ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣ: ಸಿಇಒ ಮಿಶ್ರಾ ಬೆಂಬಲಕ್ಕೆ ನಿಂತ ಪಿಡಿಒಗಳು
ಮೈಸೂರು, ಆಗಸ್ಟ್ 23: ನಂಜನಗೂಡು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಡಿಒಗಳು ಜಿ.ಪಂ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ಬೆಂಬಲಕ್ಕೆ ನಿಂತಿದ್ದಾರೆ.
ಡಾ.ನಾಗೇಂದ್ರ ಆತ್ಮಹತ್ಯೆ ವಿಚಾರವಾಗಿ ಹಲವು ಅಂಶಗಳನ್ನು ಲಿಖಿತ ರೂಪದಲ್ಲಿ ನೀಡಿರುವ ಮೈಸೂರು ಪಿಡಿಒಗಳು, ಈ ಅಂಶಗಳನ್ನು ತನಿಖೆಯಲ್ಲಿ ಪರಿಗಣಿಸುವಂತೆ ಒತ್ತಾಯಿಸಿದ್ದಾರೆ.
ಡಾ.ನಾಗೇಂದ್ರ ಯಾವುದಾದರೂ ವೈಯಕ್ತಿಕ ಸಮಸ್ಯೆ ಎದುರಿಸುತ್ತಿದ್ದರೆ ? ಸರ್ಕಾರದ ನಿಯಮದ ಪ್ರಕಾರ ಡಾ.ನಾಗೇಂದ್ರ ಅವರು ಕೇಂದ್ರ ಸ್ಥಾನದಲ್ಲಿ ಇರಬೇಕಾಗಿತ್ತು. ನಂಜನಗೂಡು ಬಿಟ್ಟು ಮೈಸೂರಿನಲ್ಲಿ ಇದ್ದಿದ್ದು ಏಕೆ ? ಎಂದು ಪ್ರಶ್ನಿಸಿದ್ದಾರೆ.

ತಾಲ್ಲೂಕು ವೈದ್ಯಾಧಿಕಾರಿ ಎಷ್ಟು ಸಮಯ ಅವರು ನಂಜನಗೂಡಿನಲ್ಲಿ ಇರುತ್ತಿದ್ದರು. ಅವರ ಕೆಲಸ ಒತ್ತಡದ ಬಗ್ಗೆ ವೈದ್ಯರ ಸಂಘಕ್ಕೆ ಏಕೆ ದೂರು ನೀಡಿಲ್ಲ, ಡಾ.ನಾಗೇಂದ್ರ ಆತ್ಮಹತ್ಯೆ ಮಾಡಿಕೊಂಡಾಗ ಅವರ ಪತ್ನಿ ಎಲ್ಲಿದ್ದರು ? ಎಂದು ಅವರು ಅಂಶಗಳಲ್ಲಿ ಉಲ್ಲೇಖಿಸಿದ್ದಾರೆ.
ಟಿಎಚ್ಒ ಡಾ.ನಾಗೇಂದ್ರ ಹೊರತುಪಡಿಸಿ ಬೇರೆ ತಾಲ್ಲೂಕು ಆರೋಗ್ಯಾಧಿಕಾರಿಗಳು ಒತ್ತಡ, ಟಾರ್ಗೆಟ್ ಬಗ್ಗೆ ಏಕೆ ಮಾತನಾಡಿಲ್ಲ. ಡಾ.ನಾಗೇಂದ್ರಗೆ ಟಾರ್ಗೆಟ್ ಮುಗಿಸಲು ಏಕೆ ಸಾಧ್ಯವಾಗಿರಲಿಲ್ಲ. ಸೌಲಭ್ಯಗಳನ್ನು ನೀಡಿಲ್ಲವಾದರೆ ಏಕೆ ಈ ವಿಚಾರ ಅವರು ತಿಳಿಸಿಲ್ಲ ಎಂದು ಒಟ್ಟು 17 ಅಂಶಗಳನ್ನು ಪಿಡಿಒಗಳು ಪಟ್ಟಿ ಮಾಡಿ ಮೈಸೂರು ಜಿಲ್ಲಾಧಿಕಾರಿಗಳಿಗೆ ನೀಡಲು ಮುಂದಾಗಿದ್ದಾರೆ.

ಅಷ್ಟೇ ಅಲ್ಲದೆ ಐಎಎಸ್ ಅಧಿಕಾರಿ, ಜಿ.ಪಂ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ಅವರ ಬೆಂಬಲಕ್ಕೆ ಪಿಡಿಒಗಳು ನಿಂತಿದ್ದಾರೆ. ಸಿಇಒ ಮಿಶ್ರಾ ಅವರು ದಕ್ಷ, ಪ್ರಾಮಾಣಿಕ ಅಧಿಕಾರಿ, ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದಿದ್ದಾರೆ.
ಸಿಇಒ ಮಿಶ್ರಾ ಅವರ ತೇಜೋವಧೆ ಸರಿಯಲ್ಲ, ಅವರ ವರ್ಗಾವಣೆಯ ಆದೇಶವನ್ನು ತಡೆ ಹಿಡಿಯಬೇಕು. ತನಿಖೆ ಮುಗಿಯುವವರೆಗೆ ವರ್ಗಾವಣೆ ಆದೇಶ ತಡೆ ಹಿಡಿಯಲಿ ಎಂದು ಪಿಡಿಒ ಕ್ಷೇಮಾಭಿವೃದ್ಧಿ ಸಂಘದಿಂದ ಒತ್ತಾಯ ಮಾಡಲಾಗಿದೆ.












Click it and Unblock the Notifications