ಪ್ರವಾಸಿಗರಿಲ್ಲ, ಚಾಮರಾಜೇಂದ್ರ ಮೃಗಾಲಯಕ್ಕೆ ಸಂಕಷ್ಟ!
ಮೈಸೂರು, ಜನವರಿ 19; ಕೊರೊನಾ ಮಹಾಮಾರಿ ತೊಲಗಿ ಜನಜೀವನ ಸಹಜ ಸ್ಥಿತಿಗೆ ಮರಳಿದ್ದರೆ ಮೈಸೂರು ಈ ವೇಳೆಗೆಲ್ಲ ಪ್ರವಾಸಿಗರಿಂದ ತುಂಬಿ ತುಳುಕುತ್ತಿತ್ತು. ಪ್ರವಾಸಿ ತಾಣಗಳಲ್ಲಿ ಜನಜಂಗುಳಿ ಇರುತ್ತಿತ್ತು. ಆದರೆ ಈಗ ಅದೆಲ್ಲವೂ ಬರೀ ಕನಸೆಂಬಂತೆ ಭಾಸವಾಗುತ್ತಿದೆ. ಇವತ್ತಿನ ಪರಿಸ್ಥಿತಿಯಲ್ಲಿ ಪ್ರವಾಸಿಗರಿಲ್ಲದೆ ಹೆಚ್ಚಿನ ನಷ್ಟ ಅನುಭವಿಸುತ್ತಿರುವುದು ಚಾಮರಾಜೇಂದ್ರ ಮೃಗಾಲಯವಾಗಿದೆ.
ಅರಮನೆ ನಗರಿ, ಸಾಂಸ್ಕೃತಿಕ ನಗರಿ, ಪಾರಂಪರಿಕ ನಗರಿ ಹೀಗೆ ವಿವಿಧ ಹೆಸರುಗಳಿಂದ ಕರೆಯಿಸಿಕೊಳ್ಳುವ ಮೈಸೂರು ನಗರದ ಹೆಚ್ಚಿನ ಉದ್ಯಮ ಪ್ರವಾಸಿಗರ ಮೇಲೆ ಅವಲಂಬಿತವಾಗಿದೆ. ಅಷ್ಟೇ ಅಲ್ಲದೆ ಇಲ್ಲಿನ ಹೆಚ್ಚಿನ ಜನರು ಪ್ರವಾಸಿಗರನ್ನು ನಂಬಿಕೊಂಡೇ ಬದುಕು ಕಟ್ಟಿಕೊಂಡಿದ್ದಾರೆ. ನಗರದಲ್ಲಿ ಟಾಂಗಾ ಗಾಡಿಗಳಿಂದ ಆರಂಭವಾಗಿ, ಹೋಟೆಲ್ ಉದ್ಯಮದವರೆಗೆ ಪ್ರವಾಸಿಗರು ಬಂದರೆ ಮಾತ್ರ ಬದುಕು ಎಂಬುವಂತಾಗಿದೆ.
ಮೈಸೂರು ವಿಶೇಷ; ಪಂಚ ರಾಜ್ಯಗಳ ಚುನಾವಣೆ; ಮೈಲಾಕ್ನಿಂದ ಶಾಯಿ ಪೂರೈಕೆ
ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದ ಪ್ರವಾಸೋದ್ಯಮ ನೆಲಕಚ್ಚಿದೆ. ಹೀಗಾಗಿ ಅದನ್ನು ಅವಲಂಬಿಸಿ ಅದರ ಸುತ್ತ ವ್ಯಾಪಾರ ವಹಿವಾಟು, ಟ್ಯಾಕ್ಸಿ, ಆಟೋ ಹೀಗೆ ಹಲವು ರೀತಿಯಲ್ಲಿ ಬಂಡವಾಳ ಹೂಡಿ ಬದುಕನ್ನು ಕಟ್ಟಿಕೊಳ್ಳಬಹುದೆಂದು ಮಾಡಿಕೊಂಡಿದ್ದ ನಿರೀಕ್ಷೆಗಳೆಲ್ಲವೂ ತಲೆಕೆಳಗಾಗಿವೆ. ನಗರಕ್ಕೊಂದು ಸುತ್ತು ಹೊಡೆದರೆ ಯಾರ ಮುಖದಲ್ಲಿ ನಗು ಕಾಣುತ್ತಿಲ್ಲ ನಿರಾಸೆ ತಾಂಡವಾಡುತ್ತಿದೆ. ನಾಳೆ ಹೇಗೆಂಬ? ಚಿಂತೆ ಕಾಡುತ್ತಿದೆ.
