ದಸರೆಯಲ್ಲಿ ಗಾಂಭೀರ್ಯದ ಹೆಜ್ಜೆಹಾಕಲು ಸಜ್ಜಾಗುತ್ತಿದೆ ಗಜಪಡೆ
ಮೈಸೂರು, ಆಗಸ್ಟ್ 19 : ಸೆ.30ರಿಂದ ಅ.8ರವರೆಗೆ ನಡೆಯಲಿರುವ ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸಲು ವಿವಿಧ ಕ್ಯಾಂಪ್ ಗಳಲ್ಲಿರುವ ಆನೆಗಳು ಸಿದ್ಧವಾಗುತ್ತಿವೆ.
ಇದೇ ಮೊದಲ ಬಾರಿಗೆ ಮೈಸೂರು ದಸರೆಗೆ ಆಗಮಿಸಲಿರುವ ಬಂಡೀಪುರದ ಅರಣ್ಯದಲ್ಲಿ ಜೆ.ಪಿ.ಎಂದೇ ಖ್ಯಾತಿ ಪಡೆದಿರುವ ಜಯಪ್ರಕಾಶ್ (57) ಗಂಡು ಆನೆಯನ್ನು ಮಾವುತ ತಯಾರಿಗೊಳಿಸುತ್ತಿದ್ದಾರೆ. ಜಂಬೂ ಸವಾರಿಗೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಮತ್ತೊಂದು ಆನೆ ಸಹ ಸಜ್ಜಾಗುತ್ತಿದೆ.

ಬಂಡೀಪುರ ರಾಷ್ಟ್ರೀಯ ಉದ್ಯಾನದ ಆನೆ ಕ್ಯಾಂಪ್ ನಲ್ಲಿರುವ ಜಯಪ್ರಕಾಶ್, ರೋಹಿತ್ ಗೆ ಅರಣ್ಯ ಇಲಾಖೆ ಉತ್ತಮವಾದ ಆಹಾರ ನೀಡುತ್ತಿದೆ. ಈ ಆನೆಗಳೊಂದಿಗೆ ಮಾವುತರಾದ ಗಣೇಶ, ಕಾವಾಡಿಗ ಬಂಡೀಪುರ ಬಸವರಾಜು ಸಹ ಆಗಮಿಸುತ್ತಿದ್ದಾರೆ. ಬಂಡೀಪುರದ 17 ವರ್ಷದ ಹೆಣ್ಣಾನೆ ಲಕ್ಷ್ಮಿ, ಅಲ್ಲದೆ ಬಿಳಿಗಿರಿ ರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿಯಲ್ಲಿನ ದುರ್ಗಾಪರಮೇಶ್ವರಿ ಆನೆಯೂ ಮೈಸೂರು ದಸರಾ ಜಂಬು ಸವಾರಿಗೆ ತೆರಳಲಿವೆ.
ಎರಡು ತಿಂಗಳ ಹಿಂದೆ ಧನಂಜಯ ಹಾಗೂ ಗೋಪಿ ಹೆಸರಿನ ಆನೆಗೆ ಮದವೇರಿತ್ತು. ಕಾಡಿಗೆ ಬಿಟ್ಟಿದ್ದ ವೇಳೆ ಅರಣ್ಯದೊಳಗೆ ಹೆಣ್ಣಾನೆ ಸಾಂಗತ್ಯ ಅರಸಿಕೊಂಡು, ನಾಲ್ಕೈದು ದಿನ ಕಾಡಿನಲ್ಲಿ ಉಳಿದಿದ್ದವು. ಅಲ್ಲದೇ, ಆತಂಕ ಸೃಷ್ಟಿಸಿದ್ದವು. ನಂತರ, ದುಬಾರೆ ಮಾವುತರು ಹಾಗೂ ಕಾವಾಡಿಗರು ಸಾಕಾನೆಗಳೊಂದಿಗೆ ಕಾಡಿಗೆ ತೆರಳಿ, ಎರಡು ಆನೆಗಳನ್ನು ಮರಳಿ ಶಿಬಿರಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದರು. ಈ ಎರಡೂ ಆನೆಗಳನ್ನೂ ಜಂಬೂ ಸವಾರಿಗೆ ಈ ಬಾರಿ ಆಯ್ಕೆ ಮಾಡಿರುವುದು ವಿಶೇಷ.












Click it and Unblock the Notifications