ಯಶಸ್ವಿಯಾದ ದಸರಾ ಉತ್ಸವ; ಅ.28ಕ್ಕೆ ಅರಣ್ಯದತ್ತ ಗಜಪಡೆ ಪಯಣ
ಮೈಸೂರು, ಅಕ್ಟೋಬರ್ 27: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಂಡು ಯಶಸ್ವಿಯಾಗಿ ಉತ್ಸವ ಮುಗಿಸಿಕೊಟ್ಟಿರುವ ಗಜಪಡೆಯು ಅ.28ರ ಬುಧವಾರ ಅರಣ್ಯದತ್ತ ವಾಪಸ್ ತೆರಳಲಿವೆ.
ಬುಧವಾರ ಕಾಡಿಗೆ ಹೋಗುವ ಹಿನ್ನೆಲೆಯಲ್ಲಿ ಅರಮನೆಯಲ್ಲಿ ಇಂದು ಅಭಿಮನ್ಯು ನೇತೃತ್ವದ ಗಜಪಡೆಗೆ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಅಭಿಮನ್ಯು, ವಿಜಯ, ಕಾವೇರಿ, ಗೋಪಿ ಮತ್ತು ವಿಕ್ರಮ ಆನೆಗಳನ್ನು ಸಾಲಾಗಿ ನಿಲ್ಲಿಸಿ ಅವುಗಳಿಗೆ ಭತ್ತ ಮತ್ತು ಕಬ್ಬು ನೀಡಿದರು. ದಸರಾವನ್ನು ಯಶಸ್ವಿಗೊಳಿಸಿದ್ದಕ್ಕೆ ಸಚಿವರು ಕೊಟ್ಟ ಭಕ್ಷಿಸ್ ಇದಾಗಿತ್ತು.
ಇದೇ ವೇಳೆ ಮಾವುತರು ಮತ್ತು ಕಾವಾಡಿಗಳಿಗೆ ಸಚಿವರು ಗೌರವ ಧನ ವಿತರಣೆ ಮಾಡಿದರು. ಜಂಬೂ ಸವಾರಿಯಲ್ಲಿ ಅಭಿಮನ್ಯುವಿನ ಯಶಸ್ಸಿನ ಬಗ್ಗೆ ಮಾವುತ ವಸಂತ ಸಂತಸಗೊಂಡಿದ್ದಾರೆ. ಇದೇ ಮೊದಲ ಬಾರಿಗೆ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ಕೊಟ್ಟ ಸಮಯದಲ್ಲಿ ಸ್ವಲ್ಪ ಹೆದರಿಕೆ ಇತ್ತು. ಆದರೆ ಹಿರಿಯ ಅಧಿಕಾರಿಗಳು ನನ್ನನ್ನು ಉತ್ತೇಜಿಸಿದರು ಎಂದು ವಸಂತ ಸಂತಸ ವ್ಯಕ್ತಪಡಿಸಿದ್ದಾರೆ.

ಕಳೆದ ಹಲವು ದಸರಾ ಸಮಯದಲ್ಲಿ ಅಭಿಮನ್ಯು ಮರದ ಅಂಬಾರಿ ಹೊತ್ತಿದ್ದನು. ಅಲ್ಲದೆ ಶ್ರೀರಂಗಪಟ್ಟಣದಲ್ಲಿ ನಡೆದ ದಸರಾದಲ್ಲಿ ಪುಷ್ಪಾರ್ಚನೆಯಲ್ಲಿ ಭಾಗಿಯಾಗಿದ್ದನು. ಈ ಹಿಂದೆ ಮರದ ಅಂಬಾರಿ ಹೊತ್ತ ಅನುಭವ ಇದ್ದ ಕಾರಣ ಚಿನ್ನದ ಅಂಬಾರಿಯನ್ನು ಹೊತ್ತು ಸಕ್ಸಸ್ ಆಗುತ್ತಾನೆ ಅಂತ ಗೊತ್ತಿತ್ತು. ಈಗ ಅಭಿಮನ್ಯು ತನಗೆ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾನೆ. ಇದರಿಂದ ನನಗೆ ಸಂತೋಷವಾಗಿದೆ ಎಂದು ವಸಂತ ಹೇಳಿಕೊಂಡಿದ್ದಾರೆ.












Click it and Unblock the Notifications