Get Updates
Get notified of breaking news, exclusive insights, and must-see stories!

ಜಂಬೂ ಸವಾರಿ ಅಂತಿಮ ತಾಲೀಮು; ಮೆರವಣಿಗೆಯಲ್ಲಿ 6 ಆನೆ ಭಾಗಿ

ಮೈಸೂರು, ಅಕ್ಟೋಬರ್ 13; ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮ ಕಳೆಕಟ್ಟಿದ್ದು, ದಸರೆಯ ಪ್ರಮುಖ ಆಕರ್ಷಣೆಯಾಗಿರುವ ಜಂಬೂ ಸವಾರಿ ಮೆರವಣಿಗೆ ಹಿನ್ನಲೆಯಲ್ಲಿ ಬುಧವಾರ ಅರಮನೆ ಅಂಗಳದಲ್ಲಿ ಅಂತಿಮ ಹಂತದ ಜಂಬೂಸವಾರಿ ತಾಲೀಮು ನಡೆಸಲಾಯಿತು.

ಅಕ್ಟೋಬರ್ 15ರಂದು ನಡೆಯಲಿರುವ ಜಂಬೂಸವಾರಿ ಮೆರವಣಿಗೆಯಲ್ಲಿ ಯಾವುದೇ ಅಡೆತಡೆಗಳು ಎದುರಾಗದಂತೆ ಮುನ್ನೆಚ್ಚರಿಕೆವಹಿಸುವ ಹಾಗೂ ಜಂಬೂಸವಾರಿ ಮೆರವಣಿಗೆಯ ಸಮಯ ಪಾಲನೆ ಮಾಡುವ ಉದ್ದೇಶದೊಂದಿಗೆ ತಾಲೀಮು ನಡೆಸಲಾಯಿತು.

ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ತಾಲೀಮಿನಲ್ಲಿ ಗಜಪಡೆ ಸಾರಥಿ ಅಭಿಮನ್ಯುಗೆ ಮರದ ಅಂಬಾರಿ ಹೊರಿಸದೆ ತಾಲೀಮು ನಡೆಸಲಾಯಿತು. ಈ ವೇಳೆ ಅಭಿಮನ್ಯು ಜೊತೆ ಕುಮ್ಕಿ ಆನೆಗಳಾಗಿ ಕಾವೇರಿ, ಚೈತ್ರ ಆನೆಗಳು ಹೆಜ್ಜೆಹಾಕಿದವು.

 Final Rehearsal Of Jamboo Savari Held At Mysuru Palace

ಈ ವೇಳೆ ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ಗಜಪಡೆಗೆ ಪುಷ್ಪಾರ್ಚನೆ ಸಲ್ಲಿಸಿದರೆ. ಡಿಸಿಪಿ ಗೀತಾ ಪ್ರಸನ್ನ, ಸಿಎಆರ್ ಡಿಸಿಪಿ ಶಿವರಾಮ್ ಹಾಗೂ ಇನ್ನಿತರ ಅಧಿಕಾರಿಗಳು ತಾಲೀಮಿನಲ್ಲಿ ಪಾಲ್ಗೊಂಡಿದ್ದರು. ತಾಲೀಮಿನಲ್ಲಿ ಗಜಪಡೆ ಜೊತೆ ಅಶ್ವದಳದ ಸಿಬ್ಬಂದಿ, ಪೊಲೀಸ್ ಇಲಾಖೆಯ ವಿವಿಧ ತುಕಡಿಗಳ ಸಿಬ್ಬಂದಿ ಆಕರ್ಷಕ ಪೊಲೀಸ್ ಪಥ ಸಂಚಲನ ನಡೆಸಿದರು.

