ಟಿ.ನರಸೀಪುರದಿಂದ ಜೆಡಿಎಸ್ ಟಿಕೆಟ್ ಗಾಗಿ ಧರಣಿ ಸುಂದರೇಶನ್ ಕಸರತ್ತು?
ಮೈಸೂರು, ಸೆಪ್ಟೆಂಬರ್ 15 : ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮೀಸಲು ಕ್ಷೇತ್ರವಾಗಿರುವ ಟಿ. ನರಸೀಪುರದಿಂದ ಸ್ಪರ್ಧಿಸುವ ಜೆಡಿಎಸ್ ಆಕಾಂಕ್ಷಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ನರಸೀಪುರ ಕ್ಷೇತ್ರದ ಕಾಂಗ್ರೆಸ್ ನ ಸಂಭವನೀಯ ಅಭ್ಯರ್ಥಿ ಸುನೀಲ್ ಬೋಸ್ ಅವರಿಗೆ ಸ್ಪರ್ಧೆ ನೀಡಲು ಧರಣಿ ಸುಂದರೇಶನ್ ಮುಂದಾಗಿದ್ದು, ಜೆಡಿಎಸ್ ನಿಂದ ಟಿಕೆಟ್ ಪಡೆಯಲು ಕಸರತ್ತು ನಡೆಸುತ್ತಿದ್ದಾರೆ.

ಟಿ.ನರಸೀಪುರ ಮೀಸಲು ಕ್ಷೇತ್ರದಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ ಅತ್ಯಲ್ಪ ಮತಗಳಿಂದ ಎಂ.ಸಿ. ಸುಂದರೇಶನ್ ಸೋಲುಕಂಡಿದ್ದರು.
ಇತ್ತೀಚೆಗೆ ಎಂ.ಸಿ. ಸುಂದರೇಶನ್ ವಿಧಿವಶರಾದ ಹಿನ್ನೆಲೆಯಲ್ಲಿ ಅವರ ಕುಟುಂಬದಿಂದ ಯಾರಾದರೂ ಸ್ಪರ್ಧಿಸುವಂತೆ ಅವರ ಮೇಲೆ ಕೆಲವು ಜೆಡಿಎಸ್ ಕಾರ್ಯಕರ್ತರು ಒತ್ತಡ ಹೇರಿದ್ದಾರೆ ಎನ್ನಲಾಗುತ್ತಿದ್ದು, ಅದರಂತೆ ಇದೀಗ ಸುಂದರೇಶನ್ ಪತ್ನಿ ಧರಣಿ ಸುಂದರೇಶನ್ ಅವರು ಕ್ಷೇತ್ರದಲ್ಲಿ ಜೆಡಿಎಸ್ ಸಂಘಟನೆಯಲ್ಲಿ ತೊಡಿಗಿದ್ದಾರೆ.
ಹಿಗಾಗಲೇ ಮಹಿಳೆಯರನ್ನು ಜೆಡಿಎಸ್ ಗೆ ಸೇರ್ಪಡೆ ಮಾಡುವ ಪ್ರಯತ್ನಗಳನ್ನು ಧರಣಿ ಮಾಡುತ್ತಿದ್ದು, ಆ ಮೂಲಕ ತಾನು ಟಿಕೆಟ್ ಆಕಾಂಕ್ಷಿ ಎಂಬುದನ್ನು ಪಕ್ಷದ ವರಿಷ್ಠರಿಗೆ ರವಾನಿಸಿದ್ದಾರೆ.
ಧರಣಿ ಸುಂದರೇಶನ್ ದಲಿತ ಕುಟುಂಬಕ್ಕೆ ಸೇರಿದವರಾಗಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪತಿ ಸುಂದರೇಶನ್ ಅವರೊಂದಿಗೆ ಕ್ಷೇತ್ರದಲ್ಲಿ ಸಂಚರಿಸಿ ಕ್ಷೇತ್ರದಲ್ಲಿ ಮತದಾರರ ಜೊತೆಯಲ್ಲಿ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಆ ಹಿನ್ನಲೆಯಲ್ಲಿ ಈ ಬಾರಿ ತಾವೇ ಚುನಾವಣೆಗೆ ಸ್ಪರ್ಧಿಸಲು ಈಗಿನಿಂದಲೇ ತಯಾರಿ ನಡೆಸಿದ್ದಾರೆ.
ಈ ಭಾಗದಲ್ಲಿ ಮಹಿಳಾ ನಾಯಕಿಯಾಗಿ ಕ್ಷೇತ್ರದಿಂದ ಹೊರಹೊಮ್ಮಬೇಕೆನ್ನುವ ಆಸೆಯನ್ನು ಕಾರ್ಯಕರ್ತರು ವ್ಯಕ್ತಪಡಿಸುತ್ತಿರುವುದರಿಂದ ಇದೀಗ ಕ್ಷೇತ್ರದಾದ್ಯಂತ ಸಂಚರಿಸಿ ಜೆಡಿಎಸ್ ಸಂಘಟನೆ ಮಾಡುವ ಕೆಲಸವನ್ನು ಮಾಡುತ್ತಿದ್ದು, ಯಾವುದೇ ಕಾರಣಕ್ಕೂ ಕ್ಷೇತ್ರದ ಜನರೊಂದಿಗೆ ಇರುವ ಬಾಂಧವ್ಯವನ್ನು ದೂರ ಮಾಡಿಕೊಳ್ಳುವುದಿಲ್ಲ ಎಂದು ಹೇಳುತ್ತಿದ್ದಾರೆ.
ಇವರ ಹುಮ್ಮಸ್ಸಿಗೆ ವರಿಷ್ಠರು ಯಾವ ರೀತಿಯಲ್ಲಿ ಸ್ಪಂದಿಸುತ್ತಾರೆ ಎನ್ನುವುದು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ. ಜೆಡಿಎಸ್ ನಲ್ಲಿ ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅಲ್ಲದೆ ಈಗಾಗಲೇ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಭದ್ರವಾಗಿ ನೆಲೆಯೂರಿದ್ದರಿಂದ ಅವರಿಗೆ ಸ್ಪರ್ಧೆ ನೀಡೋರು ಬೇಕಾಗಿದ್ದಾರೆ.












Click it and Unblock the Notifications