವುತರು ಮತ್ತು ಕಾವಾಡಿಗರು ಜೊತೆಗಿರಲೇ ಬೇಕಾಗುತ್ತದೆ. ಆನೆಗಳು ಮತ್ತು ಮಾವುತರು, ಕಾವಾಡಿಗರು ಇಲ್ಲದೆ ದಸರಾವನ್ನು ಊಹಿಸುವುದೇ ಕಷ್ಟ. ಹಾಗಾಗಿ ಸರಕಾರ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂಬುದೇ ಕುತೂಹಲದ ವಿಚಾರವಾಗಿದೆ.
ಆಗಸ್ಟ್ 7ರಂದು ಹುಣಸೂರು ತಾಲೂಕಿನ ವೀರನಹೊಸಳ್ಳಿಯಿಂದ ಮೈಸೂರಿಗೆ ಗಜಪಯಣ ಆರಂಭವಾಗುತ್ತದೆ. ಆಗಸ್ಟ್ 10ರಂದು ಅರಮನೆ ಆವರಣದಲ್ಲಿ ದಸರಾ ಆನೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಬರಮಾಡಿಕೊಳ್ಳುತ್ತಾರೆ. 'ಜಂಬೂಸವಾರಿ'ಯಲ್ಲಿ ಭಾಗವಹಿಸಲಿರುವ ಆನೆಗಳೊಂದಿಗೆ ಬಂದು ತಂಗಲಿರುವ ಮಾವುತರು, ಕಾವಾಡಿಗಳು, ಅವರ ಕುಟುಂಬದವರು ಹಾಗೂ ಮಕ್ಕಳಿಗೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.
42 ಶೆಡ್ಗಳ ನಿರ್ಮಾಣ
ಆಗಸ್ಟ್ 10ರಂದು ಅರಮನೆ ಪ್ರವೇಶಿಸಲಿರುವ ಆನೆಗಳಿಗೆ ಮತ್ತು ಮಾವುತ ಕಾವಾಡಿಗರ ಕುಟುಂಬ ಉಳಿದುಕೊಳ್ಳಲು ಅರಮನೆ ಆವರಣದಲ್ಲಿ ಶೆಡ್ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಕಳೆದ ಎರಡು ವರ್ಷದಿಂದ ಕೋವಿಡ್ ಕಾರಣದಿಂದ ದಸರಾ ಮಹೋತ್ಸವವನ್ನು ಸರಳವಾಗಿ ಆಚರಣೆ ಮಾಡಲಾಗಿತ್ತು. ಜಂಬೂಸವಾರಿಯನ್ನು ಅರಮನೆಯೊಳಗೆ ಸೀಮಿತಗೊಳಿಸಲಾಗಿತ್ತು. ಎರಡು ವರ್ಷಗಳ ಬಳಿಕ ಅದ್ಧೂರಿ ದಸರಾ ನಡೆಯುತ್ತಿರುವುದರಿಂದ ಆನೆಗಳೊಂದಿಗೆ ಬರುವ ಮಾವುತರು, ಕಾವಾಡಿಗರ ಪರಿವಾರ ಉಳಿದುಕೊಳ್ಳಲು 42 ಶೆಡ್ ಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
ಮಾವುತರ ವಾಸ್ತವ್ಯಕ್ಕೆ ವ್ಯವಸ್ಥೆ
ಅರಮನೆ ಮಂಡಳಿ ವತಿಯಿಂದ ಆನೆಗಳು ಮತ್ತು ಮಾವುತರು ಉಳಿದುಕೊಳ್ಳುವ ಸ್ಥಳವನ್ನು ಸ್ವಚ್ಛಗೊಳಿಸಲಾಗಿದ್ದು, ಅರಣ್ಯ ಇಲಾಖೆಯಿಂದ ಶೆಡ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಜತೆಗೆ ಆನೆಗಳಿಗೆ ವಿಶೇಷ ಆಹಾರ ತಯಾರು ಮಾಡುವ ಸ್ಥಳ ಮತ್ತು ಆಹಾರ ದಾಸ್ತನು ಕೊಠಡಿಗೆ ಸುಣ್ಣ ಬಳಿಯಲಾಗಿದೆ. ಶೆಡ್ಗೆ ಬೇಕಾದ ವಿದ್ಯುತ್, ನೀರಿನ ವ್ಯವಸ್ಥೆ ಹಾಗೂ ಶೌಚಾಲಯ ವ್ಯವಸ್ಥೆಯನ್ನು ನಾವು ಮಾಡಿಕೊಡುತ್ತೇವೆ ಎಂದು ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎನ್.ಸುಬ್ರಹ್ಮಣ್ಯ ತಿಳಿಸಿದ್ದಾರೆ.
