ಖಾಸಗಿ ಆಸ್ಪತ್ರೆ ಬಂದ್: ಮೈಸೂರಲ್ಲಿ ತುಂಬಿ ತುಳುಕುತ್ತಿದೆ ಕೆ.ಆರ್.ಆಸ್ಪತ್ರೆ
ಮೈಸೂರು, ನವೆಂಬರ್ 15 : ಮೈಸೂರು ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಕಳೆದೆರಡು ದಿನಗಳಿಂದ ಹೊರ ರೋಗಿಗಳ ಸೇವೆ ಸಂಪೂರ್ಣ ಬಂದ್ ಆಗಿರುವ ಹಿನ್ನೆಲೆ .ರೋಗಿಗಳು ಅಕ್ಷರಶಃ ಪರದಾಡುವಂತಾಗಿದೆ. ಇದರಿಂದಾಗಿ ಕೆ.ಆರ್.ಆಸ್ಪತ್ರೆ ಸೇರಿದಂತೆ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ರೋಗಿಗಳು ಮುಗಿ ಬೀಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಆರೋಗ್ಯ ಎಮರ್ಜೆನ್ಸಿ: ಸತ್ತವರ ಸಂಖ್ಯೆ 14ಕ್ಕೆ ಏರಿಕೆ
ಇದು ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯಿದೆ 2017 (ಕೆಪಿಎಂಇ) ವಿರೋಧಿಸಿ ಖಾಸಗಿ ಆಸ್ಪತ್ರೆಗಳ ವೈದ್ಯರು ಸೋಮವಾರದಿಂದ ತಮ್ಮ ಸೇವೆಯನ್ನು ಸ್ಥಗಿತಗೊಳಿಸಿ ನಡೆಸಿದ 'ಬೆಳಗಾವಿ ಚಲೋ' ಆಂದೋಲನದಲ್ಲಿ ಪಾಲ್ಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿಯಿಂದಲೇ ಕೆಲ ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ಪಾಲಿಗೆ ವೈದ್ಯಕೀಯ ಸೇವೆ ಸ್ತಬ್ಧವಾಗಿದೆ.
ನಾಳೆಯಿಂದ ಬೆಂಗಳೂರಿನ ಎಲ್ಲಾ ಖಾಸಗಿ 'ಒಪಿಡಿ'ಗಳು ಬಂದ್
ಸದಾ ಸಾರ್ವಜನಿಕರಿಂದ ತುಂಬಿ ತುಳುಕುವ ಕೆ.ಆರ್.ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆ ಸೇರಿ ಇನ್ನಿತರ ಸರಕಾರಿ ಆಸ್ಪತ್ರೆಗಳಿಗೆ ಲಗ್ಗೆ ಇಟ್ಟಿದ್ದು ಕಂಡುಬಂತು. ಸಾಮಾನ್ಯವಾಗಿ ಕೆ.ಆರ್.ಆಸ್ಪತ್ರೆಯಲ್ಲಿ ಹೊರ ರೋಗಿಗಳ ಹಾಜರಿ ಪ್ರಮಾಣ ಹೆಚ್ಚಾಗಿದ್ದು, ಮುಷ್ಕರದ ಪರಿಣಾಮ ಸ್ವಲ್ಪ ಜಾಸ್ತಿಯಾಗಿತ್ತು. ಸರಕಾರ ವೈದ್ಯರ ರಜೆ ರದ್ದುಪಡಿಸುವ ಜತೆಗೆ, ಎಲ್ಲರೂ ಕರ್ತವ್ಯದಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದ್ದರಿಂದ ಎಲ್ಲರೂ ಕಾರ್ಯ ನಿರ್ವಹಿಸಿ ಪರಿಸ್ಥಿತಿ ನಿರ್ವಹಿಸಿದರೂ ಸಮಸ್ಯೆಗಳು ಕಂಡುಬಂತು.
ರೋಗಿಗಳ ಪರದಾಟ
ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ರೋಗಿಗಳು ಪರದಾಡುವಂತಾಯಿತು. ಖಾಸಗಿ ಆಸ್ಪತ್ರೆಗಳಲ್ಲಿ ಯಾವುದೇ ಹೊರರೋಗಿಗಳನ್ನು ತಪಾಸಣೆ, ನೋಂದಣಿ ಮಾಡಿಕೊಳ್ಳದೆ ಹೋಗಿದ್ದರಿಂದ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುತ್ತಿದ್ದರು. ತಾಲೂಕು, ಗ್ರಾಮೀಣ ಪ್ರದೇಶದಿಂದ ಸ್ಕ್ಯಾನಿಂಗ್, ಎಕ್ಸರೇ ಇನ್ನಿತರ ತಪಾಸಣೆ ಮಾಡಿಸಲು ಆಗಮಿಸಿದ್ದವರೂ ಫಲಕ ನೋಡಿ ವಾಪಸ್ ಹೋದರು. ಖಾಸಗಿ ತುರ್ತು ಚಿಕಿತ್ಸಾ ವಾಹನಗಳ ಚಾಲಕರು ಸಹಾ ದೂರ ಉಳಿದು ಪರೋಕ್ಷವಾಗಿ ಪ್ರತಿಭಟನೆಗೆ ಸಾಥ್ ನೀಡಿದರು. ಇದರಿಂದಾಗಿ ಕೆ.ಆರ್.ಆಸ್ಪತ್ರೆಗೆ ಬರುತ್ತಿದ್ದ ಗಾಯಾಳುಗಳು ಖಾಸಗಿ ವಾಹನಗಳಲ್ಲಿ ಬಂದಿಳಿಯುತ್ತಿದ್ದು ಕಂಡುಬಂತು.
ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ರಜೆಯಿಲ್ಲ!
ಚಾಮರಾಜನಗರ, ಮೈಸೂರು, ಗುಂಡ್ಲುಪೇಟೆ ವಿವಿಧೆಡೆಗಳಿಂದ ರೋಗಿಗಳು ಕೆ.ಆರ್.ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುತ್ತಿರುವುದರಿಂದ ಕೆ.ಆರ್.ಆಸ್ಪತ್ರೆಯಲ್ಲಿ ನೂಕುನುಗ್ಗಲು ಉಂಟಾಗಿದೆ. ಕೆ.ಆರ್.ಆಸ್ಪತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬರುತ್ತಿರುವುದರಿಂದ ವೈದ್ಯರಿಗೆ ರಜೆ ನೀಡದೆ ಚಿಕಿತ್ಸೆ ನೀಡಲು ಸಹಕರಿಸಿ ಎಂದು ಕೇಳಿಕೊಳ್ಳಲಾಗುತ್ತಿದ್ದು, ರಜೆಯ ಮೇಲೆ ತೆರಳಿದವರನ್ನು ಕರೆಯಿಸಿಕೊಳ್ಳಲಾಗುತ್ತಿದೆ. ರೋಗಿಗಳ ಬಳಿಯೂ ಸರತಿ ಸಾಲಿನಲ್ಲಿ ನಿಂತು ಸಹಕರಿಸಿ ಎಂದು ಕೇಳಿಕೊಳ್ಳಲಾಗುತ್ತಿದ್ದು, ಎಮರ್ಜೆನ್ಸಿ ಇರುವ ರೋಗಿಗಳಿಗೆ ತಕ್ಷಣದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.
ಬಿಗಿ ಪೊಲೀಸ್ ಬಂದೋಬಸ್ತ್
ಖಾಸಗಿ ಆಸ್ಪತ್ರೆ ವೈದ್ಯರ ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಇದಲ್ಲದೆ, ಪ್ರಮುಖ ಆಸ್ಪತ್ರೆಗಳಿಗೂ ಪೊಲೀಸರನ್ನು ನಿಯೋಜಿಸಲಾಗಿತ್ತು. ವಿಶೇಷವಾಗಿ ವೈದ್ಯರ ಮುಷ್ಕರದಿಂದಾಗಿ ಉಂಟಾಗುವ ತೊಂದರೆ ಎದುರಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದ್ದರೂ ಒತ್ತಡ ಜೋರಾಗಿದ್ದರಿಂದ ರೋಗಿಗಳು ಬವಣೆ ಹೇಳತೀರದ್ದಾಗಿದೆ.
ಇತ್ತ ಖಾಸಗಿ ವೈದ್ಯರ ನಿಲುವನ್ನು ಖಂಡಿಸಿ ಪ್ರತಿಭಟನೆ
ಕರ್ನಾಟಕ ಖಾಸಗಿ ಆಸ್ಪತ್ರೆಗಳ ಕಾಯಿದೆ ತಿದ್ದುಪಡಿ ವಿದೇಯಕ ಜಾರಿಗೆ ತರಬಾರದೆಂದು ಮುಷ್ಕರ ನಡೆಸುತ್ತಿರುವ ಖಾಸಗಿ ಆಸ್ಪತ್ರೆ ವೈದ್ಯರ ವಿರುದ್ಧ ಕರ್ನಾಟಕ ಕಾವಲು ಪಡೆ ಕಾರ್ಯಕರ್ತರು ನಗರದ ನ್ಯಾಯಾಲಯದ ಮುಂಭಾಗವಿರುವ ಗಾಂಧಿ ಪುತ್ಥಳಿ ಎದುರು ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರ ಕರ್ನಾಟಕ ಖಾಸಗಿ ಆಸ್ಪತ್ರೆಗಳ ಕಾಯಿದೆ ತಿದ್ದುಪಡಿ ವಿದೇಯಕ ಜಾರಿಗೆ ತರುತ್ತಿರುವುದು ಸ್ವಾಗತಾರ್ಹ. ಆದರೆ ಇದನ್ನು ವಿರೋಧಿಸಿ ವೈದ್ಯರು ಪ್ರತಿಭಟನೆ ನಡೆಸುತ್ತಿರುವುದು ಖಂಡನೀಯ. ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರಿ ಖಾಸಗಿ ಆಸ್ಪತ್ರೆಗಳ ಮಾಲೀಕರಿಗೆ, ಖಾಸಗಿ ವೈದ್ಯರ ಮುಷ್ಕರಕ್ಕೆ ಹೆದರಿ ಕಾಯಿದೆ ಜಾರಿಗೆ ತರುವುದರಿಂದ ಹಿಂದೆ ಸರಿಯಬಾರದು ಎಂದು ಆಗ್ರಹಿಸಿದರು.