ನಿಂಬೆ ಹಣ್ಣು ಮಂತ್ರಿಸಿ 'ಕೊರೊನಾ ಗೋ' ಎಂದ ಮೈಸೂರಿನ ಕಲಾವಿದ
ಮಹಾಮಾರಿಯಾಗಿ ಜಗತ್ತನ್ನೇ ಕಾಡುತ್ತಿರುವ ಕೊರೊನಾ, ಎಲ್ಲರನ್ನೂ ಕಂಗೆಡಿಸಿದೆ. ಮುನ್ನೆಚ್ಚರಿಕಾ ಕ್ರಮಗಳನ್ನು ಮೀರಿ ವೈರಸ್ ವರ್ತುಲ ವಿಶ್ವವನ್ನು ಎಡೆಬಿಡದೆ ಕಾಡುತ್ತಿದೆ. ಡೆಡ್ಲಿ ಕೊರೊನಾ ಈಗಾಗಲೇ 10 ಸಾವಿರಕ್ಕೂ ಹೆಚ್ಚು ಬಲಿಯನ್ನು ಪಡೆದುಬಿಟ್ಟಿದೆ.
ಈ ರೋಗವನ್ನು ಹೊಡೆದೋಡಿಸಲು ಒಂದಲ್ಲಾ ಒಂದು ರೀತಿ ಪ್ರಯೋಗಗಳು ನಡೆಯುತ್ತಿವೆ. ಒಬ್ಬೊಬ್ಬರು ಒಂದೊಂದು ರೀತಿ ವಿಶ್ವದ ಉಳಿವಿಗೆ ಪ್ರಾರ್ಥಿಸುತ್ತಿದ್ದಾರೆ. ಕೋವಿಡ್-19 ನಿಯಂತ್ರಣಕ್ಕೆ ತಮ್ಮ ಕೈಲಾದ ಪ್ರಯತ್ನವನ್ನು ಜನ ಮಾಡುತ್ತಿದ್ದಾರೆ.
ನಿಲ್ಲದ ಜಗತ್ತಿನ ತಲ್ಲಣ: 10 ಸಾವಿರ ದಾಟಿದ ಕೊರೊನಾ ಸಾವಿನ ಪ್ರಮಾಣ
ಹೀಗಿರುವಾಗಲೇ, ಕೋವಿಡ್-19 ನಿಂದ ಜಗತ್ತನ್ನು ರಕ್ಷಣೆ ಮಾಡುವ ಸಲುವಾಗಿ ಮೈಸೂರಿನ ಕಲಾವಿದರೊಬ್ಬರು ನಿಂಬೆಹಣ್ಣಿನಲ್ಲಿ 'ಕೊರೊನಾ ಕಲಾಕೃತಿ' ರೂಪಿಸಿ ಜಗತ್ತಿನ ಮೇಲೆ ಬಿದ್ದಿರುವ ಕೆಟ್ಟ ದೃಷ್ಟಿ ತೆಗೆಯಲು ಮುಂದಾಗಿದ್ದಾರೆ.
ನಿಂಬೆಹಣ್ಣು, ಲವಂಗ ಬಳಸಿ ಕೊರೊನಾ ಕಲಾಕೃತಿ
ನಿಂಬೆಹಣ್ಣು ಮತ್ತು ಲವಂಗ ಬಳಸಿ ಮೈಸೂರಿನ ಕಲಾವಿದ ಧರ್ಮೇಶ್ ಕೊರೊನಾ ವೈರಸ್ ನ ಕಲಾಕೃತಿ ಸೃಷ್ಟಿಸಿದ್ದಾರೆ. ಆ ಮೂಲಕ ಕೊರೊನಾ ವೈರಸ್ ಹೇಗಿರಲಿದೆ ಎಂಬುದನ್ನು ಸರಳವಾಗಿ ತೋರಿಸಿ, ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಕಲಾಕೃತಿಯ ಹಿಂದಿನ ಉದ್ದೇಶ
ಭಾರತೀಯ ಸಂಸ್ಕೃತಿಯ ಪ್ರಕಾರ ಕೆಟ್ಟ ದೃಷ್ಟಿಯನ್ನು ನಿವಾಳಿಸಲು ನಿಂಬೆಹಣ್ಣು ಮತ್ತು ಹಸಿಮೆಣಸಿನಕಾಯಿಯನ್ನು ಬಳಸಲಾಗುತ್ತದೆ. ಈ ಶ್ರೇಷ್ಠ ದೃಷ್ಟಿ ನಿವಾರಕದ ಮೂಲಕ ಜಗತ್ತಿಗೆ ಅಂಟಿರುವ ಕೊರೊನಾ ವೈರಸ್ ಕಂಟಕವನ್ನು ನಿವಾಳಿಸಿ ಎಸೆಯುವುದು ಈ ಕಲಾಕೃತಿಯ ಹಿಂದಿನ ಉದ್ದೇಶ.