ಅಭಿಮನ್ಯು ನೇತೃತ್ವದ ಆನೆಗಳು
ಮೊದಲ ತಂಡದಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಆನೆಗಳು ಮೈಸೂರಿಗೆ ಆಗಮಿಸಲಿವೆ. ಅಂಬಾರಿ ಆನೆ ಅಭಿಮನ್ಯು ಜತೆ ಅರ್ಜುನ, ಧನಂಜಯ್, ಗೋಪಾಲ ಸ್ವಾಮಿ, ವಿಕ್ರಮ ಹಾಗೂ ಹೆಣ್ಣಾನೆಗಳಾದ ಕಾವೇರಿ, ಚೈತ್ರಾ, ಲಕ್ಷ್ಮೀ, ವಿಜಯ ಮೈಸೂರಿನ ಕಡೆ ಪ್ರಯಾಣ ಬೆಳೆಸುವ ನಿರೀಕ್ಷೆ ಇದೆ. ವಿಶೇಷ ಎಂದರೆ ಸತತ 8 ಬಾರಿ ಚಿನ್ನದ ಅಂಬಾರಿ ಹೊತ್ತು ಗಮನ ಸೆಳೆದಿರುವ ಅರ್ಜುನ ಆನೆ ಈ ಬಾರಿ ದಸರಾ ಮಹೋತ್ಸವದಲ್ಲಿ ಮತ್ತೆ ಭಾಗವಹಿಸುವ ನಿರೀಕ್ಷೆ ಇದೆ. ಎರಡನೇ ತಂಡದಲ್ಲಿ 5 ಅಥವಾ 6 ಆನೆಗಳು ಬರಲಿವೆ. ಎರಡನೇ ತಂಡದಲ್ಲಿ ಹೊಸ ಆನೆಗಳಾದ ಗಣಿತ, ಭೀಮ, ಸುಗ್ರೀವ, ಅಜಯ, ಮಹೇಂದ್ರ ಆನೆಗಳು ಬರುವ ಸಾಧ್ಯತೆ ಇದೆ.
ಗ್ರಂಥಾಲಯ ಮತ್ತು ಆಯುರ್ವೇದ ಚಿಕಿತ್ಸೆ ವ್ಯವಸ್ಥೆ
ಪ್ರಸಕ್ತ ವರ್ಷದ ದಸರಾಗೆ 15 ಆನೆಗಳನ್ನು ಆಯ್ಕೆ ಮಾಡಲಾಗಿದೆ. ಅವುಗಳನ್ನು ನೋಡಿಕೊಳ್ಳುವವರು ಹಾಗೂ ಕುಟುಂಬದವರು ಉಳಿದುಕೊಳ್ಳಲು 42 ಬಿಡಾರಗಳನ್ನು ನಿರ್ಮಾಣ ಮಾಡಲಾಗಿತ್ತು. ಮಾವುತರು ಹಾಗೂ ಕಾವಾಡಿಗರು ಇಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಆನೆಗಳಿಗೆ ಆಹಾರ ಪದಾರ್ಥ ತಯಾರಿಸುವುದಕ್ಕೆ, ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಟೆಂಟ್ ಶಾಲೆ ನಡೆಸಲು ಬೇಕಾದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸಣ್ಣ ಗ್ರಂಥಾಲಯ ಮತ್ತು ಆಯುರ್ವೇದ ಚಿಕಿತ್ಸಾಲಯವೂ ಇರಲಿದೆ ಎಂದು ಡಿಸಿಎಫ್ ಕರಿಕಾಳನ್ ತಿಳಿಸಿದ್ದಾರೆ.
ಮೈಸೂರು ದಸರಾ ಬಹಿಷ್ಕಾರಕ್ಕೆ ಮುಂದಾದ ಮಾವುತರು... ಸಂಕಷ್ಟದಲ್ಲಿ ಸರಕಾರ...! ಈ ಬಾರಿ ಸರ್ಕಾರ ದಸರಾವನ್ನು ಅದ್ಧೂರಿಯಾಗಿ ಆಚರಿಸಲು ಮುಂದಾಗಿದ್ದು, ಈ ಸಂಬಂಧ ಆಗಸ್ಟ್ 7 ರಂದು ವೀರನಹೊಸಳ್ಳಿಯಿಂದ ಗಜಪಯಣ ಆರಂಭಿಸುವುದರೊಂದಿಗೆ ದಸರಾಕ್ಕೆ ಮುನ್ನುಡಿ ಬರೆಯಲು ತಯಾರಿ ಶುರುವಾಗಿದೆ. ಮೈಸೂರು ದಸರಾ ಅಂದರೆ ಆನೆಗಳು ಇರಬೇಕು. ಆನೆಗಳು ಇರಬೇಕೆಂದರೆ ಅವುಗಳ ಜತೆ ಮಾವುತರು ಮತ್ತು ಕಾವಾಡಿಗರು ಜೊತೆಗಿರಲೇ ಬೇಕಾಗುತ್ತದೆ. ಆನೆಗಳು ಮತ್ತು ಮಾವುತರು, ಕಾವಾಡಿಗರು ಇಲ್ಲದೆ ದಸರಾವನ್ನು ಊಹಿಸುವುದೇ ಕಷ್ಟ. ಹಾಗಾಗಿ ಸರಕಾರ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂಬುದೇ ಕುತೂಹಲದ ವಿಚಾರವಾಗಿದೆ.
Recommended Video