ನಾವು ಆಪರೇಷನ್ ಹಸ್ತ ಮಾಡಿಲ್ಲ, ಅವರಾಗಿಯೇ ಪಕ್ಷಕ್ಕೆ ಬರ್ತಿದ್ದಾರೆ: DCM ಡಿ.ಕೆ.ಶಿವಕುಮಾರ್
ಮೈಸೂರು, ಆಗಸ್ಟ್, 24: ನಾವು ಆಪರೇಷನ್ ಹಸ್ತ ಮಾಡುತ್ತಿಲ್ಲ. ಅವರಾಗಿ ಅವರೇ ಪಕ್ಷಕ್ಕೆ ಬರುತ್ತೀವಿ ಅಂತಿದ್ದಾರೆ. ಬರುವವರಿಗೆ ಸ್ವಾಗತ ಕೋರುತ್ತಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೈಸೂರಿನಲ್ಲಿ ತಿಳಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ನಾವಾಗಿ ನಾವೇ ಯಾರನ್ನೂ ಪಕ್ಷಕ್ಕೆ ಕರೆತರುವ ಪ್ರಯತ್ನ ಮಾಡುತ್ತಿಲ್ಲ. ಅವರ ಭವಿಷ್ಯದ ದೃಷ್ಟಿಯಿಂದ ನಮ್ಮ ಪಕ್ಷದ ವರ್ಚಸ್ಸು ನೋಡಿ ಅವರೇ ನಿರ್ಧಾರ ಮಾಡುತ್ತಿದ್ದಾರೆ. ಎಷ್ಟು ಜನ ಬರ್ತಾರೆ ಎಂಬುದನ್ನು ಈಗಲೇ ನಾನು ಹೇಳಲು ಸಾಧ್ಯವಿಲ್ಲ.
ಎಲ್ಲದಕ್ಕೂ ಕಾಲ, ಸಮಯ ಎಂಬುದು ಇರುತ್ತದೆ. ಆ ಘಳಿಗೆ ಬಂದಾಗ ಎಲ್ಲವೂ ನಡೆಯುತ್ತದೆ ಎಂದರು.

ಜೆಡಿಎಸ್ ಶಾಸಕರನ್ನು ಕಾಂಗ್ರೆಸ್ ಸೆಳೆಯುವ ಪ್ರಯತ್ನ ಆಗಿದೆ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು, ಇಂತಹ ಮಾತುಗಳನ್ನು ನಾನು ಹೇಳುತ್ತಾ ಹೋದರೆ ಅದು ಬಹಳ ದೊಡ್ಡದಾಗುತ್ತದೆ. ಈಗ ಅದರ ಬಗ್ಗೆ ಚರ್ಚೆ ಬೇಡ ಎಂದು ತಿಳಿಸಿದರು.
ಇನ್ನು ಗೃಹಲಕ್ಷ್ಮಿ ಯೋಜನೆ ಬೆಳಗಾವಿಯಿಂದ ಮೈಸೂರಿಗೆ ಶಿಫ್ಟ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರದಲ್ಲಿ ಯಾವ ರಾಜಕೀಯವೂ ಇಲ್ಲ. ಬೆಳಗಾವಿಯಲ್ಲಿ ಮುಂದೆ ಇನ್ನೊಂದು ಕಾರ್ಯಕ್ರಮ ಮಾಡಲು ಪ್ಲಾನ್ ಮಾಡಿದ್ದೇವೆ. ಅಲ್ಲಿ ಎಲ್ಲರದ್ದೂ ಒಮ್ಮತದ ತೀರ್ಮಾನಗಳಿವೆ ಎಂದರು.
ಬೆಳಗಾವಿಯಲ್ಲಿ ನಾವು ಎರಡು ಲೋಕಸಭಾ ಕ್ಷೇತ್ರ ಗೆಲ್ಲುತ್ತೇವೆ. ಮೈಸೂರಿನಲ್ಲಿ ಅನ್ನ ಭಾಗ್ಯ ಮಾಡುವ ಪ್ಲಾನ್ ಇತ್ತು. ಅಕ್ಕಿ ವಿಚಾರದಲ್ಲಿ ಇನ್ನೊಂದಿಷ್ಟು ಅಡೆತಡೆ ಇದೆ. ಹೀಗಾಗಿ ಗೃಹಲಕ್ಷ್ಮಿಯನ್ನು ಇಲ್ಲಿಂದ ಆರಂಭಿಸುತ್ತಿದ್ದೇವೆ. ಹಾಗೆಯೇ ಬೆಂಗಳೂರಿನಲ್ಲೂ ಕಾರ್ಯಕ್ರಮ ಮಾಡುವ ಯೋಚನೆ ಮಾಡಿದ್ದೇವೆ. ಇನ್ನು ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ ಎಂದು ಮೈಸೂರಿಗೆ ಶಿಫ್ಟ್ ಮಾಡಿದ್ದೇವೆ ಎಂದರು.
ಆಗಸ್ಟ್ 30ರಂದು ಒಂದು ಬಟನ್ ಅದುಮಿದ ಕೂಡಲೇ ಎಲ್ಲಾ ಫಲಾನುಭವಿಗಳಿಗೂ ಹಣ ಸಂದಾಯವಾಗುತ್ತದೆ. ಅದರ ಮೇಸಜ್ ಅವರ ಫೋನ್ಗಳಿಗೆ ಬರುತ್ತದೆ. ಎಲ್ಲಾ ಹಣದ ವ್ಯವಸ್ಥೆಯನ್ನು ಬ್ಯಾಂಕ್ಗಳಿಗೆ ಮಾಡಿದ್ದೇವೆ. ನಮಗೆ ಹಣದ ಕೊರತೆ ಇಲ್ಲ. ಸರ್ವರ್ ಸಮಸ್ಯೆ ಆದರೆ ಒಂದಿಷ್ಟು ಜನರಿಗೆ ಹಣ ಬರುವುದು ತಡವಾಗಬಹುದು ಅಷ್ಟೇ ಎಂದರು.
ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಪಿಎಂ ಹೇಳುತ್ತಿದ್ದರು. ಈಗ ಅವರದೇ ಮಧ್ಯಪ್ರದೇಶದ ಸರ್ಕಾರ ನಮ್ಮನ್ನು ನೋಡಿ ಗ್ಯಾರಂಟಿ ಸ್ಕೀಮ್ ಜಾರಿ ಮಾಡಿದೆ. ಇದಕ್ಕೆ ಪಿಎಂ ಏನು ಹೇಳುತ್ತಾರೆ? ಎಂದು ಪ್ರಶ್ನಿಸುವ ಮೂಲಕ ದೇಶದ ಎಲ್ಲಾ ಕಡೆಯೂ ನಮ್ಮ ಗ್ಯಾರಂಟಿ ಸ್ಕೀಮ್ಗಳು ಸದ್ದು ಮಾಡುತ್ತಿವೆ ಎಂದರು.












Click it and Unblock the Notifications