ಮೈಸೂರು ನಗರದಲ್ಲಿ ಬ್ಯಾಟರಿ ಚಾಲಿತ ವಾಹನಗಳಿಗೆ ಬೇಡಿಕೆ!
ಮೈಸೂರು, ಜನವರಿ 14; ಇಡೀ ಜಗತ್ತಿನಲ್ಲಿ ದ್ವಿಚಕ್ರ ವಾಹನಗಳಿಗೆ ಭಾರತ ಅತಿ ದೊಡ್ಡ ಮಾರುಕಟ್ಟೆ ಒದಗಿಸಿದೆ. ಆದರೆ ಇಲ್ಲಿನ ನಾನಾ ನಗರದಲ್ಲಿ ಮಾಲಿನ್ಯ ನಿರಂತರವಾಗಿ ಹೆಚ್ಚುತ್ತಿದೆ. ಜೊತೆಗೆ ತೈಲ ಬೆಲೆ ಏರಿಕೆಯಿಂದ ತತ್ತರಿಸಿರುವ ನಾಗರಿಕರು ಪರ್ಯಾಯ ಮಾರ್ಗದತ್ತ ಯೋಚಿಸುತ್ತಿದ್ದಾರೆ.
ಇದಕ್ಕೆ ಪೂರಕವೆಂಬಂತೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬ್ಯಾಟರಿ ಚಾಲಿತ ವಾಹನಗಳ ಸಂಚಾರ ಹೆಚ್ಚಾಗಿದ್ದು, ನೋಂದಣಿ ಕಾರ್ಯ ಬಿರುಸುಗೊಂಡಿದೆ. ಕಳೆದ ಮೂರು ವರ್ಷಗಳಲ್ಲಿ ಸಾರಿಗೆ ಇಲಾಖೆಯಲ್ಲಿ 300ಕ್ಕೂ ಹೆಚ್ಚು ಬ್ಯಾಟರಿ ಚಾಲಿತ ವಾಹನ ನೋಂದಣಿಯಾಗಿದೆ.
ಇವುಗಳಲ್ಲಿ 34 ಬ್ಯಾಟರಿ ಚಾಲಿತ ಕಾರುಗಳಿದ್ದರೆ, 259 ದ್ವಿಚಕ್ರ ವಾಹನಗಳು ಜೊತೆಗೆ ತ್ರಿಚಕ್ರ ಆಟೋ ರಿಕ್ಷಾಗಳು ಸಹ ಪ್ರಯಾಣಿಕರನ್ನು ಸೆಳೆಯುತ್ತಿದೆ. ಬ್ಯಾಟರಿ ಸಾಮರ್ಥ್ಯದ ಮೇಲೆ ವಾಹನಗಳು ಸಾರಿಗೆ ಇಲಾಖೆಯಲ್ಲಿ ನೋಂದಣಿಯಾಗಲಿದ್ದು, ನೋಂದಣಿಯಾಗದ ವಾಹನಗಳ ಸಂಖ್ಯೆ ಮೂರು ಸಾವಿರ ದಾಟಿದೆ. ಆ ಮೂಲಕ ತೈಲ ಬಳಕೆ ಅನಿವಾರ್ಯತೆ ತಪ್ಪಿಸಿಕೊಳ್ಳುವುದಕ್ಕಾಗಿ ಪರ್ಯಾಯ ಮಾರ್ಗದತ್ತ ನಾಗರಿಕರು ದಾಪುಗಾಲು ಇಡುತ್ತಿದ್ದಾರೆ. ವಾಹನ ಉದ್ಯಮ ವಲಯದಲ್ಲಿ ಬ್ಯಾಟರಿ ಚಾಲಿತ ವಾಹನ ಗಮನ ಸೆಳೆದಿದ್ದು, ಮೈಸೂರು 'ಹಸಿರು ನಗರಿ'ಯಾಗುವತ್ತ ಸಾಗಿದೆ.

ಬೇಡಿಕೆ ಹೆಚ್ಚು; ಕಂಪನಿಯೊಂದರ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಹೇಳುವ ಪ್ರಕಾರ, "ಹೆಚ್ಚು ಯುವಜನತೆ ಬ್ಯಾಟರಿ ಚಾಲಿತ ವಾಹನಗಳ ಆಕರ್ಷಣೆಗೆ ಒಳಗಾಗಿದ್ದಾರೆ. ಬಹಳಷ್ಟು ಕಾಲೇಜು ಹುಡುಗರು ಶೋರೂಂಗೆ ಬಂದು ವಿಚಾರಿಸಿಕೊಂಡು ಹೋಗುತ್ತಿದ್ದಾರೆ. 250 ವ್ಯಾಟ್ಸ್ ಒಳಗಿನ ಸಾಮರ್ಥ್ಯದ ಬ್ಯಾಟರಿ ಚಾಲಿತ ವಾಹನಗಳಿಗೆ ಆರ್ಟಿಒ (ಸಾರಿಗೆ ಇಲಾಖೆ)ದಲ್ಲಿ ನೋಂದಣಿ ಮಾಡಿಸುವ ಅಗತ್ಯವಿಲ್ಲ. ಆದರೆ 250 ವ್ಯಾಟ್ಸ್ಗಿಂತ ಮೇಲ್ಪಟ್ಟ 3,200 ವ್ಯಾಟ್ಸ್ ವರೆಗಿನ ಸ್ಕೂಟರ್ ಮತ್ತು ಬೈಕ್ಗಳನ್ನು ಆರ್ಟಿಒ ಕಚೇರಿಯಲ್ಲಿ ನೋಂದಣಿ ಮಾಡಿಸಬೇಕಿದೆ" ಎಂದರು.