ವಿಶ್ವ ಪಾರಂಪರಿಕ ತಾಣದ ಪಟ್ಟಿ ಸೇರಲಿದೆ ಮೈಸೂರು ದಸರಾ
ಸದಾ ಪ್ರವಾಸಿಗರಿಂದ ಗಿಜಿಗುಟ್ಟುತ್ತಿದ್ದ ಪ್ರವಾಸಿ ತಾಣಗಳಲ್ಲೀಗ ನೀರವ ಮೌನ ತಾಂಡವವಾಡುತ್ತಿದೆ. ಅದರ ಸುತ್ತ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಬದುಕುತ್ತಿದ್ದವರು ವ್ಯಾಪಾರವಿಲ್ಲದೆ ಮನೆ ಸೇರಿದ್ದಾರೆ. ಇನ್ನು ಅರಮನೆ ಸುತ್ತಮುತ್ತ ಟಾಂಗಾಗಳನ್ನಿಟ್ಟು ಕೊಂಡು ವಂಶಪಾರಂಪರ್ಯವಾಗಿ ಬಂದಿದ್ದ ಕಸುಬು ಮಾಡಿಕೊಂಡಿದ್ದವರು ಕುದುರೆಗೆ ಮೇವು ನೀಡಲಾಗದ ಸ್ಥಿತಿಗೆ ಬಂದಿದ್ದು ಕೆಲವರು ಬದುಕಿಗಾಗಿ ಬೇರೆ ಉದ್ಯೋಗದತ್ತ ಮುಖ ಮಾಡಿದ್ದಾರೆ.
ಪುಷ್ಪರಾಣಿಯರ ಕಣ್ತುಂಬಿಕೊಳ್ಳಲು ಮೈಸೂರು ಅರಮನೆಗೆ ಪ್ರವಾಸಿಗರ ಲಗ್ಗೆ!
ಒಂದೆರಡು ಸಮಸ್ಯೆಯಲ್ಲ
ಕೊರೊನಾ ಸೋಂಕು ಹರಡಿದ ದಿನದಿಂದ ಇಲ್ಲಿವರೆಗೆ ಅದೆಷ್ಟೋ ಮನೆಗಳ ದೀಪ ಆರಿವೆ. ಇನ್ನೊಂದಷ್ಟು ಮನೆಗಳಲ್ಲಿ ಜನ ಉದ್ಯೋಗ ಕಳೆದು ಕೊಂಡು ಬೀದಿಗೆ ಬಿದ್ದಿದ್ದಾರೆ. ಸಂಕಷ್ಟದ ಬದುಕನ್ನು ಕಟ್ಟಿಕೊಂಡು ಅದಕ್ಕೆ ಹೊಂದಿಕೊಂಡು ಬಂದಿದ್ದವರು ಈಗ ಮತ್ತೆ ಮೂರನೇ ಅಲೆಯಿಂದ ಕಷ್ಟ ಅನುಭವಿಸುವಂತಾಗಿದೆ.
ಇದೆಲ್ಲದರ ನಡುವೆ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ವಿನಿಂದಾಗಿ ಪ್ರವಾಸಿಗರಿಲ್ಲದೆ ಚಾಮರಾಜೇಂದ್ರ ಮೃಗಾಲಯಕ್ಕೆ ಭಾರೀ ಹೊಡೆತ ಬಿದ್ದಿದೆ. ಮೊದಲೆರಡು ಅಲೆಯಲ್ಲಿ ಭಾರೀ ನಷ್ಟವಾಗಿತ್ತು. ಪ್ರತಿದಿನವೂ ಇಲ್ಲಿನ ಪ್ರಾಣಿಗಳ ಆಹಾರ ಸೇರಿದಂತೆ ನಿರ್ವಹಣೆಯ ಖರ್ಚು ಲಕ್ಷಾಂತರ ರೂ. ಆಗಲಿದೆ.
ಪ್ರವಾಸಿಗರ ಸಂಖ್ಯೆ ಕುಸಿತ
ಪ್ರವಾಸಿಗರು ಆಗಮಿಸಿದರೆ ಮೃಗಾಲಯದ ನಿರ್ವಹಣೆಗೆ ಅನುಕೂಲವಾಗುತ್ತಿತ್ತು. ಆದರೆ ಈಗ ಪ್ರವಾಸಿಗರಿಲ್ಲದ ಕಾರಣ ಪ್ರತಿದಿನವೂ ನಷ್ಟವಾಗುತ್ತಿದೆ. ಈ ಹಿಂದೆ ನಟ ದರ್ಶನ್ ಸೇರಿದಂತೆ ಹಲವು ಗಣ್ಯರು ಅಭಿಯಾನ ನಡೆಸಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ಒಂದಷ್ಟು ಹಣ ಹರಿದು ಬಂದಿತ್ತು.
ಕಳೆದ ದಸರಾ ಬಳಿಕ ಮೈಸೂರಿನಲ್ಲಿ ಪ್ರವಾಸೋದ್ಯಮ ಚೇತರಿಸಿಕೊಳ್ಳುತ್ತಿತ್ತು. ವರ್ಷಾಂತ್ಯದ ವೇಳೆ ಹೆಚ್ಚಿನ ಪ್ರವಾಸಿಗರು ಬಂದಿದ್ದರಿಂದ, ಮೃಗಾಲಯಕ್ಕೂ ಆದಾಯ ಬರತೊಡಗಿತ್ತು. ಆದರೆ, ಹೊಸ ವರ್ಷದ ಆರಂಭದಲ್ಲಿ ಮತ್ತೆ ಕೋವಿಡ್ ಹೆಚ್ಚಾಗುತ್ತಿರುವುದು ಚಿಂತೆಗೆ ಕಾರಣವಾಗಿದೆ. ಜತೆಗೆ ಓಡಾಟಕ್ಕೆ ನಿರ್ಬಂಧ ಹಾಗೂ ವಾರಾಂತ್ಯ ಕರ್ಪ್ಯೂ ಕಾರಣಕ್ಕೆ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ.
