ಮೈಸೂರು ಭಾಗದ ಹಲವೆಡೆ ವರುಣನ ಅಟಾಟೋಪ : ಜಿಲ್ಲಾಡಳಿತದಿಂದ ಖಡಕ್ ಸೂಚನೆ
ಮೈಸೂರು, ಆಗಸ್ಟ್ 8 : ಮಹಾಮಳೆಗೆ ಜನರು ತತ್ತರಿಸುತ್ತಿದ್ದು, ಮೈಸೂರು ಜಿಲ್ಲೆಯಲ್ಲೂ ವರುಣನ ಆರ್ಭಟ ಜೋರಾಗಿದೆ. ನಗರದಲ್ಲಿ ಜಿಟಿ- ಜಿಟಿ ಮಳೆಯಾಗುತ್ತಿದ್ದು, ಎಚ್ ಡಿ ಕೋಟೆ, ಹುಣಸೂರು, ಪಿರಿಯಾಪಟ್ಟಣ, ತಿ ನರಸೀಪುರ ತಾಲೂಕು ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ನಷ್ಟ ಉಂಟಾಗಿದೆ. ಮನೆ ಗೋಡೆಗಳು ಕುಸಿದು ಬಿದ್ದಿವೆ. ಬೆಳೆ ಹಾನಿಯಾಗಿದೆ. ಅನೇಕ ಮರಗಳು ಧರೆಗುರುಳಿವೆ.
ಮಹಾರಾಷ್ಟ್ರದಲ್ಲಿ ಮಹಾ ಮಳೆ, ದೋಣಿ ದುರಂತದಲ್ಲಿ 12 ಮಂದಿ ಸಾವು
ಕುರುಬರ ಹೊಸಹಳ್ಳಿ ಗ್ರಾಮದಲ್ಲಿ ಎರಡು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಕೆ.ಆರ್. ನಗರ ಕಸಬಾ ಹೋಬಳಿಯ ಮನೆಗಳು ನೆಲಸಮಗೊಂಡಿದ್ದು, ಜನರು ಪರಿತಪಿಸುವಂತಾಗಿದೆ. ವರುಣನ ರುದ್ರನರ್ತನದಿಂದ ಬೆಳೆ ಹಾನಿ ಸಂಭವಿಸಿದ್ದು, ಹುಣಸೂರು ತಾಲೂಕಿನ ಮುದಗನೂರಿನಲ್ಲಿ ಶಿವಕುಮಾರ ಎಂಬ ರೈತ ಬೆಳೆದಿದ್ದ ಶುಂಠಿ ಬೆಳೆ ಮಳೆಯಲ್ಲಿ ಕೊಚ್ಚಿ ಹೋಗಿದೆ.
ಇದೀಗ ರೈತ ಕಂಗಾಲಾಗಿದ್ದಾನೆ. ಎಚ್ ಡಿ ಕೋಟೆ ತಾಲೂಕಿನಲ್ಲಿ ಮಳೆಗೆ ಒಂಬತ್ತು ಮನೆಗಳು ಅಕ್ಷರಶಃ ಹಾನಿಗೊಳಗಾಗಿದೆ. ಇತ್ತ ಹನಗೋಡು ಭಾಗದಲ್ಲಿ 5 ಮನೆಗಳ ಗೋಡೆಗಳು ಕುಸಿದಿವೆ. ಲಕ್ಷ್ಮಣತೀರ್ಥ ನದಿಯಲ್ಲಿ ಪ್ರವಾಹ ಹೆಚ್ಚುತ್ತಲೇ ಇದ್ದು ಕೃಷಿ ಭೂಮಿ ಮುಳುಗಡೆಯಾಗಿದೆ.
ಬಹುತೇಕ ಶುಂಠಿ ಬೆಳೆ ನೀರಿನಲ್ಲಿ ಮುಳುಗಿದ್ದು, ಕೊಳೆಯುವ ಭೀತಿಯುಂಟಾಗಿದೆ. ಮಳೆ ಹೀಗೆ ಮುಂದುವರಿದರೆ ಪ್ರವಾಹ ಹೆಚ್ಚಾಗಿ ಹನಗೋಡು ಅಣೆಕಟ್ಟೆಯ ಹಿನ್ನೀರು ಬೆಳೆಗಳನ್ನು ಆವರಿಸುವ ಸಂಭವವಿದ್ದು, ರೈತರು ಆತಂಕಗೊಂಡಿದ್ದಾರೆ.
ಲಕ್ಷ್ಮಣತೀರ್ಥ ನದಿಯ ಪ್ರವಾಹದ ನೀರಿನಲ್ಲಿ ಜಾನುವಾರುವೊಂದು ಕೊಚ್ಚಿ ಹೋಗಿದೆ. ಎಚ್.ಡಿ.ಕೋಟೆ ಹಾಗೂ ಪಿರಿಯಾಪಟ್ಟಣ ತಾಲ್ಲೂಕಿನ ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.
ಕರ್ನಾಟಕ ಪ್ರವಾಹ: ಸಂತ್ರಸ್ತರಿಗೆ ನೆರವು ನೀಡುವುದು ಹೇಗೆ?
ಮೈಸೂರು ಜಿಲ್ಲೆಯಲ್ಲಿ ಮಳೆ ಹಿನ್ನಲೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್, ವೈನಾಡಿನಲ್ಲಿ ಮಳೆ ಹೆಚ್ಚಾಗಿರುವುದರ ಹಿನ್ನಲೆ ಕಬಿನಿ ಡ್ಯಾಂ ನಿಂದ 40 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದೇವೆ. ಇಂದು ಬೆಳಗಿನಿಂದ 60 ಸಾವಿರ ನಂತರ 80 ಸಾವಿರ ಕ್ಯೂಸೆಕ್ ನೀರನ್ನು ಕಬಿನಿ ಡ್ಯಾಂ ನಿಂದ ಹೊರಬಿಡಲಾಗಿದೆ ಎಂದರು.
