ಕಾಂಗ್ರೆಸ್ಸೋ, ಬಿಜೆಪಿಯೋ? ಜಿ.ಟಿ.ದೇವೇಗೌಡ ಮನಸ್ಸು ಎತ್ಲಾಗೆ!
ದಳಪತಿಗಳ ಜೊತೆ ಮುನಿಸುಕೊಂಡು ಜೆಡಿಎಸ್ ಬಿಡಲು ಸಿದ್ದರಾಗಿರುವ ಹಾಲೀ ಶಾಸಕರ ಪರಿಸ್ಥಿತಿ ಇನ್ನೂ ತ್ರಿಶಂಕು ಸ್ಥಿತಿ. ಕಾಂಗ್ರೆಸ್ ಸೇರಲು ಬಯಸುತ್ತಿರುವ ಈ ನಾಯಕರುಗಳಿಗೆ, ಆ ಪಕ್ಷದಿಂದ ರೆಡ್ ಕಾರ್ಪೆಟ್ ವೆಲ್ಕಂ ಸಿಗುವುದು ಕಷ್ಟ ಎನ್ನುವುದು ತಾಜಾ ರಾಜಕೀಯ ಬೆಳವಣಿಗೆಗಳು.
ಇದಕ್ಕೆ ಹಲವು ಕಾರಣಗಳಿವೆ, ಒಂದು ಅವರವರು ಪ್ರತಿನಿಧಿಸುವ ಕ್ಷೇತ್ರದ ಸ್ಥಳೀಯ ಕಾಂಗ್ರೆಸ್ ಮುಖಂಡರ ಮತ್ತು ಕಾರ್ಯಕರ್ತರ ವಿರೋಧ. ಚುನಾವಣೆಯಂತಹ ಸೂಕ್ಷ್ಮ ಸಂದರ್ಭದಲ್ಲಿ ಇಂತಹ ವಿರೋಧವನ್ನು ಎದುರು ಹಾಕಿಕೊಳ್ಳಲು ಯಾವ ಪಕ್ಷವೂ ಬಯಸುವುದಿಲ್ಲ.
ಇವರೆಲ್ಲರೂ ಒಂದು ವೇಳೆ ಕಾಂಗ್ರೆಸ್ ಪಕ್ಷಕ್ಕೆ ಸೇರಿ ಚುನಾವಣೆಗೆ ಸ್ಪರ್ಧಿಸಿದರೆ, ಆ ಭಾಗದಲ್ಲಿ ಗಣನೀಯ ಮತಬ್ಯಾಂಕ್ ಅನ್ನು ಹೊಂದಿರುವ ಜೆಡಿಎಸ್, ಇವರನ್ನು ಸೋಲಿಸಲು ಪ್ರಭಲ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಂತೂ ಹೌದು.
ಹಾಗಾಗಿ, ಜೆಡಿಎಸ್ ಬಿಡಲು ಸಿದ್ದರಾಗಿರುವ ಶಾಸಕರುಗಳಿಗೆ ಕಾಂಗ್ರೆಸ್ಸಿನಿಂದ ಯಾವುದೇ ಖಚಿತ ಭರವಸೆ ಸಿಗುತ್ತಿಲ್ಲ ಎನ್ನುವುದು ಕಾಂಗ್ರೆಸ್ ಆಂತರಿಕ ವಲಯದಲ್ಲಿ ಕೇಳಿಬರುತ್ತಿರುವ ಮಾತು. ಇದರಲ್ಲಿ, ಹಾಲೀ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರೂ ಆಗಿರುವ ಜಿ.ಟಿ. ದೇವೇಗೌಡ ಕೂಡಾ ಒಬ್ಬರು.

ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ
ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ದಿನದಿಂದಲೂ, ಸಿಕ್ಕಿದ ಸಚಿವ ಸ್ಥಾನದ ಮೇಲೆ ಮುನಿಸುಕೊಂಡು ಜಿ.ಟಿ.ದೇವೇಗೌಡ, ಎಚ್ಡಿಕೆ ಜೊತೆ ಅಂತರ ಕಾಯ್ದುಕೊಂಡು ಬಂದಿದ್ದರು. ಯಾರನ್ನು ಚುನಾವಣೆಯಲ್ಲಿ ಸೋಲಿಸಿ, ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದ ಜಿಟಿಡಿ, ಸಿದ್ದರಾಮಯ್ಯನವರ ಜೊತೆಗೆ ಮತ್ತೆ ಒಡನಾಟವನ್ನು ಹೆಚ್ಚಿಸಿಕೊಂಡಿದ್ದರು. ಇದು, ಕುಮಾರಸ್ವಾಮಿಯವರ ಕೋಪಕ್ಕೂ ಕಾರಣವಾಗಿತ್ತು. ಕಾಂಗ್ರೆಸ್ ಸೇರುತ್ತೇನೆ ಎಂದು ಬಹಿರಂಗವಾಗಿಯೇ ಹೇಳಿದ್ದ ಜಿಟಿಡಿಗೆ, ಮುಂದಿನ ಚುನಾವಣೆಯಲ್ಲಿ ಟಿಕೆಟ್ ಕೊಡಿಸುವ ವಿಚಾರದಲ್ಲಿ ಯಾವ ಕಾಂಗ್ರೆಸ್ ನಾಯಕರಿಂದಲೂ ಖಚಿತ ಭರವಸೆ ಸಿಕ್ಕಿರಲಿಲ್ಲ.

