Get Updates
Get notified of breaking news, exclusive insights, and must-see stories!

ಸಡಗರ, ಸಂಭ್ರಮ, ಸಂಪ್ರದಾಯದ ತ್ರಿವೇಣಿ ಸಂಗಮವೇ ಮೈಸೂರು ದಸರಾ

ಮೈಸೂರು, ಅಕ್ಟೋಬರ್ 25: ಮೈಸೂರು ದಸರಾ ಎಂದರೆ ಅದು ಸಡಗರ-ಸಂಭ್ರಮ, ಸಂಪ್ರದಾಯದ ತ್ರಿವೇಣಿ ಸಂಗಮ. ವರ್ಷಪೂರ್ತಿ ತಮ್ಮದೇ ಆದ ಜಂಜಾಟದಲ್ಲಿ ಮುಳುಗಿ ಹೋದವರು ಎಲ್ಲವನ್ನು ಬದಿಗೊತ್ತಿ ತಮ್ಮವರೊಂದಿಗೆ ಬೆರೆತು ಖುಷಿಪಡುವ ಸಮಯ.

ಈ ಬಾರಿಯ ದಸರಾದ ಕೊನೆಯ ಘಟ್ಟವಾದ ಜಂಬೂಸವಾರಿಗೆ ದಿನಗಣನೆ ಆರಂಭವಾಗಿದ್ದರೆ, ಇತ್ತ ನವರಾತ್ರಿಯ ಸಡಗರವೂ ಮನೆಮನವನ್ನು ತುಂಬಿದೆ. ಅರಮನೆ ಸೇರಿದಂತೆ ಇಡೀ ಮೈಸೂರು ರಾತ್ರಿಯಾಗುತ್ತಿದ್ದಂತೆಯೇ ವಿದ್ಯುದ್ದೀಪದಲ್ಲಿ ಬೆಳಗುತ್ತಿದ್ದು, ದೇವೇಂದ್ರನ ಅಮರಾವತಿಯೇ ಧರೆಗಿಳಿದು ಬಂದಿದೆಯಾ ಎಂಬಂತೆ ಭಾಸವಾಗುತ್ತಿದೆ. ಆಚರಣೆಯಲ್ಲಿ ಅದ್ಧೂರಿತನವಿಲ್ಲದೆ ಸರಳವಾಗಿದ್ದರೂ ಸಂಪ್ರದಾಯದಂತೆ ದಸರಾ ನಡೆಯುತ್ತಿದೆ. ಸರಳ ದಸರಾದ ಕೊರಗನ್ನು ದೀಪಾಲಂಕಾರ ಹೋಗಲಾಡಿಸಿದೆ. ಹೀಗಾಗಿ ನಗರದಲ್ಲಿ ಒಂದಷ್ಟು ಮಂದಿ ಬೆಳಕಿನ ದಸರಾದಲ್ಲಿ ಮಿಂದೇಳುತ್ತಿದ್ದಾರೆ.

ಜಂಬೂಸವಾರಿಗೆ ದಿನಗಣನೆ ಆರಂಭ

ಜಂಬೂಸವಾರಿಗೆ ದಿನಗಣನೆ ಆರಂಭ

ದಸರಾ ದಿನಗಳಲ್ಲಿ ವಿದ್ಯುತ್ ದೀಪದ ಬೆಳಕಿನಲ್ಲಿ ಮಿನುಗುವ ಮೈಸೂರು ನಗರಿಯನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಅಷ್ಟೇ ಅಲ್ಲ ಈ ನೋಟ ಎಲ್ಲರ ಮೈಮನವನ್ನು ಪುಳಕಗೊಳಿಸುತ್ತಿದೆ. ಇನ್ನೊಂದೆಡೆ ಐತಿಹಾಸಿಕ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಎಲ್ಲರಲ್ಲೂ ಕುತೂಹಲ ಮನೆ ಮಾಡಿದೆ. ಅರಮನೆ ಆವರಣದಲ್ಲಿ ಸರಳವಾಗಿ ಜಂಬೂಸವಾರಿ ನಡೆಯುತ್ತಿದ್ದು, ಇದೀಗ ಜಂಬೂಸವಾರಿಯ ಅಂತಿಮ ತಾಲೀಮು ಕೂಡ ಮುಗಿದಿದೆ. ಅಂಬಾರಿ ಹೊರಲು ಅಭಿಮನ್ಯು ಸಿದ್ಧನಾಗಿದ್ದಾನೆ. ಈತನಿಗೆ ಕುಮ್ಕಿ ಆನೆಗಳಾಗಿ ವಿಜಯ ಮತ್ತು ಕಾವೇರಿ ಜತೆಗೆ ಹೆಜ್ಜೆ ಹಾಕಿದರೆ, ನಿಶಾನೆ ಆನೆಯಾಗಿ ಗೋಪಿ ಹೆಜ್ಜೆ ಹಾಕಿದರೆ ಅರಮನೆಯ ಪಟ್ಟದ ಆನೆಯಾಗಿ ಧಾರ್ಮಿಕ ಕೈಂಕರ್ಯಗಳನ್ನು ವಿಕ್ರಮ ನಡೆಸಿಕೊಡಲಿದ್ದಾನೆ.

