ಚಾಮುಂಡೇಶ್ವರಿ ತಾಯಿಗೆ ಜಿಲ್ಲಾಡಳಿತದಿಂದಲೇ ಸೀರೆ
ಮೈಸೂರು, ಸೆಪ್ಟೆಂಬರ್ 24: ಮೈಸೂರು ದಸರಾ ಜಂಬೂಸವಾರಿಯ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿ ಸಾಗುವ ಚಾಮುಂಡೇಶ್ವರಿ ತಾಯಿಗೆ ಉಡಿಸುವ ಸೀರೆಯನ್ನು ಜಿಲ್ಲಾಡಳಿತದಿಂದ ನೀಡುವ ತೀರ್ಮಾನವನ್ನು ಈ ಬಾರಿಯ ದಸರಾದಲ್ಲಿ ಕೈಗೊಳ್ಳಲಾಗುತ್ತಿದೆ.
ಈ ಹಿಂದಿನ ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಚಾಮುಂಡೇಶ್ವರಿ ತಾಯಿಗೆ ಸೀರೆ ಉಡಿಸುವ ವಿಚಾರದಲ್ಲಿಯೂ ರಾಜಕೀಯ ನಡೆದಿರುವುದನ್ನು ಮನಗಂಡ ಇತಿಹಾಸ ತಜ್ಞರಾದ ಪ್ರೊ. ನಂಜರಾಜೇ ಅರಸ್ ಅವರು ಸೀರೆಯನ್ನು ಜಿಲ್ಲಾಡಳಿತದಿಂದಲೇ ನೀಡಬೇಕೆಂಬ ಮನವಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರಿಗೆ ನೀಡಿದ್ದರು. ಅದನ್ನು ಪುರಸ್ಕರಿಸಿರುವ ಸಚಿವರು ಚಾಮುಂಡೇಶ್ವರಿ ತಾಯಿಗೆ ಜಿಲ್ಲಾಡಳಿತದಿಂದಲೇ ಸೀರೆಯನ್ನು ನೀಡುವಂತಾಗಬೇಕೆಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರಿಗೆ ಆದೇಶ ಮಾಡಿದ್ದಾರೆ.
ಈ ನಿರ್ಧಾರಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಏಕೆಂದರೆ ಈ ಹಿಂದೆ ನಡೆದ ದಸರಾದಲ್ಲಿ ಈ ಸೀರೆ ವಿಚಾರವೇ ವಿವಾದವನ್ನು ಹುಟ್ಟು ಹಾಕಿತ್ತು. ಒತ್ತಡಕ್ಕೆ ಮಣಿದು ದೇಗುಲದವರು ಎರಡು ಸೀರೆಯನ್ನು ದೇವಿಗೆ ಉಡಿಸುವಂತಹ ಪರಿಸ್ಥಿತಿಯೂ ನಿರ್ಮಾಣವಾಗಿತ್ತು.

ಹಾಗೆ ನೋಡಿದರೆ ಸುಮಾರು 15 ವರ್ಷಗಳಿಂದ ಬೆಂಗಳೂರಿನ ಬಳೆಪೇಟೆಯ ವ್ಯಕ್ತಿಯೊಬ್ಬರು ಸೀರೆಯನ್ನು ನೀಡುತ್ತಾ ಬಂದಿದ್ದರು. ಅದಾದ ಬಳಿಕ ಸಿದ್ದರಾಮಯ್ಯ ಅವರ ಕಾಲದಲ್ಲಿ ಅವರ ಪತ್ನಿ ಸೀರೆಯನ್ನು ನೀಡಿದ್ದರು. ಇದು ಗೊಂದಲಕ್ಕೆ ಕಾರಣವಾಗಿತ್ತು. ಆ ಸಂದರ್ಭ ಬಳೆಪೇಟೆಯ ವ್ಯಕ್ತಿಯ ಮನವೊಲಿಸಿ ಸಿದ್ದರಾಮಯ್ಯ ಅವರ ಪತ್ನಿ ನೀಡಿದ ಸೀರೆಯನ್ನು ದೇವಿಗೆ ಉಡಿಸಲಾಗಿತ್ತು.
ಇದಾದ ಬಳಿಕ ದೇವಿಗೆ ಸೀರೆ ಕೊಡಲು ಪ್ರಭಾವಿಗಳು ಮುಂದೆ ಬರುವುದಲ್ಲದೆ, ಈ ಸಂಬಂಧ ಶಿಫಾರಸ್ಸು ಮಾಡುವುದು ಹೆಚ್ಚಾಗಿ ಗೊಂದಲವುಂಟಾಗಿತ್ತು. ಇದೆಲ್ಲವನ್ನು ತಡೆಯುವ ಸಲುವಾಗಿ ಜಿಲ್ಲಾಡಳಿತದಿಂದಲೇ ಸೀರೆಯನ್ನು ಉಡಿಸುವಂತೆ ಇತಿಹಾಸ ತಜ್ಞರಾದ ಪ್ರೊ. ನಂಜರಾಜೇ ಅರಸ್ ಅವರು ಮನವಿ ಮಾಡಿದ್ದಾರೆ. ಇದು ಉತ್ತಮ ಸಲಹೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದನ್ನು ಸಚಿವ ವಿ.ಸೋಮಣ್ಣ ಅವರು ಸ್ವೀಕರಿಸಿದ್ದು, ಮುಂದಿನ ದಿನಗಳಲ್ಲಿ ಸೀರೆ ವಿಚಾರದ ಗೊಂದಲಕ್ಕೆ ಇದರಿಂದ ತೆರೆ ಬಿದ್ದಂತಾಗಿದೆ.












Click it and Unblock the Notifications