ಬಿಗಿ ಪೊಲೀಸ್ ಬಂದೋಬಸ್ತ್; ವಿಜಯದಶಮಿ ದಿನ ಅರಮನೆ ಸುತ್ತಮುತ್ತ ಬಿಗಿ ಪೋಲಿಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ದಸರಾ ಜಂಬೂಸವಾರಿ ನಡೆಯುವ ಅಕ್ಟೋಬರ್ 15ರಂದು ಅನೇಕ ಜನರು ಅರಮನೆಯತ್ತ ಆಗಮಿಸುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಅರಮನೆಯ ಸುತ್ತಲಿನ ರಸ್ತೆಗಳಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

ಈ ಸಂಬಂಧ ಅಕ್ಟೋಬರ್ 14ರಂದು ಪೋಲಿಸ್ ಇಲಾಖೆಯಿಂದ ಅಧಿಕೃತ ಆದೇಶ ಹೊರಡಿಸಲಿದ್ದು, ಸಾರ್ವಜನಿಕರು ಸಹಕರಿಸುವಂತೆ ನಗರ ಪೋಲಿಸ್ ಆಯುಕ್ತ ಡಾ. ಚಂದ್ರಗುಪ್ತ ಮನವಿ ಮಾಡಿದ್ದಾರೆ. ಅಲ್ಲದೇ, ಅರಮನೆಯ ಒಳಗೆ ನಡೆಯಲಿರುವ ಜಂಬೂಸವಾರಿ ಮೆರವಣಿಗೆ ವೀಕ್ಷಿಸಲು ಅರಮನೆ ಒಳಗಡೆ ಕೋವಿಡ್ ನಿಯಮದ ಅಡಿಯಲ್ಲಿ ಸೂಕ್ತ ಭದ್ರತೆಯೊಂದಿಗೆ ಮೆರವಣಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

"ಇವತ್ತಿನ ಅಂತಿಮ ಹಂತದ ರಿಹರ್ಸಲ್ ಯಶಸ್ವಿಯಾಗಿ ನಡೆದಿದ್ದು, ದಸರಾಗೆ ಬೇಕಾದ ಎಲ್ಲಾ ಸಿದ್ದತೆಗಳು ಮುಕ್ತಾಯವಾಗಿದೆ" ಎಂದು ಮೈಸೂರು ನಗರ ಪೋಲಿಸ್ ಆಯುಕ್ತ ಡಾ. ಚಂದ್ರಗುಪ್ತ ಹೇಳಿದ್ದಾರೆ.

ಮೆರವಣಿಗೆಯಲ್ಲಿ ಗೋಪಾಲಸ್ವಾಮಿ; ಈ ಬಾರಿಯ ದಸರಾ ಜಂಬೂಸವಾರಿ ಮೆರವಣಿಯಲ್ಲಿ ಗೋಪಾಲಸ್ವಾಮಿ ಆನೆ ಇರುತ್ತಾನೆ. ಶ್ರೀರಂಗಪಟ್ಟಣದಲ್ಲಿ ಪಟಾಕಿ ಮತ್ತು ಕಲರ್ ಪೇಪರ್ ಕಣ್ಣಿಗೆ ಬಿದ್ದಿದ್ದರಿಂದ ಆ ರೀತಿ ವರ್ತಿಸಿದ್ದಾನೆ. ಅಲ್ಲದೇ ಗೋಪಾಲಸ್ವಾಮಿ ಕಳೆದ 10 ವರ್ಷದಿಂದ ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದು, ಅತ್ಯಂತ ಅನುಭವಿ ಆನೆಯಾಗಿದೆ. ಹೀಗಾಗಿ ಒಂದು ಘಟನೆ ಇಟ್ಟುಕೊಂಡು ಆನೆಯನ್ನು ದೂರಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

"ಜಂಬೂ ಸವಾರಿಯಲ್ಲಿ ಆರು ಆನೆಗಳು ಭಾಗವಹಿಸುತ್ತವೆ. ಮೊದಲ ಬಾರಿಗೆ ಬಂದಿರುವ ಅಶ್ವತ್ಥಾಮ ಭಾಗವಹಿಸುತ್ತಾನೆ. ನಗರ ಪ್ರದೇಶದ ವಾತಾವರಣಕ್ಕೆ ಹೊಸ ಆನೆಗಳು ಹೊಂದಿಕೊಂಡಿವೆ. ಗುರುವಾರ ಮಧ್ಯರಾತ್ರಿಯಿಂದಲೇ ಆನೆಗಳಿಗೆ ಅಲಂಕಾರ ಆರಂಭಿಸುತ್ತೇವೆ. ವಿಜಯದಶಮಿದಿನ ಮಧ್ಯಾಹ್ನ 2.30ಕ್ಕೆ ಅಂಬಾರಿ ಕಟ್ಟುವ ಕಾರ್ಯ ಶುರುವಾಗಲಿದೆ" ಎಂದು ಡಿಸಿಎಫ್ ಕರಿಕಾಳನ್ ಮಾಹಿತಿ ನೀಡಿದರು.

