ಸಂದರ್ಶನ: 'ಬಿಗ್ ಬಾಸ್' ಜಯಶ್ರೀನಿವಾಸನ್ ಬಿಜೆಪಿ ಸೇರ್ಪಡೆ ಖಾತ್ರಿ
Recommended Video

ಮೈಸೂರು, ಫೆಬ್ರವರಿ 20 : ಈ ಸಂಖ್ಯಾಶಾಸ್ತ್ರಜ್ಞರ ಹೆಸರು ಜಯಶ್ರೀನಿವಾಸನ್. ಹೀಗೆ ಪರಿಚಯ ಹೇಳುತ್ತಿದ್ದ ಹಾಗೆ, ಓ ಅವರಾ ಗೊತ್ತು, ಟಿವಿಯಲ್ಲಿ ಕಾರ್ಯಕ್ರಮ ನೋಡುತ್ತಿದ್ದವಲ್ಲಾ! ಎಂಬ ಉತ್ತರ ಸಿಗುತ್ತದೆ. ಬಿಗ್ ಬಾಸ್ ಕನ್ನಡ ಸೀಸನ್ ಐದರ ಸ್ಪರ್ಧೆಯಿಂದಾಗಿ ಜಯಶ್ರೀನಿವಾಸನ್ ಹೆಸರು ಗಳಿಸಿದವರಲ್ಲ. ಆ ವೇದಿಕೆ ಅವರ ಪಾಲಿಗೆ ಹೊಸ ಅನುಭವ ಅಷ್ಟೇ.
ಅದಕ್ಕೂ ಮುಂಚಿನಿಂದಲೂ ಸಂಖ್ಯಾಶಾಸ್ತ್ರ ಜ್ಯೋತಿಷಿಯಾಗಿ, ಅದನ್ನು ಹೇಳಿಕೊಡುವ ಗುರುವಾಗಿ ಕರ್ನಾಟಕದಲ್ಲೇ ಹೆಸರು ಮಾಡಿದವರು ಜಯಶ್ರೀನಿವಾಸನ್. ಈಚೆಗೆ ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡು ತಮ್ಮ ಮಾತಿನ ಶೈಲಿ ಹಾಗೂ ರಗಡ್ ಲುಕ್ ನಲ್ಲೇ ಸಕತ್ ಫೇಮಸ್ ಜಯಶ್ರೀನಿವಾಸನ್.
ಅನೇಕ ರಾಜಕಾರಣಿಗಳು, ನಾಯಕ ನಟರು ಇವರ ನ್ಯೂಮರಾಲಜಿಯನ್ನು ಫಾಲೋ ಮಾಡುತ್ತಿದ್ದಾರೆ ಕೂಡ. ಇಂತಹ ವ್ಯಕ್ತಿ ಕೆಲವು ದಿನಗಳಿಂದಲೂ ಬಿಜೆಪಿಯ ಹಲವು ಕಾರ್ಯಕ್ರಮಗಳಲ್ಲಿ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ. ಸೋಮವಾರ ಮೈಸೂರಿನ ಬಿಜೆಪಿ ಪರಿವರ್ತನಾ ಸಮಾವೇಶದಲ್ಲೂ ಕಂಡುಬಂದಿದ್ದರು. ಅವರನ್ನೇ ಪ್ರಶ್ನಿಸಲು ತೆರಳಿದಾಗ ಜಯಶ್ರೀನಿವಾಸನ್ ರಾಜಕೀಯ ಪ್ರವೇಶದ ಬಗ್ಗೆ ಇರುವ ಎಲ್ಲ ಗೊಂದಲಗಳಿಗೂ ತೆರೆ ಎಳೆದಿದ್ದಾರೆ. ಇಲ್ಲಿದೆ ಒನ್ಇಂಡಿಯಾ ಕನ್ನಡ ನಡೆಸಿದ ಅವರ ಸಂದರ್ಶನ.

ಪ್ರಶ್ನೆ: ನೀವು ಬಿಜೆಪಿ ಸೇರುತ್ತೀರಾ ಎಂಬ ಗಾಳಿ ಸುದ್ದಿಯಿದೆ, ನಿಜವೇ ?
ಜಯಶ್ರೀನಿವಾಸನ್: ಹೌದು, ಆದರೆ ಅದು ಗಾಳಿ ಸುದ್ದಿಯಲ್ಲ. ನಾನು ಬಿಜೆಪಿ ಸೇರುತ್ತಿದ್ದೇನೆ. ನನಗೆ ಇಲ್ಲಿನ ತತ್ವ, ಸಿದ್ಧಾಂತಗಳ ಬಗ್ಗೆ ಒಲವಿದೆ. ಹಾಗಾಗಿ ಕೆಲವೇ ದಿನಗಳಲ್ಲಿ ಬಿಜೆಪಿಯನ್ನು ಸೇರಲಿದ್ದೇನೆ.

