ರಕ್ಷಾ ಬಂಧನಕ್ಕೂ ಪ್ರವಾಹದ ಕರಿನೆರಳು
ಮೈಸೂರು, ಆಗಸ್ಟ್ 14: ಅಣ್ಹ ತಂಗಿಯರ ಬಾಂಧವ್ಯ ಬೆಸೆಯುವ ಹಬ್ಬ ರಕ್ಷಾ ಬಂಧನಕ್ಕೆ ಈ ಬಾರಿ ಪ್ರವಾಹದ ಕರಿ ನೆರಳು ಬಿದ್ದಿದೆ. ನಗರದ ಹಲವೆಡೆ ಈಗಾಗಲೇ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ರಾಖಿ ಖರೀದಿಸಬೇಕಿತ್ತು. ಆದರೆ ಈ ಬಾರಿ ರಾಖಿ ಮಾರಾಟ ಪ್ರಮಾಣ ಶೇ. 45ರಷ್ಟು ಇಳಿಮುಖವಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.
ಹುತಾತ್ಮ ಅಣ್ಣನ ಪ್ರತಿಮೆಗೆ ರಾಖಿ ಕಟ್ಟಿ ಕಣ್ಣೀರಿಟ್ಟ ತಂಗಿ
ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳು ಪ್ರವಾಹದಲ್ಲಿ ಮುಳುಗಿ ಈಗಷ್ಟೇ ಚೇತರಿಸಿಕೊಳ್ಳುತ್ತಿವೆ. ಇದಕ್ಕೆ ಮೈಸೂರು, ಕೊಡಗು ಭಾಗವೂ ಹೊರತಾಗಿಲ್ಲ. ಹಾಗಾಗಿ ಈ ಬಾರಿ ಹಬ್ಬದ ಆಚರಣೆಯ ಅನುಮಾನವಿದೆ. ಜನರು ತಮ್ಮ ಮನೆ ಸರಿಪಡಿಸಿಕೊಳ್ಳುವ, ಪಾತ್ರೆ, ಬಟ್ಟೆಗಳನ್ನು ಎತ್ತಿಟ್ಟುಕೊಳ್ಳುವುದರಲ್ಲೇ ಮಗ್ನರಾಗಿದ್ದಾರೆ. ಪ್ರವಾಹ ಪರಿಸ್ಥಿತಿಯಿಂದಾಗಿ ಈ ಬಾರಿ ವ್ಯಾಪಾರ ನಷ್ಟವಾಗಿದೆ.

"ಶ್ರಾವಣ ಮಾಸದಲ್ಲೇ ಹೆಚ್ಚು ವ್ಯಾಪಾರ ನಡೆಯುತ್ತಿತ್ತು. ಆದರೆ, ನೆರೆ ಬಂದು ಹಬ್ಬವನ್ನು ಮಂಕು ಮಾಡಿದಂತಿದೆ" ಎನ್ನುತ್ತಾರೆ ರಾಖಿ ವ್ಯಾಪಾರಿ ನಿತೀಶ್. "ಪ್ರತಿವರ್ಷ ಒಂದೆರಡು ದಿನ ಮುಂಚಿತವಾಗಿ ಗ್ರಾಮೀಣ ಭಾಗದವರು ಖರೀದಿ ಮಾಡುತ್ತಿದ್ದರು. ಸಂಜೆಯ ಹೊತ್ತಿಗೆಲ್ಲ ನಮ್ಮ ಅಂಗಡಿಯ ಎದುರು ಜನರು ತುಂಬಿರುತ್ತಿದ್ದರು. ಈ ವರ್ಷ ಪರಿಸ್ಥಿತಿಯೇ ಬೇರೆ ಇದೆ" ಎಂದು ಅವರು ಬೇಸರದಿಂದ ನುಡಿದರು.

ಸಾಮಾನ್ಯ ನೂಲು, ಜರಿ, ರೇಷ್ಮೆಯಲ್ಲಿ ತಯಾರಿಸಿರುವ ರಾಖಿಗಳು ನಗರದ ಮಾರುಕಟ್ಟೆಗೆ ಬಂದಿವೆ. ವಿವಿಧ ಶೈಲಿಯ ರಾಖಿಗಳನ್ನು ಮಾರಾಟಗಾರರು ತಮ್ಮ ಅಂಗಡಿಗಳ ಮುಂದೆ ನೇತು ಹಾಕಿದ್ದಾರೆ. ಶಿವಾಜಿ ಚೌಕ, ಸವಿತಾ ಸರ್ಕಲ್ಗಳಲ್ಲಿ ಕೆಲವೇ ಕೆಲವು ವ್ಯಾಪಾರಿಗಳು ರಾಖಿಗಳನ್ನು ಮಾರಾಟ ಮಾಡುತ್ತಿದ್ದಾರೆ. 5ರಿಂದ 500ರೂ ವರೆಗಿನ ರಾಖಿಗಳನ್ನು ಇವರು ಮಾರಾಟ ಮಾಡುತ್ತಿದ್ದು, ಕೊಳ್ಳುವವರೇ ಇಲ್ಲದಾಗಿದೆ.
ನೆರೆಯ ಹೊಡೆತದಿಂದ ಹಬ್ಬದ ಸಂಭ್ರಮವೂ ಕರಗಿಹೋಗಿದೆ.












Click it and Unblock the Notifications