ಎರಡೇ ಎರಡು ಸ್ತಬ್ಧ ಚಿತ್ರ

ಎರಡೇ ಎರಡು ಸ್ತಬ್ಧ ಚಿತ್ರ

ಇನ್ನು ಜಂಬೂಸವಾರಿಯ ಮೆರವಣಿಯಲ್ಲಿ ಈ ಬಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಅರಮನೆ ವೈಭವದ ಸ್ತಬ್ಧಚಿತ್ರ ಮತ್ತು ಆರೋಗ್ಯ ಇಲಾಖೆಯಿಂದ ಕೋವಿಡ್-19 ಜಾಗೃತಿ ಸ್ತಬ್ಧ ಚಿತ್ರ ಹೀಗೆ ಕೇವಲ ಎರಡು ಸ್ತಬ್ಧ ಚಿತ್ರಗಳು ಭಾಗವಹಿಸಲಿವೆ. ಇದಲ್ಲದೆ ಎಂದಿನಂತೆ ಅಶ್ವರೋಹಿದಳ, ಪೊಲೀಸ್ ಬ್ಯಾಂಡ್, ಪೊಲೀಸ್ ಕವಾಯತ್ ಮತ್ತು ಸೀಮಿತ ಕಲಾತಂಡದ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಆದರೆ ಈ ಜಂಬೂಸವಾರಿ ವೀಕ್ಷಿಸಲು ಅರಮನೆ ಆವರಣಕ್ಕೆ ಸಾರ್ವಜನಿಕರಿಗೆ ಅವಕಾಶವಿಲ್ಲ. ನೇರ ಪ್ರಸಾರದಲ್ಲಿ ವೀಕ್ಷಿಸಲು ಅವಕಾಶ ಮಾಡಿಕೊಡಲಾಗುತ್ತಿದೆ.

ಹಿಂದಿನ ದಸರಾದ ಸಂಭ್ರಮ ಕಾಣುತ್ತಿಲ್ಲ

ಹಿಂದಿನ ದಸರಾದ ಸಂಭ್ರಮ ಕಾಣುತ್ತಿಲ್ಲ

ಹಿಂದಿನ ವರ್ಷಗಳಲ್ಲಿದ್ದ ದಸರಾದ ಯಾವ ಸಂಭ್ರಮವೂ ಈ ಸಲ ಕಾಣುತ್ತಿಲ್ಲ. ಸಾಮಾನ್ಯವಾಗಿ ಮೈಸೂರು ದಸರಾ ಎಂದರೆ ಸಡಗರ, ಸಂಭ್ರಮ ಮನೆ ಮಾಡುತ್ತಿತ್ತು. ರೈತರು, ಮಹಿಳೆಯರು, ಯುವಕರು, ಯುವತಿಯರು ಹೀಗೆ ಎಲ್ಲರಿಗೂ ದಸರಾದಲ್ಲಿ ಪಾಲ್ಗೊಳ್ಳುವ, ಮಿಂಚುವ ಮಹಾ ಸಡಗರದಲ್ಲಿರುತ್ತಿದ್ದರು. ಒಂದು ಕಡೆ ಯುವ ಮನಸ್ಸುಗಳಿಗೆ ಲಗ್ಗೆಯಿಡುವ ಯುವ ದಸರಾ ಮನ ತಣಿಸುತ್ತಿತ್ತು. ಮತ್ತೊಂದೆಡೆ ಬೋಜನ ಪ್ರಿಯರಿಗೆ ವಿವಿಧ ಖಾದ್ಯಗಳನ್ನು ಉಣಬಡಿಸುತ್ತಾ ಬಾಯಿ ಚಪ್ಪರಿಸುವಂತೆ ಆಹಾರ ಮೇಳ ನಡೆಯುತ್ತಿತ್ತು. ಇದಲ್ಲದೆ, ಝಗಮಗಿಸುವ ಅರಮನೆ ಸ್ವರ್ಗದ ಬಾಗಿಲು ತೆರೆದು ಸ್ವಾಗತಿಸುವಂತೆ ಮಾಡುತ್ತಿತ್ತು. ಅಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೆಳೆಯುತ್ತಿದ್ದವು.

ಎಲ್ಲೆಂದರಲ್ಲಿ ಅಡ್ಡಾಡಲು ಕೊರೊನಾ ಭಯ

ಎಲ್ಲೆಂದರಲ್ಲಿ ಅಡ್ಡಾಡಲು ಕೊರೊನಾ ಭಯ

ನವರಾತ್ರಿಯ ದಿನಗಳಲ್ಲಿ ಸಂಜೆಯಾಗುತ್ತಿದ್ದಂತೆ ಮನೆಯಿಂದ ಹೊರಗೆ ಬರುತ್ತಿದ್ದ ಜನ ಎಲ್ಲೆಡೆ ಸುತ್ತಾಡಿ ಕಣ್ತುಂಬಿಸಿಕೊಂಡು ಹೋಗುತ್ತಿದ್ದರು. ಈ ಬಾರಿ ಅದ್ಯಾವುದು ಇಲ್ಲ. ಎಲ್ಲೆಂದರಲ್ಲಿ ತಿನ್ನುವಂತಿಲ್ಲ, ಕುಡಿಯುವಂತಿಲ್ಲ. ಜತೆಗೆ ಜನರ ಮಧ್ಯೆ ಓಡಾಡಲೂ ಭಯವಾಗುತ್ತಿದೆ. ಕಾರಣ ಕೊರೊನಾ ಮಹಾಮಾರಿ ಇನ್ನಿಲ್ಲದೆ ಕಾಡುತ್ತಿದೆ. ಒಂದಷ್ಟು ತಿಳಿದವರು ಈ ಬಾರಿಯ ದಸರಾದ ಸಹವಾಸವೇ ಬೇಡವೆಂದು ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಕೆಲವರು ಎಚ್ಚರಿಕೆ ವಹಿಸಿಕೊಂಡು, ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿಕೊಂಡು ದಸರಾ ಬೆಳಕು ನೋಡಲು ಬರುತ್ತಿದ್ದರೆ ಮತ್ತೆ ಕೆಲವರು ಎಲ್ಲವನ್ನು ಮರೆತು ಅಡ್ಡಾಡುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+