ಶ್ರೀಕಂಠನ ಮುಂದೆ ಧ್ಯಾನದಲ್ಲಿ ತಲ್ಲೀನರಾದ ಡಿಸಿ ರೋಹಿಣಿ ಸಿಂಧೂರಿ
ಮೈಸೂರು, ಅಕ್ಟೋಬರ್ 6: ಮೈಸೂರು ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ಬಂದಿರುವ ರೋಹಿಣಿ ಸಿಂಧೂರಿ ಅವರು ಇಂದು ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಮೊದಲ ಬಾರಿಗೆ ಭೇಟಿ ನೀಡಿ, ದೇವರ ಆಶೀರ್ವಾದ ಪಡೆದುಕೊಂಡರು.
ದೇವಸ್ಥಾನದಲ್ಲಿ ಸುಮಾರು ಅರ್ಧ ಗಂಟೆ ಶ್ರೀಕಂಠೇಶ್ವರನ ಮುಂದೆ ಧ್ಯಾನ ಮಾಡಿದರು. ನಂಜುಂಡನಿಗೆ ಹಾಲು, ಎಳನೀರು ಅಭಿಷೇಕ ಮಾಡಿಸಿ ಪ್ರಾರ್ಥನೆ ಸಲ್ಲಿಸಿದರು. ಪೂಜೆಯ ನಂತರ ಕಪಿಲಾ ನದಿಯ ಸ್ನಾನಘಟಕ್ಕೆ ತೆರಳಿ ಅಲ್ಲಿನ ಸ್ಥಿತಿಗತಿಯನ್ನು ವೀಕ್ಷಿಸಿದರು.
ಎರಡು ವಾರ ಸಮಯ ಕೊಡಿ, ಕೊರೊನಾ ನಿಯಂತ್ರಣ ಮಾಡುತ್ತೇವೆ: ಮೈಸೂರು ಡಿಸಿ ರೋಹಿಣಿ ಸಿಂಧೂರಿ
ಇದೇ ಸಂದರ್ಭದಲ್ಲಿ ದೇವಾಲಯದ ಅರ್ಚಕರು ದೇವಸ್ಥಾನದ ಕೆಲವು ಸಮಸ್ಯೆಗಳನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದರು. ದೇವಾಲಯದ ಒಳಭಾಗದಲ್ಲಿ ಶುದ್ಧ ಬಾವಿ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಬೇಸಿಗೆ ಸಂದರ್ಭದಲ್ಲಿ ಕಪಿಲಾ ನದಿಯಲ್ಲಿ ನೀರು ತುಂಬಾ ಕಲುಷಿತವಾಗುತ್ತದೆ. ಅದನ್ನು ದೇವರ ಅಭಿಷೇಕಕ್ಕೆ ಉಪಯೋಗಿಸಲು ಆಗುವುದಿಲ್ಲ. ಹಾಗಾಗಿ ಬಾವಿ ವ್ಯವಸ್ಥೆ ಮಾಡಿಸಿ ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಭರವಸೆ ನೀಡಿದರು.
ಮೈಸೂರಿನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡುವ ಮೊದಲು ರೋಹಿಣಿ ಸಿಂಧೂರಿ ಅವರು ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದಿದ್ದರು. ಇದೀಗ ಇಂದು ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ದೇವರ ದರ್ಶನ ಪಡೆದಿದ್ದಾರೆ.