ನವರಾತ್ರಿ ಹಿನ್ನೆಲೆಯಲ್ಲಿ ಅಕ್ಟೋಬರ್ 14ರಂದು ಅರಮನೆಯಲ್ಲಿ ಆಯುಧ ಪೂಜೆ ನಡೆಯಲಿದ್ದು, ಅಂದು ಬೆಳಗ್ಗೆ 5.30ರಿಂದ ಪೂಜಾ ವಿಧಿ ವಿಧಾನ ಆರಂಭವಾಗಲಿದೆ. 7.45ಕ್ಕೆ ರಾಜಮನೆತನದ ಆಯುಧಗಳನ್ನು ಅರಮನೆ ಕೋಡಿ ಸೋಮೇಶ್ವರ ದೇಗುಲಕ್ಕೆ ರವಾನಿಸಿ ಪೂಜೆ ಸಲ್ಲಿಸಿದ ಬಳಿಕ ಎಲ್ಲಾ ಆಯುಧಗಳನ್ನ ಅರಮನೆ ಕಲ್ಯಾಣಮಂಟಪಕ್ಕೆ ತಂದು ಇರಿಸಲಾಗುತ್ತದೆ. ನಂತರ 11.02 ರಿಂದ 11.22ರ ಶುಭ ಮುಹೂರ್ತದಲ್ಲಿ ಆಯುಧಗಳಿಗೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪೂಜೆ ಸಲ್ಲಿಸಲಿದ್ದಾರೆ.

ವಿಜಯದಶಮಿ ಆಚರಣೆ; ನವರಾತ್ರಿಯ ಕೊನೆದಿನದಂದು ನಡೆಯುವ ವಿಜಯದಶಮಿ ಹಿನ್ನಲೆಯಲ್ಲಿ ಅ‌ಕ್ಟೋಬರ್ 15ರಂದು ಅರಮನೆಯಲ್ಲಿ ವಿಜಯದಶಮಿ ಆಚರಣೆ ನಡೆಸಲಾಗುತ್ತದೆ. ಅಂದು ಮುಂಜಾನೆ 5.45ಕ್ಕೆ ಅರಮನೆಯ ಪಟ್ಟದ ಆನೆ, ಪಟ್ಟದ ಕುದುರೆ ಮತ್ತು ಪಟ್ಟದ ಹಸುಗಳಿಗೆ ಪೂಜೆ ನೆರವೇರಿಸಲಾಗುತ್ತದೆ. ಇದಾದ ಬಳಿಕ ಬೆಳಗ್ಗೆ 7.20 ರಿಂದ 7.40ರವರೆಗೆ ವಿಜಯದಶಮಿ‌ ಮೆರವಣಿಗೆ ನಡೆಯಲಿದ್ದು, ಈ ವೇಳೆ ಯದುವೀರ್ ಒಡೆಯರ್ ಅರಮನೆ ಮುಖ್ಯದ್ವಾರದಿಂದ ಅರಮನೆ ಆವರಣದಲ್ಲಿರುವ ಭುವನೇಶ್ವರಿ ದೇಗುಲದವರೆಗೂ ಮೆರವಣಿಗೆ ಮೂಲಕ ತೆರಳಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಲಿದ್ದಾರೆ.

ಈ ಬಾರಿ ಕೊರೊನಾ ಕಾರಣದಿಂದಾಗಿ ದಸರಾ ವಿಜಯದಶಮಿ ದಿನದಂದು ಅರಮನೆಯಲ್ಲಿ ನಡೆಯುತ್ತಿದ್ದ ವಜ್ರಮುಷ್ಠಿ ಕಾಳಗ ನಡೆಸುವುದನ್ನ ಕೈಬಿಡಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+