ಪ್ರಶ್ನೆ: ಬಿಜೆಪಿ ಸೇರ್ಪಡೆ ಕುರಿತಾಗಿ ಯಾರಾದರೂ ಮುಖಂಡರು ನಿಮ್ಮ ಹತ್ತಿರ ಮಾತುಕತೆ ನಡೆಸಿದ್ದಾರಾ?
ಜಯಶ್ರೀನಿವಾಸನ್: ಬಿಜೆಪಿ ಸೇರುವುದು ನನ್ನ ವೈಯಕ್ತಿಕ ನಿಲವು. ನಾನು ಹುಟ್ಟಿದಾಗಿನಿಂದ ಹಿಂದೂ. ಇಲ್ಲಿನ ತತ್ವ- ಸಿದ್ಧಾಂತಗಳಿಂದ ಉತ್ತೇಜಿತನಾಗಿದ್ದೇನೆ. ನನಗೆ ಮುಂಚಿನಿಂದಲೂ ಕಮಲ ಪಕ್ಷಕ್ಕೆ ಸೇರಬೇಕೆಂಬ ಹಂಬಲವಿತ್ತು. ಈಗ ಅದು ಸಾಕಾರಗೊಂಡಿದೆ. ನನ್ನ ಬಳಿ ಯಾವ ಮುಖಂಡರೂ ಮಾತುಕತೆ ನಡೆಸಿಲ್ಲ. ಇದು ನನ್ನ ಸ್ವಂತ ನಿರ್ಧಾರ ಹಾಗೂ ಸ್ವ ಇಚ್ಛೆ.

ಪ್ರಶ್ನೆ: ಬಿಜೆಪಿಯ ಯಾವ ನಿಲುವುಗಳಿಂದ ಪ್ರೇರಿತರಾಗಿ ಪಕ್ಷ ಸೇರ್ಪಡೆಗೊಳ್ಳುತ್ತಿದ್ದೀರಿ?
ಜಯಶ್ರೀನಿವಾಸನ್: ಬಿಜೆಪಿಯಲ್ಲಿನ ಧುರೀಣರು ಹಾಗೂ ನರೇಂದ್ರ ಮೋದಿ ಅವರ ಕನಸಿನ ಭಾರತದ ನಿಲುವು ಹೆಚ್ಚು ಪ್ರೇರಿತವಾಗಿದೆ. ಬಿಜೆಪಿಯ ಅನೇಕ ಮುಖಂಡರು ತಳಮಟ್ಟದಿಂದ ಮೇಲೆ ಬಂದವರು. ಈ ವಿಷಯವೇ ಬಿಜೆಪಿ ಸೇರಲು ಪ್ರೇರಕ ಶಕ್ತಿ.

ಪ್ರಶ್ನೆ: ಬಿಜೆಪಿ ಸೇರ್ಪಡೆಗೆ ದಿನಾಂಕ ನಿಗದಿಯಾಗಿದೆಯೇ ?
ಜಯಶ್ರೀನಿವಾಸನ್: ಈ ತಿಂಗಳೊಳಗಾಗಿ ಬಿಜೆಪಿ ಸೇರ್ಪಡೆಗೊಳ್ಳಬೇಕೆಂದು ಯಡಿಯೂರಪ್ಪನವರ ಬಳಿ ಮಾತುಕತೆ ನಡೆಸಿದ್ದೆ. ಆದರೆ ಕಾರಣಾಂತರಗಳಿಂದ ಮುಖಂಡರು ಪಕ್ಷದ ವರಿಷ್ಠರ ಕಾರ್ಯಕ್ರಮಗಳಲ್ಲಿ ಬಿಜಿಯಾಗಿದ್ದಾರೆ. ನಾನು ಮಾತನಾಡಿ, ಮಾರ್ಚ್ 15ರೊಳಗೆ ಬಿಜೆಪಿ ಸೇರ್ಪಡೆಗೊಳ್ಳುತ್ತೇನೆ.

