ಚಾಮುಂಡಿ ಬೆಟ್ಟ ಒತ್ತುವರಿ ಮಾಡಲು ಮುಂದಾದವರಿಗೆ ಅರಣ್ಯ ಇಲಾಖೆ ಶಾಕ್
ಮೈಸೂರು, ಜನವರಿ 19 : ಚಾಮುಂಡಿಬೆಟ್ಟದಲ್ಲಿನ ಅರಣ್ಯ ಪ್ರದೇಶದ ಒತ್ತುವರಿ ತಡೆಗಟ್ಟುವ ಉದ್ದೇಶದಿಂದ ಸುಮಾರು 28 ಲಕ್ಷ ರೂ. ವೆಚ್ಚದಲ್ಲಿ ತಂತಿಬೇಲಿ ನಿರ್ಮಾಣಕ್ಕೆ ಅರಣ್ಯ ಇಲಾಖೆ ನಿರ್ಧರಿಸಿದ್ದು, ಈ ಸಂಬಂಧ ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.
ಇತ್ತೀಚಿನ ದಿನಗಳಲ್ಲಿ ಒತ್ತುವರಿ ಎಂಬುದು ಎಗ್ಗಿಲ್ಲದೆ ಸಾಗಿದೆ. ಅದಕ್ಕೆ ಚಾಮುಂಡಿಬೆಟ್ಟ ಕೂಡ ಹೊರತಾಗಿಲ್ಲ. ಹೀಗಾಗಿ ಬೆಟ್ಟದಲ್ಲಿನ ಸುಮಾರು 1560 ಅರಣ್ಯ ಪ್ರದೇಶವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇಲಾಖೆಯ ಅಧಿಕಾರಿಗಳು ತಂತಿ ಬೇಲಿ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಬೆಟ್ಟದ ಮೇಲೆ ಇರುವ ಗ್ರಾಮ ವ್ಯಾಪ್ತಿಯ ಸುತ್ತ ಬೇಲಿ ನಿರ್ಮಾಣ ಮಾಡಲಾಗುತ್ತಿದೆ. ಈ ಸಂಬಂಧ ಈಗಾಗಲೇ ಟೆಂಡರ್ ಪ್ರಕ್ರಿಯೆ ಕೂಡ ಪೂರ್ಣಗೊಂಡಿದ್ದು, ಅತೀ ಶೀಘ್ರದಲ್ಲೇ ಕಾಮಗಾರಿಯನ್ನು ಆರಂಭಿಸಿ ಮುಂದಿನ ಒಂದೂವರೆ ತಿಂಗಳಿನಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುವ ವಿಶ್ವಾಸವನ್ನು ಅರಣ್ಯಾಧಿಕಾರಿಗಳು ಹೊಂದಿದ್ದಾರೆ.

ಈ ಸಂಬಂಧ ಮಾತನಾಡಿದ ಡಿಸಿಎಫ್ ಕೆ.ಸಿ.ಪ್ರಶಾಂತ್, ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುವ ಜಾಗದ ಅತಿಕ್ರಮಣ ತಡೆ ಗಟ್ಟುವ ಉದ್ದೇಶದಿಂದ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಜೊತೆಗೆ ಕಾಡುಪ್ರಾಣಿಗಳು ಬೆಟ್ಟದಲ್ಲಿನ ಗ್ರಾಮಕ್ಕೆ ನುಗ್ಗುವುದನ್ನು ತಡೆಗಟ್ಟಲೂ ಕೂಡ ಇದು ನೆರವಾಗುತ್ತದೆ ಎಂದು ತಿಳಿಸಿದರು.
ಬೆಟ್ಟದ ಮೇಲೆ ಅರಣ್ಯ ಪ್ರದೇಶಕ್ಕೆ ಸೇರಿದ ಜಾಗವನ್ನು ಒತ್ತುವರಿ ಮಾಡಿಕೊಂಡು ಗ್ರಾಮಸ್ಥರು ಮನೆ ನಿರ್ಮಿಸಿ ಕೊಳ್ಳಲು ಮುಂದಾಗುತ್ತಿರುವುದನ್ನು ಗಮನಿಸಿದ ಅರಣ್ಯ ಇಲಾಖೆ ಮೀಸಲು ಅರಣ್ಯ ಒತ್ತುವರಿಯಾಗುದನ್ನು ತಡೆಗಟ್ಟಲು ಹಾಗೂ ಬೆಟ್ಟದಲ್ಲಿರುವ ಕಾಡುಹಂದಿ, ಮುಳ್ಳುಹಂದಿ, ಚಿರತೆಗಳು ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿದ್ದ ಹಿನ್ನೆಲೆಯಲ್ಲಿ ಇದೀಗ ಬೆಟ್ಟದ ಮೇಲೆ ಗ್ರಾಮದ ಸುತ್ತ 1.3 ಕಿಮೀ ವಿಸ್ತೀರ್ಣ ದಲ್ಲಿ ಬೇಲಿ ಅಳವಡಿಸುವುದಕ್ಕೆ ಕ್ರಮ ಕೈಗೊಂಡಿದೆ.
ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಒಂದೂವರೆ ತಿಂಗಳಲ್ಲಿ ಬೇಲಿ ನಿರ್ಮಿಸಿ, ಅರಣ್ಯ ಮೀಸಲು ಪ್ರದೇಶ ಸರಹದ್ದು ಗುರುತಿಸಿ ಒತ್ತುವರಿಗೆ ಶಾಶ್ವತ ಕಡಿವಾಣ ಹಾಕಲಾಗುತ್ತದೆಎಂದರು.












Click it and Unblock the Notifications