ನೈರುತ್ಯ ರೈಲ್ವೆ ಕಾಮಗಾರಿ:1 ಗಂಟೆ ತಡವಾಗಿ ಸಂಚರಿಸಲಿವೆ ರೈಲುಗಳು
ಮೈಸೂರು, ಮೇ 9:ನೈರುತ್ಯ ರೈಲ್ವೆ ಕಾಮಗಾರಿ ಹಿನ್ನೆಲೆಯಲ್ಲಿ ಮುಂದಿನ ತಿಂಗಳು ಜೂನ್ 6ರವರೆಗೆ ಹಲವು ರೈಲುಗಳಲ್ಲಿ ಸಂಚಾರ ವ್ಯತ್ಯಯ ಮುಂದುವರಿಯುವ ಸಾಧ್ಯತೆ ಇದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ನೈರುತ್ಯ ರೈಲ್ವೆ ವಲಯ ಹಲವೆಡೆ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವುದರಿಂದ ಮಾರ್ಗ ಬದಲಾವಣೆ ಮತ್ತು ದುರಸ್ತಿ ಕಾರ್ಯ ನಡೆಯುತ್ತಿದೆ. ಇದರ ಅನ್ವಯ ಬೆಳಗ್ಗೆ ಮೂರು ಗಂಟೆಗೆ ಬೀರೂರು ನಿಲ್ದಾಣ ಹಾದು ಬೆಂಗಳೂರು ಕಡೆ ತೆರಳಬೇಕಾದ ಗೋಲಗುಂಬಜ್ ರೈಲು ಬುಧವಾರ ಬೆಳಗ್ಗೆ ಸುಮಾರು 7 ಗಂಟೆಗೆ ತಡವಾಗಿ ಸಂಚರಿಸಲಿದೆ.
ಈ ಒಂದು ರೈಲಿನ ಸಮಯದಲ್ಲಿ ಆದ ವಿಳಂಬ ಈ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ರೈಲುಗಳ ವೇಳಾಪಟ್ಟಿಯ ಮೇಲೂ ಪರಿಣಾಮ ಬೀರಿದೆ. ಹುಬ್ಬಳ್ಳಿ ಇಂಟರ್ಸಿಟಿ ಮತ್ತು ವಿಶ್ವಮಾನವ ಎಕ್ಸ್ಪ್ರೆಸ್ ರೈಲುಗಳೂ ನಿತ್ಯ ಸುಮಾರು ಒಂದೂವರೆ ಗಂಟೆ ತಡವಾಗಿ ಚಲಿಸುತ್ತಿವೆ. ಇದು ಪ್ಯಾಸೆಂಜರ್ ರೈಲುಗಳ ಸಂಚಾರದ ಮೇಲೂ ವ್ಯತ್ಯಯ ಉಂಟುಮಾಡಿದೆ.

ಸದ್ಯ ಅರಸೀಕೆರೆ ವಿಭಾಗದಲ್ಲಿ ಮೇ 1-11ರವರೆಗೆ ಬಾಣಾವರ-ಅರಸೀಕೆರೆ, ಮೇ 12-20ರವರೆಗೆ ದೇವನೂರು-ಬಾಣಾವರ, ಮೇ 21-30ರವರೆಗೆ ಬಳ್ಳೇಕೆರೆ-ದೇವನೂರು, ಮೇ 31ರಿಂದ ಜೂನ್ 6ರವರೆಗೆ ಕಡೂರು-ಬಳ್ಳೇಕೆರೆ ನಡುವೆ ಮೈಸೂರು ವಲಯ ಎಂಜಿನಿಯರಿಂಗ್ ವಿಭಾಗ ಬೆಳಗ್ಗೆ 7ರಿಂದ 10ರವರೆಗೆ ತಪಾಸಣೆ ಮತ್ತು ದುರಸ್ತಿ ಕಾರ್ಯ ಕೈಗೆತ್ತಿಕೊಂಡಿದೆ.
ಈ ಸಮಯದಲ್ಲಿ ಶಿವಮೊಗ್ಗ-ಬೆಂಗಳೂರು ಪ್ಯಾಸೆಂಜರ್, ಬೆಂಗಳೂರು-ಹುಬ್ಬಳ್ಳಿ ಜನಶತಾಬ್ದಿ, ತಾಳಗುಪ್ಪ-ಬೆಂಗಳೂರು ಇಂಟರ್ಸಿಟಿ ಎಕ್ಸ್ಪ್ರೆಸ್, ಶಿವಮೊಗ್ಗ-ಮೈಸೂರು, ಚಿಕ್ಕಮಗಳೂರು-ಶಿವಮೊಗ್ಗ, ಅರಸೀಕೆರೆ-ಹುಬ್ಬಳ್ಳಿ ರೈಲುಗಳು ಸಂಚರಿಸುತ್ತಿದ್ದು, ಒಂದು ರೈಲು ತಡವಾದರೆ ಈ ಮಾರ್ಗದಲ್ಲಿ ಸಂಚರಿಸುವ ಸುಮಾರು 45 ರೈಲುಗಳ ಸಮಯದಲ್ಲೂ ವ್ಯತ್ಯಾಸವಾಗುತ್ತದೆ.
ಬೇಸಿಗೆಯಲ್ಲಿ ದುರಸ್ತಿ ಮುಗಿಸಿದರೆ ವರ್ಷವಿಡೀ ಪ್ರಯಾಣಿಕರ ಸಂಚಾರ ಸುರಕ್ಷತೆ ಸಾಧ್ಯವಿದ್ದು, ಇತರೆ ಸಮಯದಲ್ಲಿ ಈ ಕೆಲಸ ಸಾಧ್ಯವಿಲ್ಲ ಎಂಬುದು ಇಲಾಖೆಯ ಸ್ಪಷ್ಟನೆಯಾಗಿದೆ.
ಗುಂತಕಲ್ ಮತ್ತು ಧರ್ಮಾವರಂ ನಡುವೆ ಕೂಡ ದುರಸ್ತಿ ನಡೆದಿದ್ದು, ಅಲ್ಲಿಂದ ಮಾರ್ಗ ತಿರುಗಿಸಲಾದ ಸುಮಾರು 12 ರೈಲುಗಳು ಬೆಂಗಳೂರು ಮತ್ತು ಚಿಕ್ಕಜಾಜೂರು ನಡುವೆ ಸಂಚರಿಸುತ್ತಿವೆ. ಶಿವಮೊಗ್ಗ-ಬೆಂಗಳೂರು ಹುಬ್ಬಳ್ಳಿ ನಡುವೆ ಸಂಚರಿಸುವ ರೈಲುಗಳ ಸಂಚಾರ ಸಮಯದಲ್ಲಿ ವ್ಯತ್ಯಾಸ ಮುಂದುವರಿಯಲಿದೆ.












Click it and Unblock the Notifications