ಕೊರೊನಾ ಮುಕ್ತವಾಗುವತ್ತ ಮೈಸೂರು: ಒಂದು ಸಾವು ಇಲ್ಲ
ಮೈಸೂರು, ಮೇ 1: ಮೈಸೂರು ಜಿಲ್ಲೆಯಲ್ಲಿ ಕೇವಲ 20 ದಿನಗಳ ಹಿಂದೆ ಬೆಂಗಳೂರನ್ನೂ ಮೀರಿಸುವಂತೆ ಬೆಳೆಯುತ್ತಿದ್ದ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇದೀಗ ಗಮನಾರ್ಹ ಬದಲಾವಣೆಯನ್ನು ಕಂಡಿದೆ. ಅಷ್ಟೇ ಅಲ್ಲ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾದವರ ಸಂಖ್ಯೆಯಲ್ಲಿ ಭಾರೀ ಏರಿಕೆಯನ್ನೂ ದಾಖಲಿಸಿದೆ. ಇಡೀ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಒಬ್ಬ ರೋಗಿಯೂ ಮೃತಪಟ್ಟಿಲ್ಲದಿರುವುದು ನಿಜಕ್ಕೂ ದಾಖಲೆ ಎಂದೇ ಹೇಳಬಹುದಾಗಿದೆ.
ನಂಜನಗೂಡಿನ ಜ್ಯುಬಿಲಿಯಂಟ್ ಕಾರ್ಖಾನೆಯ ನೌಕರನೊಬ್ಬನಿಗೆ ಸೋಂಕು ತಗುಲಿ ಇಡೀ ಫ್ಯಾಕ್ಟರಿಯ ೧೦೦೦ ಕ್ಕೂ ಅಧಿಕ ನೌಕರರನ್ನು ಕ್ವಾರಂಟೈನ್ ನಲ್ಲಿರಿಸಲಾಗಿತ್ತು. ಆಗ ಇಡೀ ಜಿಲ್ಲೆಯೇ ಕೊರೊನಾ ಸೋಂಕು ಹೆಚ್ಚಳವಾಗುವುದರ ಬಗ್ಗೆ ಕಳವಳಗೊಂಡಿತ್ತು.
ಕೊರೊನಾ ನಿಯಂತ್ರಣದಲ್ಲಿ ಮೈಸೂರು ಮುಂದು
ಇದೀಗ ಇಡೀ ಜಿಲ್ಲೆಯಲ್ಲಿ ಕೆಆರ್ಎಸ್ ರಸ್ತೆಯಲ್ಲಿರುವ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 25 ಪಾಸಿಟಿವ್ ಪ್ರಕರಣಗಳು ಮಾತ್ರ ಇವೆ. ಒಟ್ಟು ದಾಖಲಾಗಿದ್ದ 90 ಪ್ರಕರಣಗಳಲ್ಲಿ 65 ಪ್ರಕರಣಗಳನ್ನು ಗುಣಪಡಿಸಲಾಗಿದೆ ಮತ್ತು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಬೆಂಗಳೂರು, ಬೆಳಗಾವಿ, ವಿಜಯಪುರ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಸಮಯದಲ್ಲಿ, ಮೈಸೂರು ಮಾತ್ರ ಕೊರೊನಾ ವೈರಸ್ ರೋಗ ಹರಡುವುದನ್ನು ತಡೆಯುವಲ್ಲಿ ಗಮನಾರ್ಹ ಸುಧಾರಣೆಯನ್ನು ತೋರಿಸಿದೆ.
ಇಲ್ಲಿಯವರೆಗೂ ೬೫ ಜನರ ಗುಣಮುಖ
ಗುರುವಾರ ಏಳು ಕೊರೊನಾ ರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ರಾಜ್ಯದ ಲೆಕ್ಕ ತೆಗೆದುಕೊಂಡರೆ ಈಗ ಒಟ್ಟು 557 ಪಾಸಿಟಿವ್ ಪ್ರಕರಣಗಳಿವೆ . ಆದರೆ ಗುಣಪಡಿಸುವ ವೇಗವನ್ನು ಪರಿಶೀಲಿಸಿದರೆ, ರಾಜ್ಯದಲ್ಲಿ ರೋಗದಿಂದ ಗುಣಮುಖರಾದ 223 ರೋಗಿಗಳಲ್ಲಿ ಮೈಸೂರು ಅಗ್ರಸ್ಥಾನದಲ್ಲಿದ್ದು, 65 ಮಂದಿಯನ್ನು ಗುಣಪಡಿಸಿ ಮನೆಗೆ ಕಳಿಸಲಾಗಿದೆ.
ಕೊರೊನಾದಿಂದ ಗುಣಮುಖರಾದವರ ಪ್ಲಾಸ್ಮಾ ಬಳಕೆ
ಮತ್ತೊಂದು ಕುತೂಹಲಕಾರಿ ಬೆಳವಣಿಗೆಯೆಂದರೆ, ಮೈಸೂರಿನಲ್ಲಿ ರೋಗದಿಂದ ಗುಣಮುಖರಾದ ಹೆಚ್ಚಿನ ರೋಗಿಗಳು ಇತರ ರೋಗಿಗಳ ಗುಣಪಡಿಸುವಿಕೆಯನ್ನು ಸಕ್ರಿಯಗೊಳಿಸಲು ತಮ್ಮ ಪ್ಲಾಸ್ಮಾವನ್ನು ದಾನ ಮಾಡಲು ಇಚ್ಛೆ ವ್ಯಕ್ತಪಡಿಸಿದ್ದಾರೆ.
ಈ ಮಾರಕ ರೋಗದಿಂದ ಗುಣಮುಖರಾದ ಮೂರರಿಂದ ನಾಲ್ಕು ರೋಗಿಗಳನ್ನು ಹೊರತುಪಡಿಸಿ, ಬಹುತೇಕ ಎಲ್ಲರೂ ತಮ್ಮ ಪ್ಲಾಸ್ಮಾವನ್ನು ಕನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿಗೆ ದಾನ ಮಾಡಲು ಒಪ್ಪಿದ್ದಾರೆ ಎಂದು ಮೂಲಗಳು "ಒನ್ಇಂಡಿಯಾ ಕನ್ನಡ'ಕ್ಕೆ ತಿಳಿಸಿವೆ.
ಕೆಂಪು ವಲಯದಿಂದ ಹಸಿರು ವಲಯಕ್ಕೆ ಬರಲು ಯತ್ನ
ಪ್ಲಾಸ್ಮಾ ಮತ್ತು ಇತರ ರಕ್ತದ ಘಟಕಗಳನ್ನು ಬೇರ್ಪಡಿಸುವ ಯಂತ್ರವು ಕೆ.ಆರ್.ಆಸ್ಪತ್ರೆಯಲ್ಲಿದ್ದು, ಇದನ್ನು ಸ್ವಲ್ಪ ಆಧುನೀಕರಣಗೊಳಿಸಿದರೆ ಪ್ಲಾಸ್ಮಾ ಚಿಕಿತ್ಸೆಗೆ ಬಳಸಬಹುದು ವೈದ್ಯಕೀಯ ಲೋಕ ತಿಳಿಸಿದೆ. ಮೈಸೂರು ಜಿಲ್ಲೆಯು ಬೇಗನೆ ಕೆಂಪು ವಲಯದಿಂದ ಹಸಿರು ವಲಯಕ್ಕೆ ಹಿಂತಿರುಗಲಿ ಎಂಬುದು ಮೈಸೂರಿಗರ ಆಶಯವಾಗಿದೆ.