ಡ್ರೈವಿಂಗ್ ಕಲಿಸಿದ ಯುವಕನೇ ಸುಂದರಿಯ ಹಂತಕ
ಮೈಸೂರು, ಮಾರ್ಚ್ 26 : ಡ್ರೈವಿಂಗ್ ಕಲಿಯಲು ಬಂದ ಮೆಡಿಕಲ್ ಶಾಪ್ ಮಾಲೀಕನ ಪತ್ನಿಯೊಂದಿಗೆ ಸಲುಗೆ ಸಾಧಿಸಿ ಆಕೆಯೊಂದಿಗೆ ಸಂಬಂಧ ಬೆಳೆಸಿದ ಡ್ರೈವರ್ ಬಳಿಕ ಹಣ ಒಡವೆ ಆಸೆಗೆ ಅವಳನ್ನು ಕೊಂದು ಸುಟ್ಟು ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಪ್ರಕರಣದ ಬೆನ್ನತ್ತಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೂಲತಃ ಚನ್ನಪಟ್ಟಣ ತಾಲೂಕು ಮೆಣಸಿಗನಹಳ್ಳಿ ಗ್ರಾಮದ ನಿವಾಸಿ ಮೈಸೂರಿನ ಕುವೆಂಪುನಗರದ ಡ್ರೈವಿಂಗ್ ಸ್ಕೂಲ್ನಲ್ಲಿ ತರಬೇತುದಾರನಾಗಿದ್ದ ಎಂ.ಸಿ.ಸುನೀಲ್ ಅಲಿಯಾಸ್ ಅರ್ಜುನ(28) ಬಂಧಿತ ಆರೋಪಿ.
ರಾಮಕೃಷ್ಣನಗರದ ಇಅಂಡ್ಎಫ್ ಬ್ಲಾಕಿನ ನಿವಾಸಿ ಮೆಡಿಕಲ್ ಶಾಪ್ ಇಟ್ಟುಕೊಂಡಿರುವ ಪ್ರಕಾಶ್ ಕುಮಾರ್ ಎಂಬುವರು ತಮ್ಮ ಪತ್ನಿ ರಕ್ಷಿತಾ(29) ಅವರನ್ನು ಡ್ರೈವಿಂಗ್ ಕಲಿಯಲು ಸುನೀಲ್ ತರಬೇತುದಾರನಾಗಿದ್ದ ಡ್ರೈವಿಂಗ್ ಸ್ಕೂಲ್ಗೆ ಸೇರಿಸಿದ್ದರು. ನೋಡಲು ಚೆನ್ನಾಗಿದ್ದ ರಕ್ಷಿತಾಗೆ ಡ್ರೈವಿಂಗ್ ಹೇಳಿಕೊಡುವ ಮೂಲಕ ಪರಿಚಯವಾಗಿದ್ದನಲ್ಲದೆ ತುಂಬಾ ಸಲುಗೆ ಬೆಳೆಸಿಕೊಂಡಿದ್ದನು. ಜತೆಗೆ ಅವರ ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದನು ಎನ್ನಲಾಗಿದೆ. [ಮಾದೇವಮ್ಮನ ಲಿವಿಂಗ್ ಟುಗೆದರ್ ಸಂಸಾರ!]

