ಡಿಸೆಂಬರ್ 15ಕ್ಕೆ ಮೈಸೂರಿನಲ್ಲಿ ಬ್ರಾಹ್ಮಣರ ಬೃಹತ್ ಸಮಾವೇಶ
ಮೈಸೂರು, ನವೆಂಬರ್. 15: ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಡಿ.15 ಮತ್ತು 16ರಂದು ಜಿಲ್ಲಾಮಟ್ಟದ ಬ್ರಾಹ್ಮಣರ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ತಿಳಿಸಿದರು.
ಸಮಾವೇಶದ ಭಿತ್ತಿಪತ್ರ ಮತ್ತು ಕರಪತ್ರಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಜಿಲ್ಲೆಯ 25 ಸಾವಿರಕ್ಕೂ ಅಧಿಕ ಬ್ರಾಹ್ಮಣರು ಪಾಲ್ಗೊಳ್ಳಲಿದ್ದಾರೆ. ಬ್ರಾಹ್ಮಣರಲ್ಲಿರುವ ಒಗ್ಗಟ್ಟು ಪ್ರದರ್ಶಿಸುವುದು, ತ್ರಿಮತಸ್ಥ ಬ್ರಾಹ್ಮಣರೆಲ್ಲರೂ ಒಂದೇ ಎಂಬ ಸಂದೇಶ ಸಾರುವುದು ಸಮಾವೇಶದ ಉದ್ದೇಶ ಎಂದರು.
ಬ್ರಾಹ್ಮಣ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಲು ಸಂಘಟನಾತ್ಮಕವಾಗಿ ಕರೆ ನೀಡಲೆಂದೇ ಬೃಹತ್ ಬ್ರಾಹ್ಮಣ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. 13 ವರ್ಷಗಳ ನಂತರ ಮೈಸೂರಿನಲ್ಲಿ ಬ್ರಾಹ್ಮಣ ಸಮಾವೇಶ ನಡೆಯುತ್ತಿದ್ದು, ಸಮಸ್ತ ಬ್ರಾಹ್ಮಣ ಸಂಘ ಸಂಸ್ಥೆಗಳು ಭಾಗವಹಿಸಬೇಕು ಎಂದು ಪ್ರಕಾಶ್ ಮನವಿ ಮಾಡಿದರು.

ಕೆ.ಆರ್.ಕ್ಷೇತ್ರದಲ್ಲಿ ಬ್ರಾಹ್ಮಣರ ಸುಮಾರು 75 ಸಾವಿರ ಮತಗಳಿವೆ. ಆದರೂ ಈ ಕ್ಷೇತ್ರದಲ್ಲಿ ಹಲವು ಸಲ ಇತರ ಸಮುದಾಯದವರು ಗೆದ್ದು ಬಂದಿದ್ದಾರೆ. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಒಗ್ಗಟ್ಟು ಪ್ರದರ್ಶಿಸಿದ್ದರಿಂದ ನಮ್ಮದೇ ಸಮುದಾಯದ ಅಭ್ಯರ್ಥಿಯನ್ನು ಗೆಲ್ಲಿಸಲು ಸಾಧ್ಯವಾಗಿದೆ. ಇದೇ ರೀತಿಯ ಒಗ್ಗಟ್ಟು ಮುಂದುವರೆಯಬೇಕು. ಆ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಜೆಟ್ ನಲ್ಲಿ ಘೋಷಿಸಿರುವಂತೆ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಸ್ಥಾಪನೆಗೆ ಕೂಡಲೇ ಮುಂದಾಗಬೇಕು. ಬ್ರಾಹ್ಮಣರಲ್ಲಿರುವ ಬಡವರಿಗೆ ಸರ್ಕಾರದ ಸೌಲಭ್ಯಗಳನ್ನು ಲಭಿಸಬೇಕು, ಬ್ರಾಹ್ಮಣ ಸಮುದಾಯ ಭವನದ ಸ್ಥಾಪನೆಗೆ ಭೂಮಿ ನೀಡಬೇಕು ಮುಂತಾದ ನಿರ್ಣಯಗಳನ್ನು ಸಮಾವೇಶದಲ್ಲಿ ಕೈಗೊಳ್ಳಲಾಗುವುದು ಎಂಬ ಮಾಹಿತಿ ನೀಡಿದರು.

ಸಮಾವೇಶದ ಅಂಗವಾಗಿ ಡಿ.16ರಂದು ಶೋಭಾಯಾತ್ರೆ ನಡೆಯಲಿದ್ದು, ಕಲಾ ತಂಡಗಳು ಮತ್ತು ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಪ್ರಚಾರದ ಅಂಗವಾಗಿ ನ.25ರಂದು ಬ್ರಾಹ್ಮಣ ಯುವ ವೇದಿಕೆಯಿಂದ ನಗರದಲ್ಲಿ ಬೈಕ್ ರಾಲಿ ಆಯೋಜಿಸಲಾಗಿದೆ.
ಪ್ರತಿ ವಾರ್ಡ್ ಗಳಲ್ಲಿ ಮಹಿಳೆಯರನ್ನು ಒಳಗೊಂಡ ಸಮಿತಿಗಳನ್ನು ರಚಿಸಿದ್ದು, ಬ್ರಾಹ್ಮಣ ಸಮುದಾಯದವರ ಮನೆಗಳಿಗೆ ತೆರಳಿ ಸಮಾವೇಶಕ್ಕೆ ಆಹ್ವಾನ ನೀಡಲಿದ್ದಾರೆ ಎಂದು ಡಿ.ಟಿ.ಪ್ರಕಾಶ್ ತಿಳಿಸಿದರು.












Click it and Unblock the Notifications