ನಮ್ಮ ಶಾಪದಿಂದಲೇ 'ಮಹಾ' ಬಿಜೆಪಿ ಸರ್ಕಾರ ಪತನ: ಶಿವಲಿಂಗೇಗೌಡ
ಮೈಸೂರು, ಡಿಸೆಂಬರ್ 03: ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಅಂದು ನಮಗೆ ಮುಂಬೈನಲ್ಲಿ ಮಾಡಿದ ಅನ್ಯಾಯದಿಂದಲೇ ಸರ್ಕಾರ ಕಳೆದುಕೊಳ್ಳುವಂತಾಯಿತು. ಇದು ನಮ್ಮ ಶಾಪದ ಪ್ರತಿಫಲ ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ಆಕ್ರೊಶ ವ್ಯಕ್ತಪಡಿಸಿದರು.
ಇಂದು ಹುಣಸೂರು ಕ್ಷೇತ್ರದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಅನರ್ಹ ಶಾಸಕರು ಮುಂಬೈಗೆ ಹೋಗಿದ್ದರು, ಅದರಿಂದಾಗಿ ಕುಮಾರಸ್ವಾಮಿ ಸರ್ಕಾರ ಬೀಳುವಂತಾಯಿತು ಎಂದು ತಿಳಿಸಿದರು.
ನೀವು ನೀಡಿದ ತೀರ್ಪಿಗೆ ಅವರು ದ್ರೋಹ ಮಾಡಿ ಹೋಗಿದ್ದರಿಂದಲೇ ಅನರ್ಹಗೊಳ್ಳಬೇಕಾಯಿತು, ಈ ಉಪ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಮತದಾರರಿಗೆ ಹೇಳಿದರು. ಮುಂಬೈ ನಾಟಕವನ್ನು ನೀವು ಕೊನೆಗಾಣಿಸಬೇಕೆಂದರು.

ಅವತ್ತು ನಾವು ಈ 17 ಶಾಸಕರನ್ನು ಹುಡುಕಿಕೊಂಡು ಮುಂಬೈಗೆ ಹೋಗಿದ್ದಾಗ, ಅಲ್ಲಿ ಹೋಟೆಲ್ ನಲ್ಲಿ ಶಾಸಕರನ್ನು ಕೂಡಿ ಹಾಕಿದ್ದರು, ಅಂದಿನ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೋಟೆಲ್ ಒಳಗೆ ಹೋಗಲು ಅವಕಾಶ ಕೊಡದೇ ನಡು ರಸ್ತೆಯಲ್ಲಿ ನಿಲ್ಲಿಸಿದ್ದರು. ನಮಗೆ ಅಂದು ಮೋಸದಿಂದಲೇ ಅವರ ಅಧಿಕಾರ ಹೋಯಿತು ಎಂದು ವಾಗ್ದಾಳಿ ನಡೆಸಿದರು.
ಅವತ್ತು ನಾವು ಅಲ್ಲಿಗೆ ಹೋದಾಗ ಮುಂಬೈ ಗೊತ್ತಿಲ್ಲ, ಅಲ್ಲಿ ಭಾಷೆ ಗೊತ್ತಿಲ್ಲ ಆದರೆ ಮುಂಬೈ ಪೊಲೀಸರು ಜೀಪಿನಲ್ಲಿ ಕರೆದುಕೊಂಡು ಹೋಗಿ ಸಂಜೆವರೆಗೂ ಮುಂಬೈ ಸುತ್ತಿಸಿದರು, ನಮಗೆ ಕಾಟ ಕೊಟ್ಟ ಕಾರಣದಿಂದಲೇ ನಮ್ಮ ಶಾಪ ಅವರಿಗೆ ತಟ್ಟಿತು, ಬಹುಮತ ಸಾಬೀತು ಮಾಡಲಾಗದೇ ಮೂರೇ ದಿನಕ್ಕೆ ಅಧಿಕಾರ ಕಳೆದುಕೊಳ್ಳಬೇಕಾಯಿತು ಎಂದು ಟೀಕಿಸಿದರು.
ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಹೆಚ್.ವಿಶ್ವನಾಥ್, ಕಾಂಗ್ರೆಸ್ ನಿಂದ ಹೆಚ್.ಪಿ.ಮಂಜುನಾಥ್, ಜೆಡಿಎಸ್ ನಿಂದ ಸೋಮಶೇಖರ್ ಉಪ ಚುನಾವಣಾ ಆಖಾಡದಲ್ಲಿದ್ದಾರೆ. ಡಿಸೆಂಬರ್ 05 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 09 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.












Click it and Unblock the Notifications