ಈ ನಡುವೆ ರಕ್ಷಿತಾ ಮನೆಯಲ್ಲಿದ್ದ ಹಣ ಮತ್ತು ಒಡವೆ ಬಗ್ಗೆ ತಿಳಿದುಕೊಂಡಿದ್ದ ಆತನಿಗೆ ಅವಳನ್ನು ಕೊಲೆ ಮಾಡಿ ಹಣ ಮತ್ತು ಚಿನ್ನಾಭರಣ ದೋಚುವ ಯೋಚನೆ ಬಂದಿದೆ. ಹಾಗಾಗಿ ಮಾರ್ಚ್ 11ರಂದು ರಕ್ಷಿತಾ ಮನೆಗೆ ತೆರಳಿದ ಸುನೀಲ್ ಆಕೆಯನ್ನು ಹೊಡೆದು, ಉಸಿರುಗಟ್ಟಿಸಿ ಹತ್ಯೆಗೈದು ಮನೆಯಲ್ಲಿದ್ದ ಬ್ರೀಫ್ಕೇಸ್ನಲ್ಲಿ ತುಂಬಿ ಬಳಿಕ ಮನೆಯಲ್ಲಿದ್ದ ಸುಮಾರು 17 ಲಕ್ಷ ರೂ ಮೌಲ್ಯದ ಚಿನ್ನಾಭರಣ ಮತ್ತು ಎರಡೂವರೆ ಲಕ್ಷ ರೂ.ನಷ್ಟು ಹಣವನ್ನು ದೋಚಿದ್ದನು. ಆ ನಂತರ ತನಗೆ ಪರಿಚಯವಿದ್ದ ಡ್ರೈವರ್ನನ್ನು ಕರೆಯಿಸಿ ಆತನ ಕಾರಿನಲ್ಲಿ ಬ್ರೀಫ್ಕೇಸ್ನ್ನು ತುಂಬಿಕೊಂಡು ತನ್ನ ಸ್ವಗ್ರಾಮ ಚನ್ನಪಟ್ಟಣದತ್ತ ಪ್ರಯಾಣ ಬೆಳೆಸಿದ್ದನು.
ಈ ಕೃತ್ಯಕ್ಕೆ ಹಂತಕ ಸುನೀಲ್ ತನ್ನ ತಂದೆಯನ್ನು ಬಳಸಿಕೊಂಡಿದ್ದನಲ್ಲದೆ, ತನ್ನ ಊರಿನ ಬಳಿಗೆ ತಂದೆ ಚಂದ್ರೇಗೌಡ ಅವರನ್ನು ಬರಲು ಹೇಳಿದ್ದನು. ಮೆಣಸಿಗನಹಳ್ಳಿ ಎಂಬುವಲ್ಲಿ ಕಾರನ್ನು ನಿಲ್ಲಿಸಿ ಡ್ರೈವರ್ಗೆ ಅಲ್ಲಿಯೇ ಇರುವಂತೆ ಹೇಳಿ ತನ್ನ ತಂದೆಯನ್ನು ಕರೆದುಕೊಂಡು ತಾನೇ ಕಾರನ್ನು ಚಾಲಿಸಿಕೊಂಡು ಸಮೀಪದ ಕರಿಗುಡ್ಡ ಎಂಬಲ್ಲಿನ ನಿರ್ಜನ ಪ್ರದೇಶಕ್ಕೆ ತೆರಳಿ ಅಲ್ಲಿ ರಕ್ಷಿತಾಳ ಶವವನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟುಹಾಕಿ ಗುರುತು ಸಿಗದಂತೆ ಮಾಡಿ ಅದೇ ಜಾಗದಲ್ಲಿ ಬ್ರೀಫ್ಕೇಸ್ ಎಸೆದು ಬಂದಿದ್ದನು. ಆ ನಂತರ ತಂದೆ ಮಗ ಇಬ್ಬರೂ ಏನೂ ಗೊತ್ತಿಲ್ಲದಂತೆ ತಮ್ಮ ಊರು ಮೆಣಸಿಗನಹಳ್ಳಿಯಲ್ಲಿದ್ದರು. [ಕಳ್ಳತನ ಆರೋಪ, ಗೃಹಿಣಿಯ ಜೀವ ತೆಗೆದ ಸಾವಿರ ರೂಪಾಯಿ]
ಇತ್ತ ರಕ್ಷಿತಾ ರಾತ್ರಿಯಾದರೂ ಮನೆಗೆ ಬಾರದಿದ್ದಾಗ ಮತ್ತು ಮನೆಯಲ್ಲಿ ಒಡವೆ ಹಾಗೂ ಚಿನ್ನಾಭರಣವೂ ದೋಚಿಕೊಂಡು ಹೋಗಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಪತಿ ಪ್ರಕಾಶ್ ಕುಮಾರ್ ಮಾ.12ರಂದು ಕುವೆಂಪುನಗರ ಪೊಲೀಸ್ ಠಾಣೆಗೆ ಪತ್ನಿ ನಾಪತ್ತೆಯಾಗಿರುವ ದೂರು ನೀಡಿದ್ದರು.