ಬದಲಾದ ಚಿತ್ರಣ; ಮುಂಚೆ ಬ್ಯಾಟರಿ ಚಾಲಿತ ವಾಹನ ಎಂದರೆ ಜನ ಮೂಗು ಮುರಿಯುತ್ತಿದ್ದರು. ಅಷ್ಟೊಂದು ಉತ್ಸುಕತೆ ತೋರುತ್ತಿರಲಿಲ್ಲ. ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ. ಎಲ್ಲರಲ್ಲೂ ಪರಿಸರ ಕಾಳಜಿ ಜೊತೆಗೆ ತೈಲ ಬೆಲೆಯೂ ಪ್ರಮುಖ ಪಾತ್ರ ವಹಿಸುತ್ತಿದೆ. ಈಗಾಗಲೇ ಬಜಾಜ್ ಕಂಪನಿ ಅರ್ಬನೈಟ್ ಎಂಬ ಬ್ಯಾಟರಿ ಚಾಲಿತ ಸ್ಕೂಟರ್ ಅಭಿವೃದ್ಧಿಪಡಿಸಿದ್ದು, ಮಹಾರಾಷ್ಟ್ರದ ಕೆಲ ನಗರಗಳಲ್ಲಿ ಇದು ಸಂಚರಿಸುತ್ತಿದೆ. ಇದರ ಜೊತೆಗೆ ಒಕಿನೊವಾ, ಹೀರೊ, ಏಥರ್ ಎನರ್ಜಿ, ಅವನ್, ರಿವೊಲ್ಟ್ ಇಂಟಲಿಕಾರ್ಪ್ ಕಂಪನಿಗಳು ತಮ್ಮ ವಾಹನಗಳನ್ನು ಪರಿಚಯಿಸಿವೆ. ಆದರೆ ಎಂಜಿನ್ ಚಾಲಿತ ಬೈಕ್ ಮತ್ತು ಸ್ಕೂಟರ್ ತಯಾರಿಕೆಯಲ್ಲಿ ಹೆಸರು ಮಾಡಿರುವ ಕಂಪನಿಗಳೊಂದಿಗೆ ಇವು ಪೈಪೋಟಿ ಎದುರಿಸಬೇಕಿದೆ.
ಈ ಹೊಸ ಬದಲಾವಣೆ ಬಗ್ಗೆ ಸಾರಿಗೆ ಇಲಾಖೆ ಜಂಟಿ ಆಯುಕ್ತ ಸಿ. ಟಿ. ಮೂರ್ತಿ ಮಾತನಾಡಿ, "ದಶಕದ ಹಿಂದೆಯೇ ನಗರದಲ್ಲಿ ಬ್ಯಾಟರಿ ಚಾಲಿತ ವಾಹನಗಳು ಬಂದರೂ ಸೂಕ್ತ ಪ್ರಚಾರ ಮತ್ತು ವಾಹನ ಸವಾರರ ಆಸಕ್ತಿ ಕೊರತೆ ಕಾರಣಕ್ಕೆ ಹೆಚ್ಚು ವಾಹನಗಳು ರಸ್ತೆಗಿಳಿಯಲಿಲ್ಲ. ಆದರೆ ಪೆಟ್ರೋಲ್ ಮತ್ತು ಡಿಸೇಲ್ ದರ ಗಗನಕ್ಕೇರುತ್ತಿರುವುದರಿಂದ ಜನ ಸಾಮಾನ್ಯರು ಇದೀಗ ಪರಿಸರಕ್ಕೆ ಪೂರಕವಾದ ವಾಹನಗಳ ಕಡೆ ಮುಖ ಮಾಡಿದ್ದಾರೆ. 300ಕ್ಕೂ ಹೆಚ್ಚು ವಾಹನಗಳು ಮೈಸೂರು ನಗರದಲ್ಲಿ ನೋಂದಣಿಯಾಗಿವೆ. ದ್ವಿಚಕ್ರ ವಾಹನಗಳೊಂದಿಗೆ ತ್ರಿ ಚಕ್ರ ಹಾಗೂ ನಾಲ್ಕು ಚಕ್ರಗಳ ಬ್ಯಾಟರಿ ಚಾಲಿತ ಕಾರುಗಳ ಸಂಚಾರ ಹೆಚ್ಚಾಗಿದೆ" ಎಂದರು.
ಈ ವಾಹನಗಳಿಗೆ ಆಗ್ಗಿಂದ್ದಾಗ್ಗೆ ಚಾರ್ಜ್ ಮಾಡಬೇಕಾಗುತ್ತದೆ. 2 ಗಂಟೆ ಚಾರ್ಜ್ಗೆ 60 ಕಿಮೀ ಸಂಚರಿಸುವ ಶಕ್ತಿ ಇದೆ. ಹಾಗಾಗಿ ದೇಶದಲ್ಲೂ ವಿದ್ಯುತ್ ಬಳಕೆ ಹೆಚ್ಚಾಗಿದೆ.












Click it and Unblock the Notifications