ಕೊರೊನಾ ರೌದ್ರನರ್ತನ: ಸಾವಿನ ಸಂಖ್ಯೆಯಲ್ಲಿ ಚೀನಾ ಮೀರಿಸಿದ ಇಟಲಿ!
ಕೊರೊನಾ ದಾಳಿಯಿಂದ ನಲುಗುತ್ತಿರುವ ವಿಶ್ವ
''ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಬೇಕು ಎಂಬ ಉದ್ದೇಶದಿಂದ ನಿಂಬೆಹಣ್ಣು, ಲವಂಗ ಬಳಸಿ ಕೊರೊನಾ ವೈರಸ್ ನಂತೆ ಕಾಣುವ ಕಲಾಕೃತಿ ರಚನೆ ಮಾಡಿದೆ. ಇದನ್ನ ಸೂಕ್ಷ್ಮವಾಗಿ ಗಮನಿಸಿದರೆ ಕಲಾಕೃತಿಯಲ್ಲಿ ಇರುವ ನಿಂಬೆಹಣ್ಣು ಭೂಮಿಯನ್ನು ಪ್ರತಿನಿಧಿಸುತ್ತದೆ. ವೈರಸ್ ದಾಳಿಯನ್ನು ಲವಂಗ ಸೂಚಿಸುತ್ತದೆ. ಮೇಲ್ನೋಟಕ್ಕೆ, ನಿಂಬೆಹಣ್ಣು ಮತ್ತು ಲವಂಗ ಬಳಸಿ ಮಾಡಿರುವ ಈ ಕಲಾಕೃತಿ ಕೊರೊನಾ ವೈರಸ್ ನಂತೆ ಕಂಡು ಬಂದರೂ, ಕೊರೊನಾ ಕಪಿಮುಷ್ಟಿಯಲ್ಲಿ ಜಗತ್ತು ಹೀಗೆ ನಲುಗುತ್ತಿದೆ ಎಂಬುದು ಇದರ ಕಲ್ಪನಾರ್ಥ'' ಎಂದು ಒನ್ ಇಂಡಿಯಾಕ್ಕೆ ವಿವರಿಸಿದ್ದಾರೆ ಕಲಾವಿದ ಧರ್ಮೇಶ್.
ಮೈಸೂರಿನ ಕಲಾವಿದ ಧರ್ಮೇಶ್
''ಇಡೀ ವಿಶ್ವಕ್ಕೆ ಈಗ ದೃಷ್ಟಿಯಾದಂತಾಗಿದೆ. ಹೀಗಾಗಿ ಆ ಕೆಟ್ಟ ದೃಷ್ಟಿಯನ್ನು ತೆಗೆಯಲು ಹಸಿ ಮೆಣಸಿನಕಾಯಿ ಹಾಕಿದ್ದೇನೆ'' ಎನ್ನುವ ಧರ್ಮೇಶ್ ಮೂಲತಃ ಮೈಸೂರಿನವರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಿರುವ ಧರ್ಮೇಶ್ ವೃತ್ತಿಪರ ವಿಷ್ಯುವೆಲ್ ಆರ್ಟಿಸ್ಟ್.