ಪ್ರಶ್ನೆ: ಈ ರೀತಿಯ ನಿರ್ಧಾರ ಚುನಾವಣೆ ಹತ್ತಿರ ಬರುತ್ತಿರುವಂತೆಯೇ ಏಕೆ ತೆಗೆದುಕೊಂಡಿರಿ? ಅಕಸ್ಮಾತ್ ಈ ಬಾರಿ ಟಿಕೆಟ್ ಸಿಕ್ಕರೆ ಸ್ಪರ್ಧಿಸುತ್ತೀರಾ?
ಜಯಶ್ರೀನಿವಾಸನ್: ನಾನು ಪಕ್ಷಕ್ಕೆ ಸೇರುತ್ತಿರುವುದು ಕಾರ್ಯಕರ್ತನಾಗಿಯೇ ಹೊರತು ಟಿಕೆಟ್ ಆಕಾಂಕ್ಷಿಯಾಗಿ ಖಂಡಿತಾ ಅಲ್ಲ. ನನಗೆ ಚುನಾವಣೆಯಲ್ಲಿ ಸ್ಫರ್ಧಿಸಬೇಕೆಂಬ ಅಪೇಕ್ಷೆ ಇದೆ. ಆದರೆ ಈಗಲ್ಲ. ಅದಕ್ಕೆ ಪಕ್ಷದ ವರಿಷ್ಠರೂ ಅಸ್ತು ಎನ್ನಬೇಕಷ್ಟೆ. ನಾನು ಎಂದಿಗೂ ಅವರ ಬಳಿ ಹೋಗಿ ಟಿಕೆಟ್ ಕೊಡಿ ಎಂದು ಕೇಳುವುದಿಲ್ಲ. ಆದರೆ ಟಿಕೆಟ್ ಸಿಕ್ಕರೆ ಖಂಡಿತಾ ಸ್ಪರ್ಧಿಸುತ್ತೇನೆ.

ಪ್ರಶ್ನೆ: ಈ ಬಾರಿಯ ಬಿಜೆಪಿ ಚುನಾವಣಾ ಪ್ರಚಾರದಲ್ಲಿ ನಿಮ್ಮನ್ನು ಕಾಣಬಹುದೇ?
ಜಯಶ್ರೀನಿವಾಸನ್: ಹೌದು, ಕಾಣಬಹುದು. ನಾನು ಚುನಾವಣೆ ಪ್ರಚಾರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತೇನೆ. ಪಕ್ಷದ ವರಿಷ್ಠರು ಎಲ್ಲಿ ಸೂಚಿಸುತ್ತಾರೋ ಅಲ್ಲಿ ತೆರಳಿ ಪ್ರಚಾರಕ್ಕೆ ಮುಂದಾಗುತ್ತೇನೆ.

ಪ್ರಶ್ನೆ: ಹಾಗಾದರೆ ನಿಮ್ಮ ಚಿತ್ರದ ಪಾತ್ರಗಳಿಗೆ ಹೇಗೆ ನ್ಯಾಯ ಒದಗಿಸುತ್ತೀರಿ ?
ಜಯಶ್ರೀನಿವಾಸನ್: ಈಗಾಗಲೇ ನಾನು 2 ಚಿತ್ರಗಳಿಗೆ ಸಹಿ ಹಾಕಿದ್ದೇನೆ ಹಾಗೂ ಒಪ್ಪಿಕೊಂಡಿದ್ದೇನೆ. Y5=X ಎಂಬ ಸಸ್ಪೆನ್ಸ್ ಹಾಗೂ ಹಾರರ್ ಚಿತ್ರಕ್ಕೆ ಸಹಿ ಹಾಕಿದ್ದೇನೆ. ಇದು ಸಂಪೂರ್ಣ ನನ್ನ ಪಾತ್ರದ ಮೇಲೆ ಆಧಾರಿತವಾದ ಕಥಾ ವಸ್ತು. ವಿಷ್ಣುವರ್ಧನ್ ಎಂಬ ಪೊಲೀಸ್ ಪಾತ್ರದಲ್ಲಿ ನಾನು ಇಲ್ಲಿ ನಟಿಸುತ್ತಿದ್ದೇನೆ. ನಾನೇ ಇದಕ್ಕೆ ಹೀರೋ. ಇದಕ್ಕಾಗಿ ಮನೆಯಲ್ಲಿ ವರ್ಕೌಟ್ ಸಹ ಮಾಡುತ್ತಿದ್ದೇನೆ. ಚಿತ್ರಕ್ಕಾಗಿ ನಾನು 10 ಕೆ.ಜಿ ತೂಕ ಹೆಚ್ಚಾಗಬೇಕಿದೆ.
ಅಷ್ಟೇ ಅಲ್ಲ, ದಯಾಳ್ ಪದ್ಮನಾಭನ್ ಅವರ ಚಿತ್ರಕ್ಕೂ ಸಹಿ ಹಾಕಿದ್ದೇನೆ. ಈ ಚಿತ್ರಗಳ ಶೂಟಿಂಗ್ ಇದೇ ಮಾರ್ಚ್ 30ರೊಳಗೆ ಕೊನೆಗೊಳ್ಳಲಿದೆ. ಆ ನಂತರ ನಾನು ಸಂಪೂರ್ಣವಾಗಿ ಪಕ್ಷದ ಕೆಲಸದಲ್ಲಿ ತೊಡಗಿಕೊಳ್ಳುತ್ತೇನೆ.












Click it and Unblock the Notifications