ಸಿದ್ದರಾಮಯ್ಯನ್ನ ಟಚ್ ಮಾಡಿದರೆ ಜನ ಸುಮ್ಮನಿರಲ್ಲ; ದಿನೇಶ್ ಗುಂಡೂರಾವ್
ಮೈಸೂರು, ಅಕ್ಟೋಬರ್ 19: "ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಮನೆ ಮೇಲೆ ಐಟಿ ದಾಳಿಯಾಗಿದೆ. ಅದೇ ರೀತಿ ಸಿದ್ದರಾಮಯ್ಯ ಅವರನ್ನು ಕಟ್ಟಿ ಹಾಕಲು ಪ್ಲಾನ್ ರೂಪಿಸಲಾಗಿದೆ. ಸಿದ್ದರಾಮಯ್ಯ ಅವರನ್ನು ಟಚ್ ಮಾಡಿದರೆ ರಾಜ್ಯದ ಜನ ಸುಮ್ಮನಿರಲ್ಲ" ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ದಿನೇಶ್ ಗುಂಡೂರಾವ್, "ಡಿಕೆಶಿ, ಪರಮೇಶ್ವರ್ ಮೇಲೆ ಐಟಿ ಅಸ್ತ್ರ ಬಳಸುತ್ತಾರೆ. ಹಾಗೆಯೇ ಸಿದ್ದರಾಮಯ್ಯರನ್ನು ಮುಗಿಸಲು ಪ್ರಯತ್ನ ಮಾಡ್ತಾರೆ. ಆದರೆ ಅದು ಸಾಧ್ಯವಿಲ್ಲ. ಸಿದ್ದರಾಮಯ್ಯ ಬಗ್ಗೆಯೂ ಸಂಚು ರೂಪಿಸುತ್ತಿದ್ದಾರೆ. ರಾಜ್ಯದಲ್ಲಿ ಪ್ರವಾಹ ಉಂಟಾಗಿದ್ದರೂ ಹಣ ನೀಡದೆ ಚುನಾವಣೆ ದೃಷ್ಟಿಯಿಂದ ಇದೀಗ ಸ್ವಲ್ಪ ಹಣ ನೀಡಿದ್ದಾರೆ. ಐಟಿ ಅಸ್ತ್ರ ಬಳಸಿ ಎಲ್ಲಾ ವ್ಯವಸ್ಥೆಯನ್ನು ಬಿಜೆಪಿ ಬದಲಾವಣೆ ಮಾಡ್ತಿದೆ. ಇತ್ತೀಚೆಗೆ ನ್ಯಾಯಾಲಯದ ಮೇಲೂ ನಂಬಿಕೆ ಹೋಗಿದೆ" ಎಂದು ಹೇಳಿದರು.
"ದೇಶದಲ್ಲಿ ಬಿಜೆಪಿ ಭಯದ ವಾತಾವರಣ ಉಂಟುಮಾಡಿದೆ. ಕಾಂಗ್ರೆಸ್ ನಾಯಕರನ್ನ ಕಟ್ಟಿ ಹಾಕಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ. ಆದರೆ ಜನರು ಅವರಿಗೆ ತಕ್ಕ ಪಾಠ ಕಲಿಸುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಗಟ್ಟಿಯಾಗಿದೆ. ಹುಣಸೂರು, ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಗೆಲ್ಲುತ್ತೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

"ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ. ಸಿದ್ದರಾಮಯ್ಯ ಆಡಳಿತದಲ್ಲಿದ್ದಾಗ ಈ ರಾಜ್ಯದ ಜನತೆ ಸರಿಯಾಗಿ ಅರ್ಥ ಮಾಡಿಕೊಳ್ಳಲಿಲ್ಲ. ಬಿಜೆಪಿ ಯಾವುದೇ ಕೆಲಸಗಳನ್ನ ಮಾಡದೇ ಕೇವಲ ಪ್ರಚಾರ ಗಿಟ್ಟಿಸಿ ಚುನಾವಣೆಗೆ ಹೋಗ್ತಿದೆ. ಸಿದ್ದರಾಮಯ್ಯ ಐದು ವರ್ಷ ರಾಜ್ಯದ ಎಲ್ಲಾ ವರ್ಗದ ಜನರಿಗಾಗಿ ಕೆಲಸ ಮಾಡಿದರು. ಆದರೆ ಬಿಜೆಪಿ ವೀರಶೈವ, ಟಿಪ್ಪು ಜಯಂತಿ ಸದಾಶಿವ ಆಯೋಗ ಅನ್ನುವ ಸಣ್ಣ ಪುಟ್ಟ ವಿಷಯಗಳನ್ನು ತೆಗೆದುಕೊಂಡು ಜನರಲ್ಲಿ ಗಲಭೆ ಹಬ್ಬಿಸುತ್ತಿದ್ದಾರೆ" ಎಂದು ಕಿಡಿಕಾರಿದರು.












Click it and Unblock the Notifications