ಲೋಕಸಭಾ ಚುನಾವಣೆಗೆ ನಿಮಗೆಲ್ಲಾ ಆಮಂತ್ರಣ ನೀಡುತ್ತಿದೆ ಈ ಮದುವೆ ಕರೆಯೋಲೆ
ಮೈಸೂರು, ಏಪ್ರಿಲ್ 13 : ಲೋಕಸಭಾ ಮತದಾನದ ಪ್ರಾಂವನ್ನು ಹೆಚ್ಚಿಸಲು ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಶತಾಯ ಗತಾಯ ಪ್ರಯತ್ನಪಡುತ್ತಿದೆ. ಇನ್ನೊಂದೆಡೆ ಸ್ವೀಪ್ ಸಮಿತಿಯು ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಸೈಕಲ್ ಜಾಥಾ, ಪಾದಯಾತ್ರೆ ಮೂಲಕ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗುತ್ತಿದೆ. ಜಿಲ್ಲಾ ಮತ್ತು ತಾಲ್ಲೂಕು ಆಡಳಿತಗಳು ಸಂಕಲ್ಪ ಪತ್ರ ಸೇರಿದಂತೆ ಹಲವು ಬಗೆಯ ಜಾಗೃತಿ ಪತ್ರಗಳನ್ನು ಮನೆ ಮನೆಗಳಿಗೆ ತಲುಪಿಸುತ್ತಿವೆ.
ಇದೆಲ್ಲದರ ನಡುವೆ ಮತದಾನ ಜಾಗೃತಿ ಕುರಿತಂತೆ 'ಲಗ್ನಪತ್ರಿಕೆ' ಮಾದರಿಯಲ್ಲಿ ಮುದ್ರಿಸಿದ ಜಾಗೃತಿ ಕರಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತ ಗಮನ ಸೆಳೆಯುತ್ತಿದೆ. ಈ ವಿಭಿನ್ನ ಮದುವೆ ಆಮಂತ್ರಣ ಪತ್ರಿಕೆಯ ದಿನೇ ದಿನೇ ವೈರಲ್ ಆಗಿ ಲಕ್ಷಾಂತರ ಜನರನ್ನು ತಲುಪುತ್ತಿದೆ.
ಮತದಾನದ ಮಮತೆಯ ಕರೆಯೋಲೆ ಎಂದು ಆರಂಭವಾಗುವ ಈ ಲಗ್ನಪತ್ರಿಕೆಯಲ್ಲಿ ದೇವರ ಹೆಸರು ಇರಬೇಕಾದ ಜಾಗದಲ್ಲಿ 'ಶ್ರೀ ಚುನಾವಣಾ ಆಯೋಗ ಪ್ರಸನ್ನ' ಎಂದಿದೆ. ಭಾರತ ಮಾತೆಯ ಸುಪುತ್ರನಾದ ಚಿ.ಮತದಾರ ಜತೆ ಚಿ.ಕುಂ.ಸೌ ಪ್ರಜಾಪ್ರಭುತ್ವ (ತಮ್ಮೆಲ್ಲರ ಪ್ರೀತಿಯ ಸುಪುತ್ರಿ) ಮದುವೆಯನ್ನು ಭಾರತ ಚುನಾವಣಾ ಆಯೋಗ ನಿಶ್ಚಯಿಸಿದೆ.

ಈ ಮಹತ್ವದ ಶುಭ ಕಾರ್ಯದಲ್ಲಿ ತಮ್ಮ ಅಮೂಲ್ಯವಾದ ನೈತಿಕ ಮತವನ್ನು ಚಲಾಯಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿಹಿಡಿದು ಜನರಿಂದ ಜನರಿಗೋಸ್ಕರ ಸಂವಿಧಾನ ಬದ್ಧ ಆಡಳಿತ ವ್ಯವಸ್ಥೆಯನ್ನು ಬಲಪಡಿಸಲು ವಿನಂತಿ. ಶುಭ ಮುಹೂರ್ತ ಲೋಕಸಭೆ ಚುನಾವಣೆ 2019, ಮಂಗಳವಾರ 23 ರಂದು, ಸ್ಥಳ ಮತ್ತು ಸಮಯ ಜಿಲ್ಲೆಯ ಎಲ್ಲ ಮತದಾನ ಕೇಂದ್ರಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6ರ ವರೆಗೆ ಮದುವೆ ಜರುಗಲಿದೆ.
ಉಡುಗೊರೆ ಇರುವುದಿಲ್ಲ. ಹಣ, ಹೆಂಡ ಇತರೆ ದುಷ್ಟ ಆಮಿಷಕ್ಕೆ ಒಳಗಾಗದೇ ನೈತಿಕ ಮಾಡಿದರೆ ಅದೇ ನಿಮ್ಮ ಉಡುಗೊರೆ, ಆಶೀರ್ವಾದ ಎಂದು ಈ ವಿನೂತನ ಲಗ್ನಪತ್ರಿಕೆಯಲ್ಲಿ ಮುದ್ರಿಸಲಾಗಿದೆ.
ವ್ಯಾಟ್ಸಪ್ನಲ್ಲಿ ಗೆಳತಿಯೊಬ್ಬಳು ಕಳುಹಿಸಿದ ಈ ಲಗ್ನಪತ್ರಿಕೆ ನೋಡಿದ ತಕ್ಷಣವೇ ಗೊಂದಲಕ್ಕೆ ದೂಡಿತು. ಬಳಿಕ ನಿಧಾನವಾಗಿ ಓದಿ ನಕ್ಕಿದ್ದೇ ನಕ್ಕಿದ್ದು. ಇದೊಂದು ವಿನೂತನ ಪ್ರಯತ್ನ. ಜನರನ್ನು ಆಕರ್ಷಿಸಿ, ಅವರಲ್ಲಿ ಸುಲಭವಾಗಿ ಮತದಾನದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಇದೊಂದು ಭಿನ್ನ ಪ್ರಯೋಗ. ತುಂಬಾ ಇಷ್ಟವಾಯಿತು ಎನ್ನುತ್ತಾರೆ ಓದುಗರು.
ಒಟ್ಟಿನಲ್ಲಿ ಈ ರೀತಿಯ ವಿಭಿನ್ನ ಪ್ರಯತ್ನ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.












Click it and Unblock the Notifications