ಅಪರಾಧ ಪ್ರಕರಣ: ಮೈಸೂರಿನಲ್ಲಿ ಪೊಲೀಸ್ ಉನ್ನತಾಧಿಕಾರಿಗಳಿಂದ ವಿಶೇಷ ಸಭೆ
ಮೈಸೂರು, ಮೇ 16: ಮೈಸೂರಿನಲ್ಲಿ ನಡೆಯುತ್ತಿರುವ ಸರಣಿ ಸರಗಳ್ಳತನ ಹಾಗೂ ಇತ್ತೀಚೆಗೆ ನಡೆದ ಸಾಮೂಹಿಕ ಅತ್ಯಾಚಾರ, ವೃದ್ಧ ದಂಪತಿಯ ಬರ್ಬರ ಹತ್ಯೆ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳ ಹಿನ್ನೆಲೆಯಲ್ಲಿ ಎಚ್ಚೆತ್ತ ಪೊಲೀಸ್ ಇಲಾಖೆ ನಗರದಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ನಗರದ ನಜರಾಬಾದ್ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂಭಾಗದ ಡಿಜಿಪಿ ಸೂಟ್ಸ್ ಸಭಾಂಗಣದಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಅವರ ಅಧ್ಯಕ್ಷತೆಯಲ್ಲಿ ನಡೆದ ದಕ್ಷಿಣ ವಲಯ ಮಟ್ಟದ ಹಾಗೂ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಅಪರಾಧಗಳ ತನಿಖಾ ಪ್ರಗತಿ, ಮಹಿಳೆಯರು ಮತ್ತು ಮಕ್ಕಳ ಬಗೆಗಿನ ಸುರಕ್ಷತಾ ಕ್ರಮಗಳು, ವೈಜ್ಞಾನಿಕ ತನಿಖಾ ವಿಧಾನ ಇನ್ನಿತರ ಮಾಹಿತಿಗಳ ಪರಾಮರ್ಶೆ ನಡೆಸಲಾಯಿತು.
ಆಯಾ ಜಿಲ್ಲಾ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಹಾಗೂ ನಗರ ವ್ಯಾಪ್ತಿಯಲ್ಲಿ ದಾಖಲಾಗಿರುವ ಅಪರಾಧ ಪ್ರಕರಣಗಳ ತನಿಖಾ ಪ್ರಗತಿ ಮುಂತಾದ ಅಂಕಿ ಅಂಶಗಳನ್ನು ಪಡೆದ ಸಲೀಂ ಅವರು, ಅಪರಾಧಿಗಳ ಪತ್ತೆಗೆ ವೈಜ್ಞಾನಿಕ ವಿಧಾನವನ್ನು ಅನುಸರಿಸಿ ಪ್ರಕರಣವನ್ನು ಶೀಘ್ರ ಇತ್ಯರ್ಥಗೊಳಿಸುವಂತೆ ಸೂಚನೆ ನೀಡಿದ್ದಾರೆ.

ಜಿಲ್ಲಾವಾರು ಪೊಲೀಸ್ ವರಿಷ್ಠ ಅಧಿಕಾರಿಗಳ ಬಳಿ ಪ್ರತ್ಯೇಕವಾಗಿ ಮಾತುಕತೆ ನಡೆಸಿದ ಅವರು, ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ನಡೆದಿರುವ ಸರಗಳವು, ಮನೆಗಳ್ಳತನ, ದರೋಡೆ, ಸುಲಿಗೆ, ಸೈಬರ್ ಅಪರಾಧ ಮತ್ತು ಇನ್ನಿತರ ಪ್ರಕರಣಗಳ ಬಗ್ಗೆ ಮಾಹಿತಿ ಪಡೆದರು. ಇದೇ ವೇಳೆ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ ಅಂಕಿ ಅಂಶಗಳನ್ನು ಪಡೆದುಕೊಂಡರು.
ಮೈಸೂರು ನಗರದಲ್ಲಿ ನಡೆದಿರುವ ಸಾಮೂಹಿಕ ಅತ್ಯಾಚಾರ ಹಾಗೂ ನಾಗವಾರದಲ್ಲಿ ನಡೆದಿರುವ ಜೋಡಿ ಕೊಲೆ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದ ಸಲೀಂ ಅವರು, ನಗರ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ಇಂತಹ ಪ್ರಮುಖ ಪ್ರಕರಣಗಳು ನಡೆದಿರುವುದು ವಿಷಾದನೀಯ. ಈ ರೀತಿಯ ಹಲವಾರು ಪ್ರಕರಣಗಳನ್ನು ಮೈಸೂರು ಪೊಲೀಸರು ಭೇದಿಸಿದ್ದಾರೆ. ಹೀಗಾಗಿ ಈ ಎರಡು ಪ್ರಕರಣಗಳ ತನಿಖೆಗೆ ವೇಗ ನೀಡುವ ಮೂಲಕ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು.












Click it and Unblock the Notifications