ಮೈಸೂರಿನ ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅವಘಡ
ಮೈಸೂರು, ಮೇ 5 : ನಗರದ ಜೆಎಲ್ ಬಿ ರಸ್ತೆಯಲ್ಲಿರುವ ಬಹುಮಹಡಿ ಕಟ್ಟಡ 'ಅಯ್ಯ ಟವರ್'ನಲ್ಲಿ ಏಕಾಏಕಿ ಬೆಂಕಿ ಅವಘಡ ಸಂಭವಿಸಿದ್ದು, ಕಟ್ಟಡದ 6 ಹಾಗೂ 5ನೇ ಅಂತಸ್ತಿಗೆ ಸಾಕಷ್ಟು ಹಾನಿಯಾಗಿದೆ. ಕಟ್ಟಡದಲ್ಲಿದ್ದ ವಿವಿಧ ಸಂಸ್ಥೆಗಳ ನೂರಾರು ಮಂದಿ ಕಾರ್ಯ ನಿರ್ವಹಿಸುತ್ತಿದ್ದರು. ಕಟ್ಟಡದಲ್ಲಿದ್ದ ಕೆಲ ನೌಕರರು ಸಕಾಲದಲ್ಲಿ ಎಚ್ಚೆತ್ತು ಕೊಂಡಿದ್ದರಿಂದ ಹಾಗೂ ಅಗ್ನಿಶಾಮಕ ದಳದ ಶ್ರಮದಿಂದಾಗಿ ಹೆಚ್ಚಿನ ಅನಾಹುತ ತಪ್ಪಿದೆ.
ಮೊಬೈಲ್ ಟವರ್ ಗೆ ವಿದ್ಯುತ್ ಪೂರೈಸುವ ಜಾಲದಲ್ಲಿ ಶಾರ್ಟ್ ಸರ್ಕಿಟ್ ಉಂಟಾಗಿದ್ದೇ ಬೆಂಕಿ ಅವಘಡಕ್ಕೆ ಕಾರಣ ಎನ್ನಲಾಗಿದೆ. ಸಿಕೆಸಿ ಶಾಲೆಯ ಮುಂಭಾಗ ಇರುವ, 6 ಅಂತಸ್ತುಗಳ ಅಯ್ಯ ಟವರ್ ಮೇಲ್ಭಾಗದಲ್ಲಿ ನೆಲೆಗೊಳಿಸಿರುವ ಮೊಬೈಲ್ ಸಿಗ್ನಲ್ ಟವರ್ ನಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿದೆ. ಬ್ಯಾಟರಿ ಇರಿಸಿದ್ದ ಕೊಠಡಿಯಿಂದ ಹೊಗೆ ಬರುತ್ತಿದ್ದುದನ್ನು ಗಮನಿಸಿದ ನೌಕರರು ಆತಂಕಕ್ಕೊಳಗಾಗಿ ಕಟ್ಟಡದಿಂದ ಹೊರಗೋಡಿ ಬಂದಿದ್ದಾರೆ. ಕೆಲವರು ಕೂಡಲೇ ಅಗ್ನಿಶಾಮಕ ದಳಕ್ಕೆ ವಿಚಾರ ಮುಟ್ಟಿಸಿದ್ದಾರೆ.
ರಾಮನಗರ: ಶಾರ್ಟ್ ಸರ್ಕಿಟ್ ಗೆ ಅಂಗಡಿ ಭಸ್ಮ, 12 ಲಕ್ಷಕ್ಕೂ ಹೆಚ್ಚು ನಷ್ಟ
ಸರಸ್ವತಿಪುರಂನ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕಾಗಮಿಸಿ, 10ಕ್ಕೂ ಹೆಚ್ಚು ಸಿಬ್ಬಂದಿ ಏಣಿ ಮೂಲಕ ಕಟ್ಟಡದ ಮೇಲೇರಿ, ಕೊಠಡಿಯ ಕಿಟಕಿ ಗಾಜುಗಳನ್ನು ಒಡೆದು ಹೊಗೆ ಸರಾಗವಾಗಿ ಹೊರ ಹೋಗುವಂತೆ ಮಾಡಿದ್ದಾರೆ. ಸುಮಾರು 3 ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿ ನಂದಿಸಲು 3 ಟ್ಯಾಂಕರ್ ನೀರು ಬಳಸಲಾಗಿದೆ.
ಅಯ್ಯ ಟವರ್ ನ ಮೊದಲ 5 ಅಂತಸ್ತುಗಳನ್ನು ವಿವಿಧ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ. 5ನೇ ಅಂತಸ್ತಿನಲ್ಲಿ ಭಾರತ್ ಬಿಪಿಒ ಸಂಸ್ಥೆ ಇದ್ದು, 150 ನೌಕರರಿದ್ದಾರೆ. ಅವರಲ್ಲಿ ಮಹಿಳೆಯರೇ ಅಧಿಕ. 6ನೇ ಅಂತಸ್ತು ಖಾಲಿ ಇದ್ದು, ನೌಕರರು ಉಪಾಹಾರ ಸೇವಿಸಲು ಬಳಸುತ್ತಾರೆ.