ಮೈಸೂರಿನಲ್ಲಿ ಹೆಚ್ಚಿದೆ ಅಪರಾಧ ಪ್ರಕರಣ; ಕೊರೊನಾ ಕಾರಣ?
ಮೈಸೂರು, ಆಗಸ್ಟ್ 24; ಮೈಸೂರು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿನ ಪ್ರಕರಣಗಳ ನಡುವೆಯೇ ಆರ್ಥಿಕ ಪರಿಸ್ಥಿತಿ ಕುಸಿತವಾಗುತ್ತಿದ್ದು, ದುಷ್ಕರ್ಮಿಗಳು ಈಗ ಜನರನ್ನು ದೋಚಲು ಮುಂದಾಗಿದ್ದಾರೆ. ನಗರದಲ್ಲಿ ರಾತ್ರಿ ರಸ್ತೆಯಲ್ಲಿ ಸಾಗುವ ವಾಹನ ಸವಾರರನ್ನು ಬೆದರಿಸಿ ಅವರ ಬಳಿ ಇದ್ದ ಅಮೂಲ್ಯ ಸ್ವತ್ತುಗಳನ್ನು ಅಪಹರಿಸುವ, ಅಂಗಡಿ ಮುಂಗಟ್ಟುಗಳನ್ನು ಕಳ್ಳತನ ಮಾಡುವ, ಒಬ್ಬಂಟಿ ಮಹಿಳೆಯರ ಸರ ಎಗರಿಸುವ ಪ್ರಕರಣಗಳು ಹೆಚ್ಚುತ್ತಲೇ ಇವೆ.
Recommended Video
ಕೊರೊನಾ ಮೇಲಿನ ಹೆಚ್ಚಿನ ಗಮನದಿಂದಾಗಿ ನಗರ ಪೊಲೀಸರು ಈ ಅಪರಾಧಗಳತ್ತ ಗಮನ ನೀಡುತ್ತಿಲ್ಲವೇ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಎದ್ದಿದೆ.
ಖಾಸಗಿ ಕಂಪನಿಯ ನೌಕರ, ಎನ್ ಆರ್.ಮೊಹಲ್ಲಾ ನಿವಾಸಿ ಪುನೀತ್ (26) ಎಂಬ ಯುವಕ ದ್ವಿಚಕ್ರವಾಹನದಲ್ಲಿ ಮನೆಗೆ ಬರುತ್ತಿದ್ದ ವೇಳೆ ಎನ್ ಆರ್ ಮೊಹಲ್ಲಾ ಶಿವಾಜಿ ರಸ್ತೆಯಲ್ಲಿ ನಾಲ್ವರ ಗುಂಪೊಂದು ತಡೆದು ನಿಲ್ಲಿಸಿ ಯುವಕನ ಕುತ್ತಿಗೆಗೆ ಕೈ ಹಾಕಿ ಚಿನ್ನದ ಸರ ಎಗರಿಸಿದೆ. ಯುವಕ ಕೊಸರಿಕೊಂಡು ಕೂಗಲು ಯತ್ನಿಸಿದಾಗ ಆತನ ಮೇಲೆ ಡ್ರ್ಯಾಗರ್ ತೋರಿಸಿ ಬೆದರಿಸಿದ ಗುಂಪು ತಲೆಯ ಮೇಲೆ ಗಾಯ ಮಾಡಿ ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿದೆ.

ಈ ಕುರಿತು ಯುವಕ ಎನ್.ಆರ್.ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇನ್ಸ್ ಪೆಕ್ಟರ್ ಶೇಖರ್ ಸುತ್ತಮುತ್ತಲಿನ ಸಿಸಿಟಿವಿ ಫುಟೇಜ್ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ.
ನಗರದಲ್ಲಿ ಇತ್ತೀಚೆಗೆ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಪೊಲೀಸರು ಕಳ್ಳರಿಗೆ ಬಿಸಿ ಮುಟ್ಟಿಸುವಲ್ಲಿ ವಿಫಲರಾಗಿದ್ದಾರೆಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ. ನಗರದ ಹೃದಯ ಭಾಗದಲ್ಲಿನ ಮಳಿಗೆಗಳಲ್ಲಿಯೂ ಸರಣಿ ಕಳ್ಳತನ ನಡೆಯುತ್ತಿವೆ. ಮಹಿಳೆಯರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗಲೂ ದುಷ್ಕರ್ಮಿಗಳು ಅವರ ಕುತ್ತಿಗೆಯಲ್ಲಿನ ಚಿನ್ನದ ಸರಗಳನ್ನು ಅಪಹರಿಸುವ ಪ್ರಕರಣಗಳು ಹೆಚ್ಚುತ್ತಿವೆ.
ನಗರದಲ್ಲಿ ಈ ರೀತಿ ಕೃತ್ಯಗಳನ್ನು ಎಸಗುವವರ ಗುಂಪೊಂದು ಸಕ್ರಿಯವಾಗಿರುವಂತೆ ಕಂಡುಬರುತ್ತಿದ್ದು, ಕಳ್ಳರಿಗೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.












Click it and Unblock the Notifications