ICAR Award: ಬಂಡೂರು ಕುರಿಗಳ ಸಂರಕ್ಷಣೆ: ಮೈಸೂರಿನ ರೈತನಿಗೆ ಒಲಿದ ರಾಷ್ಟ್ರೀಯ ಪುರಸ್ಕಾರ
ಮೈಸೂರು, ಜನವರಿ, 03: ಹರಿಯಾಣದ ಕರ್ನಾಲ್ನಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿ- ನ್ಯಾಷನಲ್ ಬ್ಯೂರೋ ಆಫ್ ಅನಿಮಲ್ ಜೆನೆಟಿಕ್ ರಿಸೋರ್ಸಸ್ ರಾಷ್ಟ್ರೀಯ ಮಟ್ಟದ ತಳಿ ಸಂರಕ್ಷಣೆ ಪ್ರಶಸ್ತಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಮೈಸೂರು ರೈತನಿಗೆ ಪ್ರಶಸ್ತಿ ಒಲಿದು ಬಂದಿದೆ. ಇದು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಯಡಹಳ್ಳಿಯ ಶ್ರೀನಿವಾಸ್ ಆಚಾರ್ಯ ಅವರ ಯಶೋಗಾಥೆಯಾಗಿದೆ. ಇವರು ಮಾಲೀಕತ್ವದ ಯಶೋಧವನ ಮೇಕೆ, ಬಂಡೂರು ಕುರಿ ತಳಿಯ ಸಂರಕ್ಷಣೆಗಾಗಿ ರಾಷ್ಟ್ರಮಟ್ಟದ ಐಎಸಿಆರ್ ತಳಿ ಸಂರಕ್ಷಣಾ ಪ್ರಶಸ್ತಿ ಪಡೆದುಕೊಂಡು ಗಮನ ಸೆಳೆದಿದ್ದಾರೆ.
50 ಹೆಕ್ಟೇರ್ನಲ್ಲಿ ಆರಂಭಿಸಿದ್ದ ಫಾರಂ
ಈ ಫಾರಂ ಅನ್ನು 2012ರಲ್ಲಿ 50 ಹೆಕ್ಟೇರ್ನಲ್ಲಿ ಆರಂಭಿಸಲಾಗಿತ್ತು. ಇಲ್ಲಿ ಪ್ರತಿಷ್ಠಿತ ಬಂಡೂರು ಕುರಿ ತಳಿಯನ್ನು ಸಾಕಾಣಿಕೆ ಮಾಡುತ್ತಿದ್ದು, ಇಲ್ಲಿಯೇ ತಳಿ ಅಭಿವೃದ್ಧಿ ವ್ಯವಸ್ಥೆ, ಸುಧಾರಿತ ನಿರ್ವಹಣಾ ಕ್ರಮಗಳ ಮೂಲಕ ರಾಜ್ಯದ ಗಮನ ಸೆಳೆಯಲಾಗಿದೆ. ಸುಮಾರು 80 ತಳಿಗಳಿಂದ 400 ಬಂಡೂರು ಕುರಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅವುಗಳನ್ನು ಸುತ್ತಮುತ್ತಲಿನ ಆಸಕ್ತ ರೈತರಿಗೆ ವೈಜ್ಞಾನಿಕ ಬೆಲೆಯಲ್ಲಿ ವಿತರಣೆ ಮಾಡಿ ತಳಿ ಸಂರಕ್ಷಣೆ ಮಾಡಲಾಗುತ್ತಿದೆ. ಆದ್ದರಿಂದ ಕೇಂದ್ರ ಸರ್ಕಾರದ ಅಂಗಸಂಸ್ಥೆಯಾದ ಹರಿಯಾಣದ ಭಾರತೀಯ ಕೃಷಿ ಸಂಶೋಧನಾ ಪರಿಷತ್ 2022ನೇ ಸಾಲಿನ ಪ್ರಶಸ್ತಿಯನ್ನು ಶ್ರೀನಿವಾಸ್ ಆಚಾರ್ಯಗೆ ನೀಡಿದೆ.

