ಕಾವೇರಿ ಆದೇಶ: 'ಕುಡಿಯೋಕೇ ನೀರಿಲ್ಲ, ಕೊಡೋದಾದ್ರೂ ಹೇಗೆ?'
ಮೈಸೂರು, ಮೇ 29: ಕೃಷ್ಣರಾಜ ಸಾಗರ ಅಣೆಕಟ್ಟೆಯಿಂದ ತಮಿಳುನಾಡಿಗೆ 9.19 ಟಿಎಂಸಿ ನೀರನ್ನು ಬಿಡಬೇಕೆಂಬ ಕಾವೇರಿ ನಿರ್ವಹಣಾ ಮಂಡಳಿ ಪ್ರಾಧಿಕಾರದ ಆದೇಶವನ್ನು ಹಾಗೂ ರಾಜ್ಯ ಸರ್ಕಾರ ಜಿಂದಾಲ್ ಕಾರ್ಖಾನೆಗೆ 3,667 ಎಕರೆ ಭೂಮಿಯನ್ನು ಮಾರಾಟ ಮಾಡುತ್ತಿರುವುದನ್ನು ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ವಿರೋಧಿಸಿದ್ದಾರೆ.
ರೈತ ಸಂಘದ ಸದ್ದಡಗಿಸಲು ಜೆಡಿಎಸ್ ತಂತ್ರ:ಬಡಗಲಪುರ ನಾಗೇಂದ್ರ ಆರೋಪ
ಈಗಾಗಲೇ ರಾಜ್ಯದಲ್ಲಿ ಜನ ಬರದ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಇರುವ ಫಸಲನ್ನು ರಕ್ಷಣೆ ಮಾಡಲು ಸಾಧ್ಯವಾಗದೆ ಫಸಲು ಒಣಗಿ ನಷ್ಟದ ಆತಂಕ ಎದುರಾಗಿದೆ. ಕುಡಿಯುವ ನೀರನ್ನು ಒದಗಿಸಲು ಅಣೆಕಟ್ಟೆಯಲ್ಲಿ ನೀರಿಲ್ಲದಿದ್ದರೂ ಕಾವೇರಿ ನಿರ್ವಹಣಾ ಮಂಡಳಿ ಈ ತೀರ್ಮಾನ ವ್ಯಕ್ತಪಡಿಸಿರುವುದು ಅವೈಜ್ಞಾನಿಕ ಮಾತ್ರವಲ್ಲದೆ, ರೈತರ ಪಾಲಿಗೆ ಅಮಾನವೀಯ ನಡವಳಿಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ರಾಜ್ಯ ಸರ್ಕಾರ ಜಿಂದಾಲ್ ಕಂಪನಿಯ ಮಾಲೀಕತ್ವಕ್ಕೆ 3,667 ಎಕರೆ ಸರ್ಕಾರಿ ಭೂಮಿಯನ್ನು ಒಪ್ಪಿಸುತ್ತಿರುವ ಹಿಂದೆ ಯಾವುದೋ ಹುನ್ನಾರ ಅಡಗಿದೆ. ಸರ್ಕಾರಿ ಭೂಮಿಯನ್ನು ಕಂಪೆನಿಗಳಿಗೆ ಮಾರಾಟ ಮಾಡುವುದು ಒಂದು ಕೆಟ್ಟ ನೀತಿ ಎಂದರು.
ಕಾವೇರಿ ನೀರಿನ ವಿಷಯವಾಗಿ ರಾಜ್ಯ ಸರ್ಕಾರ ಮಣಿಯದೆ ರಾಜ್ಯದ ರೈತರನ್ನು ರಕ್ಷಣೆ ಮಾಡಬೇಕು ಹಾಗೂ ಜಿಂದಾಲ್ ಕಂಪೆನಿಗೆ ಸರ್ಕಾರಿ ಭೂಮಿಯನ್ನು ಮಾರಾಟ ಮಾಡದೆ ಕೃಷಿಗೆ ಬಳಸಿಕೊಳ್ಳಬೇಕು. ಇದು ತಪ್ಪಿದರೆ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.