ನಿಮ್ಮ ಮಾತೃಭಾಷೆ ಮರೆಯಬೇಡಿ ಎಂದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು
ಮೈಸೂರು, ಜುಲೈ 13: ಪ್ರತಿಯೊಬ್ಬರೂ ತಮ್ಮ ಮಾತೃಭಾಷೆ ಮೇಲೆ ಅಭಿಮಾನ ಇಟ್ಟುಕೊಳ್ಳಬೇಕು. ಮಾತೃಭಾಷೆಯಲ್ಲಿ ಮಾತನಾಡಬೇಕು. ನಮ್ಮ ಭಾಷೆ ಬಗ್ಗೆ ನಮಗೆ ಗೌರವವಿರಬೇಕು ಎಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅಭಿಪ್ರಾಯಪಟ್ಟರು.
ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ಸ್ವರ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತೃಭಾಷೆಯ ಮಹತ್ವದ ಬಗ್ಗೆ ಭಾಷಣ ಮಾಡಿದ ಅವರು, ಹಳ್ಳಿಯವನಿಗೆ ಇಂಗ್ಲಿಷ್ ನಲ್ಲಿ ಮಾತನಾಡಿಸಿದರೆ ಅವನಿಗೆ ಏನು ಅರ್ಥ ಆಗುತ್ತದೆ, ಪಿರಿಯಾಪಟ್ಟಣದಲ್ಲಿ ತಂಬಾಕು ಬೆಳೆಯುವ ರೈತನಿಗೆ ಇಂಗ್ಲಿಷ್ ಅರ್ಥ ಆಗುವುದಿಲ್ಲ. ಇಂಗ್ಲಿಷ್ ಕಾನ್ವೆಂಟ್ ನಲ್ಲಿ ಓದಿದರೆ ದೊಡ್ಡವರಾಗುತ್ತೇವೆ ಎನ್ನುವುದು ತಪ್ಪು ಕಲ್ಪನೆ. ಕರ್ನಾಟಕ ಸಿಎಂ ಎಚ್.ಡಿ.ಕುಮಾರಸ್ವಾಮಿ ಯಾವ ಕಾನ್ವೆಂಟ್ ನಲ್ಲಿ ಓದಿದವರು, ಪ್ರಧಾನಿ ಮೋದಿ ಯಾವ ಕಾನ್ವೆಂಟ್ ನೋಡಿದ್ದರು, ಪಕ್ಕದ ರಾಜ್ಯದ ಸಿಎಂ ಯಾವ ಕಾನ್ವೆಂಟ್ ಗೆ ಹೋಗಿದ್ರು, ನಾನು ಯಾವ ಕಾನ್ವೆಂಟ್ ಗೆ ಹೋಗಿದ್ದೆ..? ಈಗ ಉಪ ರಾಷ್ಟ್ರಪತಿ ಆಗಿಲ್ವೇ..! ನಮಗೆ ಮೊದಲು ಮಾತೃ ಭಾಷೆ ಮುಖ್ಯ ಎಂದರು.