ಬಂಡೂರು ಕುರಿಯ ವಿಶೇಷತೆ ಏನು?
''ಈ ಕುರಿಯನ್ನು ಜನರು ಹೆಚ್ಚಾಗಿ ತಿನ್ನಲು ಸಾಕುತ್ತಾರೆ. ಇದರ ರುಚಿ ಜಾಗತಿಕ ಮಟ್ಟದಲ್ಲೂ ಹೆಸರು ಮಾಡಿದ್ದು, ಬೇಡಿಕೆ ಹೆಚ್ಚಿದೆ. ಆದರೆ, ಪೂರೈಕೆ ಮಾತ್ರ ಇಲ್ಲ. ಅಳಿವಿನ ಹಂಚಿನಲ್ಲಿರುವ ಈ ಕುರಿಯನ್ನು ಸಾಕಲು ರೈತರು ಮುಂದಾಗಬೇಕು,'' ಎಂದು ಶ್ರೀನಿವಾಸ್ ಆಚಾರ್ಯ ಸಲಹೆ ನೀಡಿದ್ದಾರೆ. ನಂತರ ಪಶುಪಾಲನಾ ಮತ್ತು ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಬಿ.ಎನ್.ಷಡಕ್ಷರಿಮೂರ್ತಿ ಮಾತನಾಡಿ, ಬಂಡೂರು ಕುರಿ ಅವಸಾನದ ಅಂಚಿಗೆ ಬಂದಿತ್ತು. 2012ರಲ್ಲಿ ಕೇವಲ 3 ಸಾವಿರ ಕುರಿಗಳಿದ್ದವು. ಕೇಂದ್ರ, ರಾಜ್ಯ ಸರ್ಕಾರದ ಪ್ರಯತ್ನದ ಫಲವಾಗಿ ಇದೀಗ 25 ಸಾವಿರ ಕುರಿಗಳು ಇವೆ ಎಂದು ಮಾಹಿತಿ ನೀಡಿದರು.

''ಮಂಡ್ಯ ಜಿಲ್ಲೆಯ ಮಳವಳ್ಳಿ ಕಿರುಗಾವಲು ಬಳಿ ಈ ಕುರಿಗಳ ಸಂಖ್ಯೆ ಹೆಚ್ಚಿದೆ. ಈ ಕುರಿ ರೈತ ಮಿತ್ರವಾಗಿರುವುದರಿಂದ ಪ್ರತಿ ಮನೆಯಲ್ಲಿ 8-10 ಕುರಿಗಳನ್ನು ಸಾಕಲಾಗುತ್ತಿದೆ. ಈ ಕುರಿಯ ಮಾಂಸ ಬಹಳ ರುಚಿಕರವಾಗಿರುತ್ತದೆ. ಆದ್ದರಿಂದ ಈ ತಳಿ ಸಂತತಿ ಕಡಿಮೆಯಾಗಿತ್ತು. ಇದನ್ನು ಮನಗಂಡು ರಾಜ್ಯ ಸರ್ಕಾರವು ಮಳವಳ್ಳಿಯಲ್ಲಿ ಸರ್ಕಾರಿ ಬಂಡೂರಿ ಕುರಿ ಸಂರಕ್ಷಣಾ ಕೇಂದ್ರವನ್ನು ತೆರೆದಿದೆ. ತಳಿಗಳನ್ನು ಉನ್ನತೀಕರಣ ಮಾಡಿದ್ದು, ಟಗರನ್ನು ರೈತರಿಗೆ ನೀಡಲಾಗುತ್ತಿದೆ. ಇದರ ಸಂರಕ್ಷಣೆ ಕುರಿತು ವೈಜ್ಞಾನಿಕ ತರಬೇತಿಯನ್ನೂ ನೀಡಲಾಗುತ್ತಿದೆ,'' ಎಂದರು.












Click it and Unblock the Notifications