ಕಳೆದ ವರ್ಷ ಮುಳುಗಡೆಯಾದ ಹಳ್ಳಿಗಳು ಕೂಡ ಈ ವರ್ಷ ಮುಳುಗಡೆಯಾಗಲಿದೆ. ಸುತ್ತ ಮುತ್ತಲಿನ ಜನರಿಗೆ ಸುರಕ್ಷಿತ ಸ್ಥಳಗಳ ಕಡೆ ಹೊರಡುವಂತೆ ಸೂಚನೆ ನೀಡಿದ್ದೇವೆ. ಎಲ್ಲಾ ತಾಲ್ಲೂಕುಗಳಿಗೆ ಹೈ ಅಲರ್ಟ್ ಘೋಷಿಸಿದ್ದೇವೆ. ಮಳೆ ಹಿನ್ನಲೆ ಶಾಲಾ ಕಾಲೇಜು ರಜೆ ಘೋಷಣೆ ಮಾಡಲಾಗಿದೆ. ಗಂಜಿ ಕೇಂದ್ರ ಸ್ಥಾಪನೆಗೆ ಮುಂದಾಗಿದ್ದೇವೆ ಎಂದರು.
ವಸತಿ, ಊಟ, ಸ್ವೇಟರ್, ಛತ್ರಿ ಸೇರಿದಂತೆ ಜನರಿಗೆ ಅಗತ್ಯಗಳನ್ನು ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ. ನಾಳೆ ವರಲಕ್ಷ್ಮಿ ಹಬ್ಬ ಇರುವುದರಿಂದ ಜನ ಹೆಚ್ಚಾಗಿ ಓಡಾಡುವ ಸಾಧ್ಯತೆ ಇದೆ. ನೀರು ಕಂಡು ನದಿ ಪಾತ್ರದಲ್ಲಿ ಜನರು ಇಳಿಯುವ ಸಾಧ್ಯತೆ ಇದೆ. ಸುತ್ತೂರು ಸೇತುವೆ ಕೂಡ ಮುಳುಗಡೆಯಾಗುವ ಸಾಧ್ಯತೆ ಇದೆ ಎಂದರು.
ಸುತ್ತೂರು, ಬೂಕನಕೆರೆ ಸೇರಿದಂತೆ ಸುತ್ತ ಮುತ್ತಲಿನ ಹಳ್ಳಿಗಳು ಮುಳುಗಡೆಯಾಗುವ ಸಾಧ್ಯತೆ ಇದೆ. ಜನರಿಗೆ ಪ್ರವಾಹದ ಮುನ್ಸೂಚನೆ ಇರುವ ಕಡೆ ಹೋಗದಂತೆ ಮೈಕ್ ಮೂಲಕ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗಿದೆ. ನಾಲ್ಕು ಬೋಟ್ ವ್ಯವಸ್ಥೆ ಮಾಡಲಾಗಿದೆ. ಹಾರಂಗಿ, ಕಬಿನಿಯಲ್ಲಿ ಹೆಚ್ಚು ನೀರು ಹರಿಬಿಡಲು ಸೂಚಿಸಲಾಗಿದೆ ಎಂದರು.
ಗುಂಡ್ಲುಪೇಟೆ ರಸ್ತೆಯ ಸಂಚಾರ ಬದಲಾವಣೆಗೆ ವ್ಯವಸ್ಥೆ ಮಾಡಲಾಗಿದ್ದು, ರಸ್ತೆಗಳಲ್ಲಿ ಅಗತ್ಯವಾದ ದೀಪಗಳ ವ್ಯವಸ್ಥೆ, ರೈನ್ ಕೋಟ್ ಹಾಗೂ ಜಾಕೇಟ್ ಗಳನ್ನ ನೀಡಲಾಗಿದೆ. ಜನರ ಸುರಕ್ಷತೆಗಾಗಿ ಹೆಚ್ಚುವರಿ ಹೋಂ ಗಾರ್ಡ್ ನಿಯೋಜಿಸಲಾಗಿದೆ ಎಂದರು.
ನಂಜನಗೂಡು ದೇವಸ್ಥಾನಕ್ಕೆ ಹೆಚ್ಚು ಜನ ಆಗಮನ ಹಿನ್ನಲೆ, ಹೆಚ್ಚು ಜನ ದೇವಸ್ಥಾನಕ್ಕೆ ಹೋಗದಂತೆ ಸೂಚಿಸುತ್ತಿದ್ದೇವೆ. ಅಲ್ಲದೇ ಅನೇಕರು ನೀರಿನ ಬಳಿ ನಿಂತು ಸೆಲ್ಫಿ ತೆಗೆದುಕೊಳ್ಳಲು ಮುಂದಾಗುತ್ತಾರೆ. ಸೆಲ್ಫೀ ತೆಗೆದುಕೊಳ್ಳಲು ಮುಂದಾದರೇ ಅಪಾಯಯಾಗಬಹುದು. ಯಾರು ನದಿ ಪಕ್ಕದಲ್ಲಿ ನಿಂತು ಫೋಟೋ ತೆಗೆದುಕೊಳ್ಳಬಾರದು. ತುಂಬಿದ ಸೇತುವೆ ಮೇಲೆ ಹುಡುಗರು ಈಜಲು ಮುಂದಾಗುತ್ತಾರೆ. ಇವೆಲ್ಲವನ್ನೂ ಮಾಡಬಾರದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ ಎಂದರು.