ದಸರಾ ಬಂದರೂ ಮೈಸೂರಿಗರಿಗಿಲ್ಲ ಮಹಾಪೌರರನ್ನು ನೋಡುವ ಭಾಗ್ಯ
ಮೈಸೂರು, ಅಕ್ಟೋಬರ್ 04 : ನಾಡಹಬ್ಬ ದಸರಾ ಮಹೋತ್ಸವ ಈ ಬಾರಿ ಮಹಾಪೌರರ ಉಪಸ್ಥಿತಿ ಇಲ್ಲದೆ ನಡೆಯುವ ಸಾಧ್ಯತೆಗಳು ದಟ್ಟವಾಗಿದೆ. ದಸರಾ ಮುಗಿಯುವ ಮುನ್ನ ಮಹಾಪೌರರು ಮತ್ತು ಉಪಮಹಾಪೌರರ ಚುನಾವಣೆ ನಡೆಯುವುದು ಅಸಾಧ್ಯ ಎಂದು ಮೂಲಗಳು ತಿಳಿಸಿವೆ.
ಸುಮಾರು 23 ವರ್ಷ (1995)ಗಳ ಹಿಂದೆ ಮಹಾಪೌರರಿಲ್ಲದೆ ದಸರಾ ಕಾರ್ಯ ಕ್ರಮಗಳು ನಡೆದಿದ್ದವು. ಈಗ್ಗೆ 12 ವರ್ಷದ ಹಿಂದೆ ಅಂದರೆ 2006 ಮತ್ತು 2007ರಲ್ಲಿ ಮಹಾನಗರಪಾಲಿಕೆಗೆ ಚುನಾಯಿತ ಸದಸ್ಯರಿಲ್ಲದೆ ದಸರಾದಲ್ಲಿ ಮಹಾಪೌರರಿರಲಿಲ್ಲ.
2013ರಲ್ಲಿ ಚುನಾವಣೆ ನಡೆದಿದ್ದರೂ ಮಹಾಪೌರರ ಸ್ಥಾನದ ಮೀಸಲಾತಿ ನಿಗದಿಯಾಗದ ಹಿನ್ನೆಲೆಯಲ್ಲಿ ಹಾಗೂ ಹೊಸ ಸರ್ಕಾರ ಬಂದ ಕಾರಣ ಮಹಾಪೌರರ ಚುನಾವಣೆ ವಿಳಂಬವಾಗಿತ್ತು. ನಂತರ ಮಹಾಪೌರರ ಚುನಾವಣೆ ನಡೆದು ಮಹಾಪೌರರಾಗಿ ಆಯ್ಕೆಯಾದ ರಾಜೇಶ್ವರಿ ಸೋಮು ಕುದುರೆ ಏರಿದ್ದರು.

ಆದರೆ, ಈಗ ಮತ್ತೆ ಮಹಾಪೌರರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಮಹಾನಗರ ಪಾಲಿಕೆಯ ಮಹಾಪೌರರ ಸ್ಥಾನ ಸಾಮಾನ್ಯ ಮಹಿಳಾ ವರ್ಗಕ್ಕೆ ಹಾಗೂ ಉಪಮಹಾ ಪೌರರ ಸ್ಥಾನ ಹಿಂದುಳಿದ ವರ್ಗಕ್ಕೆ ಮೀಸಲಾಗಿದೆ.
ಚುನಾವಣೆಯಲ್ಲಿ ಜಯಗಳಿಸಿದರೂ ಮೊದಲ ಸಭೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ ನಂತರವೇ ಅಧಿಕೃತವಾಗಿ ನಗರಪಾಲಿಕೆ ಸದಸ್ಯರಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗಲಿದೆ. ಅಲ್ಲಿಯವರೆಗೆ ವಾರ್ಡ್ ನ ಯಾವುದೇ ಸಮಸ್ಯೆ ನಿವಾರಣೆಗೆ ಮುಂದಾಗಲು ಸಾಧ್ಯವಾಗದು.
ಇದಕ್ಕಾಗಿ ಯಾವಾಗ ಸಭೆ ನಡೆದು ಪ್ರಮಾಣ ವಚನ ಸ್ವೀಕರಿಸುತ್ತೇವೊ ಎಂದು ನೂತನ ಸದಸ್ಯರು ಕಾದು ಕುಳಿತಿದ್ದಾರೆ. ಅಷ್ಟೇ ಅಲ್ಲ, ದಸರಾ ಆರಂಭಕ್ಕೆ ಮುನ್ನವೇ ಚುನಾವಣೆ ನಡೆದರೆ ದಸರಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಬಹುದು. ಕುದುರೆ ಸವಾರಿ ಮಾಡ ಬಹುದು ಎಂಬುದು ಮಹಾಪೌರರ ಆಕಾಂಕ್ಷಿಗಳ ಇರಾದೆಯಾಗಿದೆ.
ಆದರೆ ಸದಸ್ಯರಿಗೆ ದಸರಾ ಸಮಿತಿ ಸದಸ್ಯರಾಗುವ ಹಾಗೂ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಆತುರವಾಗಿದೆ. ಮಹಾಪೌರರಾಗಿದ್ದ ಬಿ.ಭಾಗ್ಯಲಕ್ಷ್ಮಿ ಹಾಗೂ ಉಪಮಹಾಪೌರರಾಗಿದ್ದ ಎಂ.ಇಂದಿರಾ ಅವರ ಅಧಿಕಾರಾವಧಿ ಸೆ.4ಕ್ಕೆ ಅಂತ್ಯವಾಗಿದೆ. ಪ್ರಾದೇಶಿಕ ಆಯುಕ್ತರಾಗಿರುವ ಕಪಿಲ್ ಮೋಹನ್ ಅವರು ಪ್ರಸ್ತುತ ಆಡಳಿತಾಧಿಕಾರಿಯಾಗಿದ್ದಾರೆ.
ಮೈಸೂರು ಮಹಾನಗರಪಾಲಿಕೆಯಲ್ಲಿ ಮೈತ್ರಿ ಆಡಳಿತದ ಸರಣಿ ಮುಂದುವರಿದಿದ್ದು, ಈ ಬಾರಿಯೂ ಯಾವುದೇ ಪಕ್ಷ ಬಹುಮತ ಸಾಧಿಸಲು ಸಾಧ್ಯವಾಗಿಲ್ಲ.












Click it and Unblock the Notifications