ಕಂಪನಿಯಲ್ಲಿ ಕಳ್ಳತನ; ವಿಚಾರಣೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ನೌಕರ
ಮೈಸೂರು, ಅಕ್ಟೋಬರ್ 30: ಕಂಪನಿಯೊಂದರಲ್ಲಿ ಕಳ್ಳತನ ನಡೆದಿದ್ದು, ಈ ಹಿನ್ನೆಲೆಯಲ್ಲಿ ಆ ಕಂಪನಿಯ ನೌಕರನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಹೊರವಲಯದಲ್ಲಿರುವ ಹೂಟಗಳ್ಳಿಯ ಸ್ಪೆಕ್ಟ್ರಾ ಪೈಪ್ಸ್ ಕಂಪನಿ ಉದ್ಯೋಗಿ ಹರೀಶ್ ಕುಮಾರ್ (42) ಮಂಗಳವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಕೆಲವು ದಿನಗಳ ಹಿಂದೆ ಸ್ಪೆಕ್ಟ್ರಾ ಪೈಪ್ ಕಂಪೆನಿಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಪದಾರ್ಥಗಳ ಕಳ್ಳತನವಾಗಿತ್ತು. ಉದ್ಯೋಗಿ ಹರೀಶ್ ಕುಮಾರ್ ಅವರೇ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಈ ನಡುವೆ ಪೊಲೀಸರ ವಿಚಾರಣೆಗೆ ಹೆದರಿ ಹರೀಶ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಹಾಗೆಯೇ ಕಂಪನಿಯಲ್ಲಿ ಕಿರುಕುಳ ಕೊಡಲಾಗುತ್ತಿತ್ತೆಂದು ಹರೀಶ್ ಕುಮಾರ್ ಡೈರಿಯಲ್ಲಿ ಉಲ್ಲೇಖಿಸಿರುವುದಾಗಿ ಕುಟುಂಬದವರು ಹೇಳಿಕೆ ನೀಡಿದ್ದಾರೆ.
ಹರೀಶ್ ಕುಮಾರ್ ಡೈರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ಕಳ್ಳತನಕ್ಕೂ ಹರೀಶ್ ಕುಮಾರ್ ಗೂ ಸಂಬಂಧ ಇದೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಕಂಪನಿ ಮಾಲೀಕ ಅನಿಲ್ ಮೆಹ್ರಾ ಭೇಟಿ ನೀಡಿದ್ದು, ಮಾಲೀಕನ ವಿರುದ್ಧ ಕುಟುಂಬಸ್ಥರು ತಿರುಗಿಬಿದ್ದರು. ಈ ವೇಳೆ ಹರೀಶ್ ಕುಮಾರ್ ಸನ್ನಡತೆಯವರು ಎಂದು ಮಾಲೀಕರು ಸಮರ್ಥಿಸಿಕೊಂಡರು. ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.












Click it and Unblock the Notifications