ನಾನು ಯಾವ ಭರವಸೆಯನ್ನೂ ನೀಡಲು ಸಾಧ್ಯವಿಲ್ಲ, ಸಿದ್ದರಾಮಯ್ಯ
ಟಿಕೆಟ್ ವಿಚಾರದಲ್ಲಿ ನಾನು ಯಾವ ಭರವಸೆಯನ್ನೂ ನೀಡಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಕೂಡಾ ಬಹಿರಂಗವಾಗಿಯೇ ಹೇಳಿದ್ದರು. ಇದರ ಬೆನ್ನಲ್ಲೇ ಜೆಡಿಎಸ್ ವರಿಷ್ಠಎಚ್.ಡಿ.ದೇವೇಗೌಡ್ರು ಕೂಡಾ ಜಿಟಿಡಿಯನ್ನು ಕರೆಸಿಕೊಂಡು ಮಾತನಾಡಿಸಿದ್ದರು. ಆದರೆ, ಜೆಡಿಎಸ್ ಬಿಡುವ ನಿಲುವಿನಿಂದ ಜಿಟಿಡಿ ಹಿಂದಕ್ಕೆ ಸರಿದಿರಲಿಲ್ಲ. ಈ ನಡುವೆ, "ಯಾವ ಪಕ್ಷ ನನಗೆ ಮತ್ತು ನನ್ನ ಮಗನಿಗೆ (ಹರೀಶ್ ಗೌಡ) ಟಿಕೆಟ್ ನೀಡುತ್ತೋ, ಆ ಪಕ್ಷಕ್ಕೆ ನಾನು ಸೇರ್ಪಡೆಯಾಗುತ್ತೇನೆ"ಎಂದು ಜಿಟಿಡಿ ಹೇಳಿದ್ದಾರೆ. ಆ ಮೂಲಕ, ಬಿಜೆಪಿ ಸೇರಲಿದ್ದಾರೆ ಎನ್ನುವ ಗುಸುಗುಸು ಸುದ್ದಿಗೆ ತುಪ್ಪ ಸುರಿದಿದ್ದಾರೆ.

ಡಾ.ಸುಧಾಕರ್, ಮೈಸೂರು ಭಾಗದ ಜೆಡಿಎಸ್ ನಾಯಕರ ಸಂಪರ್ಕದಲ್ಲಿದ್ದಾರೆ ಎನ್ನುವ ಸುದ್ದಿ
ಇದಕ್ಕೆ ಪೂರಕ ಎನ್ನುವಂತೆ, ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಮೈಸೂರು ಭಾಗದ ಜೆಡಿಎಸ್ ನಾಯಕರ ಸಂಪರ್ಕದಲ್ಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಕಳೆದ ಸೋಮವಾರ (ಏಪ್ರಿಲ್ 25) ಜಿ.ಟಿ.ದೇವೇಗೌಡ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿಯಾಗಲು ಬಂದಿದ್ದರು. ಆ ವೇಳೆ, ಸಚಿವ ಡಾ.ಸುಧಾಕರ್, ಎಸ್.ಟಿ.ಸೋಮಶೇಖರ್ ಮತ್ತು ಕೆ.ಗೋಪಾಲಯ್ಯ ಕೂಡಾ ಅಲ್ಲಿ ಹಾಜರಿದ್ದರು.

ಯಾವ ಪಕ್ಷ ಟಿಕೆಟ್ ಕೊಡುತ್ತೋ ಆ ಪಕ್ಷಕ್ಕೆ ಹೋಗುತ್ತೇನೆ ಎಂದ ಜಿಟಿಡಿ
ಯಾವ ಪಕ್ಷ ಟಿಕೆಟ್ ಕೊಡುತ್ತೋ ಆ ಪಕ್ಷಕ್ಕೆ ಹೋಗುತ್ತೇನೆ ಎಂದು ಜಿಟಿಡಿ ಹೇಳಿರುವುದರಿಂದ, ಜಿಟಿಡಿ ಮತ್ತು ಹರೀಶ್ ಗೌಡ ಅವರು ಬಿಜೆಪಿ ಸೇರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಇವರು ಟಿಕೆಟ್ ಬಯಸುತ್ತಿರುವ ಹುಣಸೂರು, ಚಾಮುಂಡೇಶ್ವರಿ, ವರುಣ, ಚಾಮರಾಜ ಮುಂತಾದ ಕ್ಷೇತ್ರಗಳಲ್ಲಿ ಬಿಜೆಪಿಗೆ ಅಷ್ಟೇನೂ ಬಲವಾದ ಪಕ್ಷದ ಬೇರು ಇಲ್ಲದೇ ಇರುವದರಿಂದ, ಬಿಜೆಪಿಗೂ ಸಮರ್ಥ ಅಭ್ಯರ್ಥಿಯ ಅವಶ್ಯಕತೆಯಿದೆ. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ಸಿನದ್ದು ಆ ಪರಿಸ್ಥಿತಿಯಲ್ಲ. ಹಾಗಾಗಿ, ಜಿಟಿಡಿ ತಮ್ಮ ಮಗನೊಂದಿಗೆ ಬಿಜೆಪಿ ಸೇರಿದರೂ ಸೇರಬಹುದು. ಯಾಕೆಂದರೆ, ಕೊನೆಯಲ್ಲಿ ನಿಲ್ಲುವುದು ರಾಜಕೀಯ..












Click it and Unblock the Notifications