ಮಾ.15ರಂದು ಮೆಣಸಿಗನಹಳ್ಳಿ ಸಮೀಪದ ಕರಿಗುಡ್ಡದ ನಿರ್ಜನ ಪ್ರದೇಶದಲ್ಲಿ ಸುಟ್ಟುಕರಕಲಾಗಿದ್ದ ಮಹಿಳೆಯ ಶವ ಪತ್ತೆಯಾಗಿತ್ತು. ಪಕ್ಕದಲ್ಲೇ ದೊಡ್ಡ ಬ್ರೀಫ್ಕೇಸ್ ಬಿದ್ದಿತ್ತು. ಈ ಬಗ್ಗೆ ಎಲ್ಲ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಿದ್ದು ಅದರಂತೆ ಗುರುತು ಪತ್ತೆಹಚ್ಚಲು ರಕ್ಷಿತಾ ಪತಿ ಪ್ರಕಾಶ್ಕುಮಾರ್ ಅವರನ್ನು ಪೊಲೀಸರು ಕರೆದೊಯ್ದಿದ್ದರು. ಕಾಲು ಮತ್ತು ಬ್ರೀಫ್ಕೇಸ್ನ್ನು ಗುರುತು ಹಚ್ಚಿದ್ದರಿಂದ ಶವ ರಕ್ಷಿತಾಳದ್ದೇ ಎಂಬುದು ಖಚಿತವಾಗಿತ್ತು.
ಆದರೆ ಗುರುತು ಪರಿಚಯವಿಲ್ಲದ ಊರಿಗೆ ರಕ್ಷಿತಾ ಹೇಗೆ ಬಂದಳು? ಇಲ್ಲಿ ಯಾರು ಕೊಲೆ ಮಾಡಿದರು ಎಂಬ ಪ್ರಶ್ನೆಗಳು ಪೊಲೀಸರನ್ನು ಕಾಡಿದ್ದವಲ್ಲದೆ, ತನಿಖೆ ಜಟಿಲ ರೂಪ ಪಡೆಯಿತು. ಈ ಬಗ್ಗೆ ಚಿಕ್ಕ ಸುಳಿವು ಬಿಡದಂತೆ ಎಲ್ಲವನ್ನೂ ಹುಡುಕಿದ ಪೊಲೀಸರಿಗೆ ರಕ್ಷಿತಾ ಮನೆಗೆ ಆಗಾಗ್ಗೆ ವ್ಯಕ್ತಿಯೊಬ್ಬ ಬಂದು ಹೋಗುತ್ತಿದ್ದ ಮಾಹಿತಿ ದೊರೆತಿತ್ತು. ಅದರ ಜಾಡು ಹಿಡಿದು ಹೋದಾಗ ಆತ ಡ್ರೈವಿಂಗ್ ಸ್ಕೂಲ್ನಲ್ಲಿ ತರಬೇತಿ ನೀಡುತ್ತಿದ್ದ ಸುನೀಲ್ ಎಂಬುದು ಗೊತ್ತಾಯಿತು. ಆತನ ಹಿನ್ನಲೆ ಕೆದಕಿದಾಗ ಆತ ಮೆಣಸಿಗನಹಳ್ಳಿಯವನು ಎಂಬುದು ತಿಳಿದು ಬಂದಿತ್ತು.
ಜೊತೆಗೆ ರಕ್ಷಿತಾ ನಾಪತ್ತೆಯಾದ ದಿನದಿಂದಲೇ ಆತ ಕೆಲಸಕ್ಕೆ ಬಾರದೆ ಊರಲ್ಲೇ ಉಳಿದುಕೊಂಡಿದ್ದನು. ಎಲ್ಲವನ್ನೂ ಕಲೆ ಹಾಕಿದ ತನಿಖಾ ತಂಡ ಹಂತಕನನ್ನು ಆತನ ಸ್ವಗ್ರಾಮದಲ್ಲೇ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಮೈಸೂರು ನಗರ ಡಿಸಿಪಿ ಡಾ.ಹೆಚ್.ಪಿ.ಶೇಖರ್, ಎನ್.ಡಿ.ಬಿರ್ಜೆ, ಕೆ.ಆರ್.ವಿಭಾಗದ ಎಸಿಪಿ ಸಿ.ಮಲ್ಲಿಕ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕುವೆಂಪುನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಿ.ಶೇಖರ್, ಎಸ್ಐ ಮುತ್ತುಶೆಟ್ಟಿ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.












Click it and Unblock the Notifications