ನಂಜನಗೂಡು ಕ್ಷೇತ್ರಕ್ಕೆ ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳು ಸಿಗುತ್ತಿಲ್ಲ: ಪ್ರತಾಪ್ ಸಿಂಹ
ಮೈಸೂರು, ಡಿಸೆಂಬರ್. 26 : ಸುದೀರ್ಘ ಇತಿಹಾಸವಿರುವ ಕಾಂಗ್ರೆಸ್ ಇಂದು ಅಧೋಗತಿಗೆ ತಲುಪಿದ್ದು, ನಂಜನಗೂಡು ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳ ಹುಡುಕಾಟಕ್ಕೆ ತಿಣುಕಾಡುತ್ತಿದೆ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಲೇವಡಿ ಮಾಡಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಶ್ರೀನಿವಾಸ್ ಪ್ರಸಾದ್ ಅವರು ಸೇರ್ಪಡೆಯಿಂದ ಮೈಸೂರು ವಿಭಾಗದ ಬಿಜೆಪಿ ಘಟಕಕ್ಕೆ ಆನೆ ಬಲ ಬಂದಿದೆ.
ಮುಂಬರುವ ನಂಜನಗೂಡು ಅಧಿಕೃತ ಅಭ್ಯರ್ಥಿಯೆಂದು ಹಿರಿಯ ದಲಿತ ಮುಖಂಡ ಮಾಜಿ ಸಚಿವ ವಿ.ಶ್ರೀನಿವಾಸ್ ಅವರ ಹೆಸರನ್ನು ಈಗಾಗಲೇ ರಾಜ್ಯಾಧ್ಯಕ್ಷ ಯಡಿಯೂರಪ್ಪ ಘೋಷಿಸಿದ್ದು. ಉಪ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಮತಗಳಿಂದ ಜಯ ಸಾಧಿಸುವುದು ಶತಸಿದ್ಧ ಎಂದು ಹೇಳಿದರು. [ಪಿಸಿಯಿಂದ ಒತ್ತುವರಿ : ರಾಜ್ಯ ಸರಕಾರಕ್ಕೆ ಸಿಂಹ ಸವಾಲ್]

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ವಿಭಾಗದ 11 ಕ್ಷೇತ್ರ ಹಾಗೂ ಚಾಮರಾಜನಗರದ 4 ಸ್ಥಾನಗಳನ್ನು ಬಿಜೆಪಿಯೇ ಜಯಿಸಿ ಪ್ರಬಲ ಪಕ್ಷವಾಗಿ ಹೊರಹೊಮ್ಮಲಿದ್ದು, ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಮುಖ್ಯಮಂತ್ರಿಗಳ ಸ್ವಕ್ಷೇತ್ರದಲ್ಲಿ ಜನ ಬೆಂಬಲವಿಲ್ಲ, ಹಗರಣಗಳಲ್ಲಿ ಸಿಲುಕಿರುವ ಸರ್ಕಾರವೂ ಅಸ್ಥಿರತೆಯೆಡೆಗೆ ಸಾಗುತ್ತಿದೆ. ಐಟಿ ದಾಳಿಗೊಳಗಾದ ಜಯಚಂದ್ರ ಹಾಗೂ ಚಿಕ್ಕರಾಯಪ್ಪ ಅಧಿಕಾರಿಗಳ ಮುಂದೆ ಬಾಯ್ಬಿಟ್ಟರೆ ಸರ್ಕಾರಕ್ಕೆ ಉರುಳಾಗುವುದು ಎಂದು ಹೇಳಿದರು.
ಚುನಾವಣಾ ಗಿಮಿಕ್ : ನಂಜನಗೂಡು ಕ್ಷೇತ್ರದ ಕೆರೆಗಳು ಕಳೆದ ಮೂರುವರೆ ವರ್ಷಗಳಿಂದಲೂ ಮುಖ್ಯಮಂತ್ರಿಗಳಿಗೆ ಗೋಚರಿಸಿರಲಿಲ್ಲ. ಈಗ ಏಕಾಏಕಿ ಕೆರೆ ಕಟ್ಟೆಗಳಿಗೆ ನೀರು ತುಂಬಲು ಉತ್ಸುಕರಾಗಿದ್ದಾರೆ.
ಚುನಾವಣೆ ಬಂದಾಗ ಮಾತ್ರ ಕೆರೆಗಳು ಕಾಣಿಸುತ್ತವೆ ಎಂದು ಸಿಎಂ ಸಿದ್ದರಾಮಯ್ಯನವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅಂಬೇಡ್ಕರ್ ಬಗ್ಗೆ ಮಾತನಾಡುವ ಕನಿಷ್ಠ ಅರ್ಹತೆಯೂ ಮುಖ್ಯಮಂತ್ರಿಗಳಿಗಿಲ್ಲ. ಅಂಬೇಡ್ಕರ್ ಅವರಿಗೆ ಭಾರತ ರತ್ನ ಪದವಿ ನೀಡಿದ್ದು ಕಾಂಗ್ರೆಸ್ಸೇತರ ಸರ್ಕಾರ.
ಜಯಂತಿ ಆಚರಿಸಲು ಆರಂಭಿಸಿದ್ದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಿಂದ. ಸಂವಿಧಾನ ಶಿಲ್ಪಿಯನ್ನು ಕಾಂಗ್ರೆಸ್ ನಿಂದ ಸಂಪೂರ್ಣವಾಗಿ ನಿರ್ಲಕ್ಷ್ಯಿಸಲಾಗಿತ್ತು ಎಂದರು.
ಸೋನಿಯಾ ಗಾಂಧಿಯನ್ನು ಏಕವಚನದಲ್ಲಿ ನಿಂಧಿಸಿದ ಸಿದ್ದರಾಮಯ್ಯ ಕಾಂಗ್ರೆಸ್ಸಿನ ಕಟ್ಟಾಳುವಿನಂತೆ ವರ್ತಿಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.












Click it and Unblock the Notifications