ಎಷ್ಟು ಪ್ರವಾಸಿಗರ ಭೇಟಿ
ಮೃಗಾಲಯಕ್ಕೆ ಶುಕ್ರವಾರ, ಶನಿವಾರ ಮತ್ತು ಭಾನುವಾರ ಹೆಚ್ಚು ಸ್ಥಳೀಯರು ಮತ್ತು ಪ್ರವಾಸಿಗರು ಬರುತ್ತಾರೆ. ಕಳೆದ ವಾರಾಂತ್ಯ ಮತ್ತು ಈ ವಾರಾಂತ್ಯ ಮೃಗಾಲಯದ ಬಾಗಿಲು ಮುಚ್ಚಲಾಗಿದೆ. ಡಿಸೆಂಬರ್ ಕೊನೆಯ ವಾರದಲ್ಲಿ ಸರಾಸರಿ 10 ಸಾವಿರ ಮಂದಿ ಭೇಟಿ ನೀಡಿದ್ದರು.
ಜನವರಿ 2ರಂದು 12 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಬಂದಿದ್ದರು. ನಂತರದ ದಿನಗಳಲ್ಲಿ ಭೇಟಿ ನೀಡುವವರು ಕಡಿಮೆಯಾಗಿದೆ. ಈಗ ಸರಾಸರಿ 2 ಸಾವಿರ ಮಂದಿಯಷ್ಟೇ ಭೇಟಿ ನೀಡುತ್ತಿದ್ದಾರೆ. ಸದ್ಯ ವೀಕೆಂಡ್ ಕರ್ಫ್ಯೂ ಇರುವುದರಿಂದ ಮೃಗಾಲಯದ ವಾರದ ರಜೆಯ ದಿನವಾದ ಮಂಗಳವಾರ ಮೃಗಾಲಯ ಭೇಟಿಗೆ ಅವಕಾಶ ಮಾಡಿಕೊಡಲಾಗಿದೆ. ಆದರೂ ಪ್ರವಾಸಿಗರ ಬರುತ್ತಿಲ್ಲ.
ಪ್ರವಾಸೋದ್ಯಮಕ್ಕೆ ಆಘಾತ
"ಹೊರಗಿನಿಂದ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾದರೆ ಮಾತ್ರ ಆದಾಯ ಬರಲು ಸಾಧ್ಯವಾಗಲಿದೆ. ಆದರೆ ಮೂರನೇ ಅಲೆಯ ಅಬ್ಬರ ಜೋರಾಗಿಯೇ ಇರುವುದರಿಂದ ಮೃಗಾಲಯಕ್ಕೆ ನಷ್ಟ ಕಟ್ಟಿಟ್ಟ ಬುತ್ತಿಯಾಗಿದೆ. ಇದೆಲ್ಲದರ ನಡುವೆ ಈ ಬಾರಿ ಮೃಗಾಲಯದ ನಿರ್ವಹಣೆಗೆ ಅನುದಾನ ಬಿಡುಗಡೆ ಸೇರಿದಂತೆ ನಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಿದ್ದರಿಂದ ಸದ್ಯ ಮೃಗಾಲಯಕ್ಕೆ ಗಂಭೀರ ಆರ್ಥಿಕ ಸಮಸ್ಯೆ ಎದುರಾಗಿಲ್ಲ" ಎಂದು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್. ಆರ್. ಮಹದೇವಸ್ವಾಮಿ ಹೇಳಿದ್ದಾರೆ.
ಒಟ್ಟಾರೆಯಾಗಿ ಹೊಸ ವರ್ಷದಲ್ಲಿ ಎಲ್ಲವೂ ಸರಿಹೋಗಿ ಬದುಕು ಹಸನಾಗಬಹುದು ಎಂಬ ಕನಸಲಿನಲ್ಲಿದ್ದವರಿಗೆ ವರ್ಷಾರಂಭದಲ್ಲಿಯೇ ಕೊರೊನಾ ಆಘಾತ ನೀಡಿದ್ದಂತು ನಿಜ. ಆದರೆ ಅದರ ಜೊತೆಯಲ್ಲಿ ಬದುಕುವುದು ಅನಿವಾರ್ಯವಾಗಿರುವುದರಿಂದ ಎಲ್ಲ ಕಷ್ಟನಷ್ಟಗಳನ್ನು ಅನುಭವಿಸಲೇ ಬೇಕಾಗಿದೆ.
Recommended Video