ಪ್ರವಾಹದ ಬಳಿಕ ವಿಮಾ ಕಂಪೆನಿಗೆ ಅಲೆದಾಡುತ್ತಿರುವ ನೆರೆ ಸಂತ್ರಸ್ತರು
ಮೈಸೂರು, ಆಗಸ್ಟ್ 17: "ಪ್ರವಾಹ ಬಂದಾಗ ಮಾತ್ರವಲ್ಲ, ನಿಂತ ಮೇಲೂ ತೊಂದರೆ ಕೊಡುತ್ತಿದೆ" ಎಂದು ಬೇಸರದಿಂದ ನುಡಿದರು ಪ್ರವಾಹದಿಂದ ಮನೆ ಕಳೆದುಕೊಂಡ ನಂಜನಗೂಡಿನ ಶಿವಸ್ವಾಮಿ.
ಹೌದು. ಇದಕ್ಕೆ ಪ್ರಮುಖ ಕಾರಣ ಪ್ರವಾಹದ ನೀರಲ್ಲಿ ಮುಳುಗಿ ಹೋಗಿದ್ದ ಅವರ ಸ್ಕೂಟರ್. ಮಳೆ ಬಂದು ದ್ವಿಚಕ್ರವಾಹನಗಳ ದುರಸ್ತಿ ಹಾಗೂ ಅದಕ್ಕೆ ತಗುಲುವ ವೆಚ್ಚವನ್ನು ವಿಮಾ ಕಂಪೆನಿ ಭರಿಸುತ್ತದೆಂದು ದಿನನಿತ್ಯವೂ ಆಫೀಸ್ ಗೆ ವಿಮೆ ಹಣ ಪಡೆಯಲು ಮಾಲೀಕರು ಪರದಾಡುತ್ತಿದ್ದಾರೆ.

ಧಾರಾಕಾರ ಮಳೆಯಿಂದಾಗಿ ರಸ್ತೆಗಳು ಜಲಾವೃತವಾಗಿದ್ದವು. ಅದರ ನಡುವೆಯೂ ಕಾರು ಚಾಲನೆ ಮಾಡಿದ್ದರಿಂದ ದುರಸ್ತಿಗೆ ಬಂದಿವೆ. ಅಲ್ಲದೇ, ಬಹಳಷ್ಟು ಅಪಾರ್ಟ್ಮೆಂಟ್ ಗಳ ಸೆಲರ್ಗಳಿಗೆ ನೀರು ನುಗ್ಗಿತ್ತು. ಅಲ್ಲಿದ್ದ ನೂರಾರು ಕಾರುಗಳು, ದ್ವಿಚಕ್ರವಾಹನಗಳಿಗೆ ಹಾನಿಯಾಗಿದೆ. ಎಂಜಿನ್ ದುರಸ್ತಿ, ವೈರಿಂಗ್ ಸರಿ ಮಾಡಿಸಬೇಕಾದ ಅನಿವಾರ್ಯ ಎದುರಾಗಿದೆ. ಹೀಗಾಗಿ, ಸರ್ವಿಸ್ ಷೋರೂಂಗಳು, ಗ್ಯಾರೇಜ್ಗಳಲ್ಲಿ ದುರಸ್ತಿಗಾಗಿ ಬರುವ ವಾಹನಗಳ ಸಂಖ್ಯೆಯಲ್ಲಿ ದಿಢೀರ್ ಏರಿಕೆಯಾಗಿದೆ.
ನೀರಿನಲ್ಲಿ ಒದ್ದೆಯಾದ ಹೆಚ್ಚಿನ ಕಾರು, ದ್ವಿಚಕ್ರವಾಹನಗಳು ದುರಸ್ತಿಗೆ ಬಂದಿವೆ. ಎಂಜಿನ್ ಸೀಜ್ ಆದ, ಚಾಲನೆ ಸಾಧ್ಯವಾಗದ ಕಾರುಗಳನ್ನು ಟೋಯಿಂಗ್ ವಾಹನಗಳ ಮೂಲಕ ಷೋರೂಂಗಳಿಗೆ ಸಾಗಿಸಲಾಗುತ್ತಿದೆ. ಕೆಲವರು ಸಾಗಿಸಲೂ ಆಗದೇ ಪರದಾಡುತ್ತಿದ್ದಾರೆ. ವಿಮೆ ಮಾಡಿಸಿದ್ದರೂ ಎಂಜಿನ್ ಕವರ್ ಆಗಿರುವುದಿಲ್ಲ. ಹೀಗಾಗಿ, ಸ್ವಂತ ಹಣ ನೀಡಿಯೇ ದುರಸ್ತಿ ಮಾಡಿಸಬೇಕಾದ ಅನಿವಾರ್ಯತೆಯಲ್ಲಿ ಬಹಳಷ್ಟು ಮಂದಿ ಇದ್ದಾರೆ. ಕಾರ್ ಎಂಜಿನ್ ದುರಸ್ತಿಗೆ 40ರಿಂದ 50ಸಾವಿರ ವೆಚ್ಚವಾಗುತ್ತಿರುವುದು, ಹೊರೆಯಾಗಿ ಪರಿಣಮಿಸಿದೆ.

"ಇಷ್ಟೊಂದು ದೊಡ್ಡ ಪ್ರಮಾಣದ ಅರ್ಜಿ ಈ ಹಿಂದೆ ಬಂದಿರಲಿಲ್ಲ. ಸರ್ವೇಯರ್ಗಳನ್ನು ಕಳುಹಿಸಿ ವರದಿ ಪಡೆಯುತ್ತಿದ್ದೇವೆ. ಯಾವ ರೀತಿಯ ವಿಮೆ ಮಾಡಿಸಿದ್ದಾರೆ ಎನ್ನುವುದರ ಮೇಲೆ ಕ್ಲೇಮ್ ನಿರ್ಧಾರವಾಗುತ್ತದೆ. ಎಂಜಿನ್ ಕವರ್ ಪ್ರೊಟೆಕ್ಷನ್ಗೆಂದೇ ಪ್ರತ್ಯೇಕ ವಿಮೆ ಹೊಂದಿರಬೇಕಾಗುತ್ತದೆ. ಇಲ್ಲವಾದಲ್ಲಿ ವೈರಿಂಗ್, ಇತರ ಬಿಡಿಭಾಗಗಳ ದುರಸ್ತಿಗಷ್ಟೇ ಕ್ಲೇಮ್ ಪಡೆಯಬಹುದಾಗಿದೆ" ಎನ್ನುತ್ತಾರೆ ವಿಮಾ ಕಂಪೆನಿ ಅಧಿಕಾರಿಗಳು. ಒಟ್ಟಾರೆ ಮಳೆಯಿಂದ ಮನೆ ಹಾನಿ ಒಂದೆಡೆಯಾದರೆ, ಈ ವಾಹನಗಳ ವಿಮಾ ತಲೆ ಬಿಸಿ ಮತ್ತೊಂದೆಡೆಯಾಗಿದೆ.












Click it and Unblock the Notifications