ಮೈಸೂರು ದಸರಾ: ಗಜಪಡೆಗೆ ಭಾರ ಹೊರಿಸುವ ತಾಲೀಮು ಶುರು
ಮೈಸೂರು, ಆಗಸ್ಟ್, 18: 2022ನೇ ಸಾಲಿನ ಮೈಸೂರು ದಸರಾಕ್ಕೆ ಭರದ ಸಿದ್ಧತೆ ನಡೆದಿದ್ದು, ಗಜಪಡೆಗೆ ಇಂದಿನಿಂದ ಭಾರ ಹೊರಿಸುವ ತಾಲೀಮಿಗೆ ಚಾಲನೆ ನೀಡಲಾಗಿದೆ. ವಿಶ್ವವಿಖ್ಯಾತ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಗಜಪಡೆ ಅರಮನೆಗೆ ಆಗಮಿಸಿದ್ದವು. ಇದೀಗ ಅರಮನೆ ಆವರಣದಲ್ಲಿ ಗಜಪಡೆಯ ವಾಸ್ತವ್ಯ ಹೂಡಿದ್ದು, ನಾಯಕ ಅಭಿಮನ್ಯು ನೇತೃತ್ವದಲ್ಲಿ ಗಜಪಡೆ ಭಾರ ಹೊತ್ತು ಸಾಗಿದೆ.
ದಿನಕ್ಕೆ ಎರಡು ಬಾರಿ 5 ಕಿಲೋ ಮೀಟರ್ ನಡೆಸಲು ತೀರ್ಮಾನಿಸಲಾಗಿದೆ. ಗಜಪಡೆಗೆ 300 ಕೆ.ಜಿ ಮರಳಿನ ಮೂಟೆ ಹೊರಿಸುವ ಮುಖಾಂತರ ತಾಲೀಮು ನಡೆಸಲಾಗಿದೆ. ಜಂಬೂ ಸವಾರಿ ಸಾಗುವ ರಾಜ ಬೀದಿಗಳಲ್ಲಿ ಅಭಿಮನ್ಯು ನೇತೃತ್ವದ ಗಜಪಡೆ ಭಾರ ಹೊತ್ತು ಸಾಗಿದೆ. ಆನೆಗಳ ಮೇಲಿಡುವ ಗಾದಿ ಮತ್ತು ನಮ್ದಾಗೆ ಪೂಜೆ ಸಲ್ಲಿಸಿ ತಾಲೀಮಿಗೆ ಚಾಲನೆ ನೀಡಲಾಯಿತು. ಆನೆಗಳಿಗೆ ಅರಮನೆ ಆವರಣದಲ್ಲಿರುವ ಶ್ರೀ ಕೋಡಿ ಸೋಮೇಶ್ವರ ದೇವಾಲಯದ ಮುಂಭಾಗ ಪೂಜೆ ಸಲ್ಲಿಸಲಾಯಿತು. ಆನೆಗಳ ಮೇಲೆ ಗಾದಿ, ನಮ್ದಾ ಇಟ್ಟು ತಾಲೀಮು ಆರಂಭಿಸಿದ್ದಾರೆ.
ಗಜಪಡೆಗೆ ಹೊರಿಸಲಾದ ಮೂಟೆಯ ಭಾರ?
ಈ ಬಗ್ಗೆ ಡಿಸಿಎಫ್ ಡಾ.ವಿ.ಕರಿಕಾಳನ್ ಮಾತನಾಡಿ ಇಂದು ತಾಲೀಮು ನಡೆಸಲಾಗುತ್ತಿದೆ. ಮೊದಲು 300 ಕೆ.ಜಿ ಮರಳಿನ ಮೂಟೆ ಇಟ್ಟು ತಾಲೀಮು ನಡೆಸಲಾಗುತ್ತಿದೆ. ಅರ್ಜುನನನ್ನು ಬಿಟ್ಟು 5 ಗಂಡು ಆನೆಗಳಿಗೆ ಭಾರ ಹೊರಿಸುವ ತಾಲೀಮನ್ನು ಐದು ದಿನ ನಡೆಸಲಾಗುತ್ತದೆ. 300 ಕೆ.ಜಿ.ಆದ ನಂತರ ಮತ್ತೆ ಹೆಚ್ಚಿಸುತ್ತೇವೆ. 750 ಕೆ.ಜಿ ಬರುವ ತನಕ ತಾಲೀಮು ನಡೆಸುತ್ತೇವೆ. ಇಲ್ಲಿಂದ ಬನ್ನಿಮಂಟಪ 5 ಕಿಲೋ ಮಿಟರ್ ಇದ್ದು, ನಾವು ಈಗಾಗಲೇ ಎರಡು ಬರಿ ಅವುಗಳನ್ನು ನಡೆಸಿದ್ದೇವೆ.

ಅಲ್ಲಿಗೆ ತಲುಪಲು ಒಂದು ಗಂಟೆಗೂ ಹೆಚ್ಚು ಸಮಯ ಬೇಕಾಯಿತು. ಇವತ್ತು ಕೂಡ ಭಾರ ಹೊತ್ತು ಆನೆಗಳು ಸಾಗಲಿವೆ. ಸೆಪ್ಟೆಂಬರ್ ಮೊದಲ ವಾರ ಎರಡನೇ ಹಂತದ ಆನೆಯನ್ನು ಕರೆತರಲಾಗುತ್ತದೆ. ಮರಳು ಮೂಟೆ 300 ಕೆ.ಜಿ, ನಮ್ದಾ, ಗಾದಿ, ಹಗ್ಗ ಸೇರಿ 500ರಿಂದ 550ಕೆ.ಜಿ ತೂಕ ಹೊತ್ತು ಆನೆಗಳು ಸಾಗುತ್ತಿವೆ. ಹಂತ ಹಂತವಾಗಿ ಭಾರ ಹೆಚ್ಚಿಸುವ ಮೂಲಕ ಮರದ ಅಂಬಾರಿ ಕಟ್ಟಿ ತಾಲೀಮು ನಡೆಸಲಾಗುತ್ತದೆ ಎಂದು ಡಿಸಿಎಫ್ ಡಾ.ವಿ.ಕರಿಕಾಳನ್ ತಿಳಿಸಿದರು.

ಮೊದಲು 300 ಕೆ.ಜಿ ತೂಕದ ಮರಳು ಮೂಟೆಯನ್ನು ಇಟ್ಟು ತಾಲೀಮು ನಡೆಸಲಾಗುತ್ತಿದೆ. ಹಂತ ಹಂತವಾಗಿ ತೂಕವನ್ನು ಹೆಚ್ಚಿಸಿ ಜಂಬೂ ಸವಾರಿ ವೇಳೆಗೆ 750 ಕೆ.ಜಿ. ಭಾರ ಹೋರಲು ಗಜಪಡೆಯನ್ನು ಸಜ್ಜುಗೊಳಿಸಲಾಗುತ್ತದೆ. ಅದಕ್ಕಾಗಿ ಈಗಾಗಲೇ ವಿಶೇಷ ಪೌಷ್ಠಿಕ ಆಹಾರವನ್ನು ನೀಡಲಾಗುತ್ತಿದೆ. ಗಜಪಡೆಯ ಭುಜದ ಬಲವನ್ನು ಹೆಚ್ಚಿಸಲು ಅರಣ್ಯ ಇಲಾಖೆ ಈಗಾಗಲೇ ಕ್ರಮ ಕೈಗೊಂಡಿದೆ.












Click it and Unblock the Notifications