ನಂಜನಗೂಡು ಪ್ರಬಾರ ಟಿಎಚ್ಒ ಆಗಿ ಡಾ.ಈಶ್ವರ್ ನೇಮಕ
ಮೈಸೂರು, ಆಗಸ್ಟ್ 24: ಮೈಸೂರು ಜಿಲ್ಲೆಯ ನಂಜನಗೂಡು ಪ್ರಬಾರ ತಾಲ್ಲೂಕು ಆರೋಗ್ಯಾಧಿಕಾರಿಯಾಗಿ ಡಾ.ಈಶ್ವರ್ ಅವರು ನೇಮಕಗೊಂಡಿದ್ದಾರೆ. ಈ ಹಿಂದೆ ಟಿಎಚ್ಒ ಆಗಿದ್ದ ಡಾ.ನಾಗೇಂದ್ರ ಅವರು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆ ಡಾ.ಈಶ್ವರ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನ ಮೂಗೂರಿನಲ್ಲಿ ಎ.ಎಂ ಆಗಿ ಕಾರ್ಯನಿರ್ವಹಿಸುತ್ತಿದ್ದ ಈಶ್ವರ್ ಅವರು ಈಗ ನಂಜನಗೂಡು ತಾಲ್ಲೂಕು ಆರೋಗ್ಯಾಧಿಕಾರಿ ಆಗಿದ್ದಾರೆ.
ನಂಜನಗೂಡು ಟಿಎಚ್ಒ ಆಗಿ ಕಾರ್ಯನಿರ್ವಹಿಸಲು ಮೈಸೂರು ವೈದ್ಯಾಧಿಕಾರಿಗಳು ನಿರಾಕರಿಸಿದ್ದು, ಪಕ್ಕದ ಮೂಗೂರಿನಲ್ಲಿದ್ದ ಹಿರಿಯ ವೈದ್ಯಾಧಿಕಾರಿ ಡಾ.ಈಶ್ವರ್ ಅವರನ್ನು ನೇಮಿಸಲಾಯಿತು ಎಂದು ಮೈಸೂರು ಜಿಲ್ಲಾ ವೈದ್ಯಾಧಿಕಾರಿ ಡಾ.ವೆಂಕಟೇಶ್ ಮಾಹಿತಿ ನೀಡಿದರು.

ನಂಜನಗೂಡು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣದ ಮುಷ್ಕರವನ್ನು ವೈದ್ಯರು ಭಾನುವಾರ ಕೈಬಿಟ್ಟಿದ್ದು, ಸೋಮವಾರದಿಂದ ಕರ್ತವ್ಯಕ್ಕೆ ಹಾಜರಾಗಲು ತೀರ್ಮಾನಿಸಿದ್ದಾರೆ.
ಮೃತ ಡಾ.ನಾಗೇಂದ್ರ ಕುಟುಂಬಕ್ಕೆ ಪರಿಹಾರ ಸಿಕ್ಕಿದೆ, ಈಗಾಗಲೇ ಸಿಇಒ ವಿರುದ್ಧ ಪ್ರಕರಣ ದಾಖಲಿಸಿ ವರ್ಗಾವಣೆ ಮಾಡಲಾಗಿದ್ದು, ಹೋರಾಟದ ಸ್ವರೂಪ ಬದಲಾಗಿದೆ ಅಷ್ಟೆ. ಐಎಎಸ್ ಅಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ವೈದ್ಯ ಸಂಘದ ಮಾಜಿ ಅಧ್ಯಕ್ಷ ಡಾ. ರವೀಂದ್ರ ಅವರು ಭಾನುವಾರ ಹೇಳಿದ್ದರು.
ಅಲ್ಲದೇ ಸಾಮಾನ್ಯ ಜನರಿಗೆ ತೊಂದರೆ ಆಗಬಾರದು ಅಂತಾ ವೈದ್ಯರ ಮುಷ್ಕರವನ್ನು ವಾಪಸ್ ಪಡೆಯಲಾಗುತ್ತಿದ್ದು, ಇನ್ಮುಂದೆ ಯಾವ ವೈದ್ಯರಿಗೂ ತೊಂದರೆ ಆಗಬಾರದು ಎಂದು ಇದೇ ವೇಳೆ ಎಚ್ಚರಿಕೆ ನೀಡಿದ್ದರು.












Click it and Unblock the Notifications