ನ್ಯಾಯಾಲಯಗಳಲ್ಲೂ ಸ್ಥಳೀಯ ಭಾಷೆಗೆ ಆದ್ಯತೆ ನೀಡಬೇಕು. ನ್ಯಾಯಾಲಯದಲ್ಲಿನ ವಾದ ವಿವಾದಗಳು ಸುಲಭವಾಗಿ ಅರ್ಥವಾಗಬೇಕಿದೆ. ಅದರಲ್ಲಿ ಯಾವುದೇ ಗೊಂದಲವಾಗಬಾರದು. ಇಲ್ಲವಾದರೆ ವಕೀಲರು ವಾದ ಮಾಡುವುದು ಕಕ್ಷಿದಾರನಿಗೆ ಏನೆಂದು ಅರ್ಥವಾಗುವುದಿಲ್ಲ. ಸಮಸ್ಯೆಗಳು ಹೆಚ್ಚಾಗುತ್ತವೆ. ಪ್ರತಿಯೊಂದು ಅಂಗಡಿ ಮುಂಗಟ್ಟು, ಹೋಟೆಲ್ ಎಲ್ಲಾ ಕಡೆ ಮಾತೃ ಭಾಷೆಯ ಫಲಕವಿರಲಿ. ನಂತರ ಬೇರೆ ಭಾಷೆಗಳಿಗೆ ಆದ್ಯತೆ ಕೊಡಿ. ಎಲ್ಲಾ ಭಾಷೆಯನ್ನೂ ಕಲಿಯಿರಿ. ಯಾವ ಭಾಷೆಯನ್ನೂ ವಿರೋಧಿಸಬೇಡಿ. ಆದರೆ ನಿಮ್ಮ ಭಾಷೆಯನ್ನು ಮರೆಯಬೇಡಿ. ಭಾಷೆಯಲ್ಲಿ ನಮ್ಮ ಸಂಸ್ಕ್ರತಿ ಅಡಗಿರುತ್ತದೆ. ನಮ್ಮ ಭಾಷೆ ನಮ್ಮ ಐಡೆಂಟಿ ತೋರಿಸುತ್ತದೆ. ಭಾರತೀಯ ಭಾಷೆಗಳಿಗೆ ತನ್ನದ ವೈಜ್ಞಾನಿಕ ನೆಲಗಟ್ಟು ಇದೆ. ನಮ್ಮ ಭಾಷೆಯನ್ನು ಸಂರಕ್ಷಣೆ ಮಾಡಬೇಕು. ಆಗ ಮಾತ್ರ ಮಾತೃ ಭಾಷೆ ಉಳಿಯಲು ಸಾಧ್ಯ ಎಂದರು.

ಸಿಐಐಎಲ್ ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಭಾಗವಹಿಸಿದ್ದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಭಾಷಣದ ನಡುವೆ ಮೈಸೂರಿನ ತಿಂಡಿಗಳನ್ನು ನೆನಪಿಸಿಕೊಂಡರು. ರಾಗಿ ಮುದ್ದೆ, ನಾಟಿ ಕೋಳಿ ಸಾರು, ಬಿಸಿಬೇಳೆ ಬಾತು, ಇಡ್ಲಿ, ರವೆ ಇಡ್ಲಿ ಸಾಲು ಸಾಲು ಆಹಾರ ಪದಾರ್ಥಗಳ ಹೆಸರು ಹೇಳಿದರು. ಮೈಸೂರಿನ ದಾಸ್ ಪ್ರಕಾಶ್ ಹೋಟೆಲ್ ನೆನೆಸಿಕೊಂಡ ಅವರು, ಅದು ಸ್ಟ್ರಿಕ್ಟಾಗಿ ಸಸ್ಯಾಹಾರ ಪಾಲಿಸುತ್ತಿರುವ ಹೋಟೆಲ್. ನಮ್ಮ ಹಿರಿಯರು ಹಮಾಮಾನಕ್ಕೆ ತಕ್ಕಂತೆ ಕಾಲದಿಂದ ಕಾಲಕ್ಕೆ ಆಹಾರ ಬಳಸುವುದನ್ನು ಹೇಳಿಕೊಟ್ಟಿದ್ದಾರೆ. ಆದರೆ ನಾವೀಗ ವಿದೇಶಿ ಆಹಾರ ಪದ್ಧತಿಗೆ ಮಾರುಹೋಗುತ್ತಿದ್ದೇವೆ. ಇದು ಸರಿ ಅಲ್ಲ ಎಂದರು.
ಕಾರ್ಯಕ್ರಮದಲ್ಲಿ ನಾಲ್ಕು ಭಾಷೆಗಳಲ್ಲಿ ಭಾಷಣ ಮಾಡಿದ ವೆಂಕಯ್ಯನಾಯ್ಡು ಅವರು ಕನ್ನಡ, ಇಂಗ್ಲಿಷ್, ತೆಲುಗು ಹಾಗೂ ಹಿಂದಿ ಭಾಷೆಗಳನ್ನು ಬಳಸಿಕೊಂಡು ಮಕ್ಕಳಿಗೆ ನೀತಿಪಾಠ ಹೇಳಿದರು. ಎರಡೂ ಕಾರ್ಯಕ್ರಮಕ್ಕೂ ರಾಜ್ಯಪಾಲ ವಜುಭಾಯಿ ವಾಲಾರವರು ಗೈರಾಗಿದ್ದರು.












Click it and Unblock the Notifications