ಆಸ್ಪತ್ರೆಯಲ್ಲಿ 64ನೇ ಹುಟ್ಟು ಹಬ್ಬ ಆಚರಿಸಿಕೊಂಡ ಸಚಿವ ಮಹದೇವಪ್ಪ
ಮೈಸೂರು, ಏಪ್ರಿಲ್ 20 : ಮೈಸೂರು ಜಿಲ್ಲಾ ಹಾಗೂ ಲೋಕೋಪಯೋಗಿ ಸಚಿವ ಡಾ.ಹೆಚ್ ಸಿ ಮಹದೇವಪ್ಪ ಅವರು ತಮ್ಮ 64ನೇ ಹುಟ್ಟು ಹಬ್ಬವನ್ನು ಗುರುವಾರ ಆಚರಿಸಿಕೊಂಡರು.
ಕಾಲು ನೋವಿನ ಸಮಸ್ಯೆಯಿಂದಾಗಿ ಮೈಸೂರಿನ ಕುವೆಂಪುನಗರದಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿರುವ ಡಾ ಎಚ್ ಸಿ.ಮಹದೇವಪ್ಪ ಅವರ ಅಭಿಮಾನಿಗಳು ಆಸ್ಪತ್ರೆಯಲ್ಲಿಯೇ ಕೇಕ್ ಕತ್ತರಿಸಿ ಅವರಿಗೆ ತಿನ್ನಿಸುವ ಮೂಲಕ ಜನ್ಮದಿನವನ್ನು ಆಚರಿಸಿ ಶುಭ ಕೋರಿದರು.
ಪ್ರೊ.ರಾಜಣ್ಣರನ್ನು ವಜಾಗೊಳಿಸುವಂತೆ ಪ್ರತಿಭಟನೆ:
ಹಾಸ್ಟೆಲ್ ವಿದ್ಯಾರ್ಥಿನಿಯರ ಕುರಿತಾಗಿ ಅಪಪ್ರಚಾರ ಮಾಡಿ ಮೈಸೂರು ವಿವಿಯ ಘನತೆಗೆ ಧಕ್ಕೆ ತರುತ್ತಿರುವ ಕುಲಸಚಿವ ಪ್ರೊ.ಆರ್.ರಾಜಣ್ಣನವರನ್ನು ತಕ್ಷಣ ವಜಾಗೊಳಿಸುವಂತೆ ಒತ್ತಾಯಿಸಿ ಮಾನಸ ಗಂಗೋತ್ರಿಯ ಕ್ಲಾಕ್ ಟವರ್ ಬಳಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಇದೇ ವೇಳೆ ಮಾತಾನಾಡಿದ ಪ್ರತಿಭಟನಾಕಾರರು, ಏಪ್ರಿಲ್ 1 ರಂದು ವಿದ್ಯಾರ್ಥಿನಿಯರು ಕುಲಪತಿಗಳನ್ನು ಭೇಟಿ ಮಾಡಿ ಹಾಸ್ಟೆಲ್ ನಲ್ಲಿರುವ ತಮ್ಮ ಮೂಲಭೂತ ಸಮಸ್ಯೆಗಳನ್ನು ತಿಳಿಸಿ ಮನವಿ ಸಲ್ಲಿಸಿದ್ದೆವು.
ಏ.12 ರಂದು ಪ್ರಭಾರ ಕುಲಪತಿ ದಯಾನಂದ ಮಾನೆ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ಹಾಸ್ಟೆಲ್ ಗಳಿಗೆ ಪರಿಶೀಲನೆಗಾಗಿ ಇತರ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದರು.
ಇದನ್ನೇ ತಮ್ಮ ಅನುಕೂಲಕ್ಕಾಗಿ ಬಳಸಿಕೊಂಡಿರುವ ಹಾಸ್ಟೆಲ್ ವಾರ್ಡನ್ ಪ್ರೊ.ರೇಖಾ ಜಾಧವ್ ಮತ್ತು ಕುಲಸಚಿವ ಪ್ರೊ.ರಾಜಣ್ಣ ಅವರು ಸಿಸಿ ಟಿವಿಯ ಎಲ್ಲಾ ದೃಶ್ಯಗಳನ್ನು ಮಾಧ್ಯಮಗಳಿಗೆ ನೀಡದೆ ಪ್ರೊ.ಮಾನೆ ಅವರ ಬಗ್ಗೆ ಅಪಪ್ರಚಾರ ಮಾಡಬೇಕೆಂಬ ದುರುದ್ದೇಶದಿಂದ ವಿವಾದ ಸೃಷ್ಟಿಸಬೇಕಾದಷ್ಟು ದೃಶ್ಯಾವಳಿಯನ್ನು ಮಾತ್ರ ನೀಡಿದ್ದಾರೆ ಎಂದು ದೂರಿದರು.
ಕುಲಸಚಿವರು ವಿದ್ಯಾರ್ಥಿನಿಯರಿಗೆ ಮಾನಸಿಕ ಕಿರಿಕಿರಿ ಉಂಟಾಗುವಂತೆ ಮಾಡಿದ್ದಾರೆ. ಹೀಗಾಗಿ ಮೈಸೂರು ವಿವಿ ಮತ್ತು ವಿದ್ಯಾರ್ಥಿನಿಯರ ಘನತೆಗೆ ಧಕ್ಕೆ ತಂದು ಅಪಪ್ರಚಾರ ಮಾಡುತ್ತಿರುವ ಕುಲಸಚಿವ ಪ್ರೊ.ಆರ್.ರಾಜಣ್ಣ ಅವರನ್ನು ಈ ಕೂಡಲೇ ಆ ಹುದ್ದೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.