ಕೊರೊನಾ ಚುರುಕಾಗಿರುವ ಈ ಹೊತ್ತಲ್ಲಿ ಮೈಸೂರಿನಲ್ಲಿ ಬೇರೆಯದೇ ಗುದ್ದಾಟ
ಮೈಸೂರು, ಏಪ್ರಿಲ್ 11: ಕೊರೊನಾ ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ದೇಶದಾದ್ಯಂತ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ರಾಜ್ಯದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.
ಆದರೆ ಮೈಸೂರಿನಲ್ಲಿ ದಿನೇ ದಿನೇ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲಿ ಬೇರೆಯದೇ ಗುದ್ದಾಟ ಆರಂಭವಾಗಿದೆ. ಮೈಸೂರು ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿತರು ಹೆಚ್ಚಾಗಲು ಕಾರಣ ಎನ್ನಲಾಗಿರುವ ನಂಜನಗೂಡಿನ ಜುಬಿಲಿಯಂಟ್ ಕಾರ್ಖಾನೆ ಕುರಿತು ಈ ಗುದ್ದಾಟ ನಡೆಯುತ್ತಿದೆ.
ಜುಬಿಲಿಯಂಟ್ ಕಾರ್ಖಾನೆ ತೆರೆಯುವ ಕುರಿತು ಬಿಜೆಪಿ ಸಂಸದ ಹಾಗೂ ಶಾಸಕರ ನಡುವೆ ಜಟಾಪಟಿ ಶುರುವಾಗಿದೆ. ಬಿಜೆಪಿಯ ಸಂಸದ ಪ್ರತಾಪ್ ಸಿಂಹ ಹಾಗೂ ಬಿಜೆಪಿಯವರೇ ಆದ ನಂಜನಗೂಡು ಶಾಸಕ ಹರ್ಷವರ್ಧನ್ ನಡುವೆ ಜುಬಿಲಿಯಂಟ್ ಕಾರ್ಖಾನೆ ಕುರಿತು ಭಿನ್ನ ಅಭಿಪ್ರಾಯಗಳು ವ್ಯಕ್ತಗೊಂಡಿವೆ. ಸಂಸದ ಪ್ರತಾಪ ಸಿಂಹ, ಜುಬಿಲಿಯಂಟ್ ಕಾರ್ಖಾನೆಯನ್ನು ಮತ್ತೆ ಆರಂಭಿಸುವ ಕುರಿತು ಮಾತನಾಡುತ್ತಿದ್ದರೆ, ಶಾಸಕ ಹರ್ಷವರ್ಧನ್, ಕೊರೊನಾ ಸೋಂಕು ಹರಡಲು ಮೂಲವಾಗಿರುವ ಜುಬಿಲಿಯಂಟ್ ಕಾರ್ಖಾನೆಯ ಕುರಿತು ತನಿಖೆ ನಡೆಯಲೇಬೇಕು ಎಂದು ಪಟ್ಟುಹಿಡಿದಿದ್ದಾರೆ.

ಒಂದೇ ಪಕ್ಷದ ಇಬ್ಬರು ಜನಪ್ರತಿನಿಧಿಗಳಲ್ಲಿ ಹೀಗೆ ವೈರುಧ್ಯದ ಹೇಳಿಕೆಗಳು ಬರುತ್ತಿರುವುದು ಜನರಲ್ಲಿ ಕುತೂಹಲದ ಜೊತೆ ಗೊಂದಲವನ್ನೂ ಹೆಚ್ಚಿಸಿದೆ. ಮೊನ್ನೆಯಷ್ಟೇ ಶಾಸಕ ಹರ್ಷವರ್ಧನ್, ಜಿಲ್ಲೆಯಲ್ಲಿ ಕೊರೊನಾ ಈ ಮಟ್ಟಿಗೆ ಹರಡಲು ಕಾರ್ಖಾನೆ ಬೇಜವಾಬ್ದಾರಿತನ ನೇರ ಕಾರಣ. ಈ ಕಾರ್ಖಾನೆ ಆರಂಭಿಸಲು ರಾಜಕಾರಣಿಗಳು, ಉದ್ಯಮಿಗಳಿಂದ ಒತ್ತಡ ಬರುತ್ತಿದೆ, ಆದರೆ ನಾನು ಅವರ ಹೆಸರು ಹೇಳುವುದಿಲ್ಲ ಎಂದಿದ್ದರು.
ಸಂಸದ ಪ್ರತಾಪ ಸಿಂಹ, ರಾಜಕಾರಣಿಗಳು ಪರಾಮರ್ಶೆ ಮಾಡಿ ಹೇಳಿಕೆ ನೀಡಬೇಕು, ಕಾರ್ಖಾನೆ ತೆರೆಯುವುದು ಕಾರ್ಮಿಕರ ಅಸ್ತಿತ್ವದ ಪ್ರಶ್ನೆ. ಕಾರ್ಖಾನೆ ತೆರೆಯುವುದು ಅತ್ಯಗತ್ಯ ಎಂದಿದ್ದಾರೆ. ಇದು ಜನರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಲ್ಲದೇ ಸ್ಥಳೀಯ ಶಾಸಕರೇ ಕಾರ್ಖಾನೆ ಆರಂಭಕ್ಕೆ ವಿರೋಧಿಸುವಾಗ ಸಂಸದರೇಕೆ ಕಾರ್ಯಾರಂಭಕ್ಕೆ ಒಲವು ತೋರುತ್ತಿದ್ದಾರೆ ಎಂಬುದೂ ಮುಖ್ಯ ಪ್ರಶ್ನೆಯಾಗಿದೆ.












Click it and Unblock the Notifications