ಬಿಎಸ್ವೈ ಮನೆಗೆ ಬಂದಿದ್ದ ನಾಗಸಾಧುಗಳಿಂದ ಸಿದ್ದರಾಮಯ್ಯ ಒಳಿತಿಗೆ ಪೂಜೆ!
ಒಂದು ವಾರದ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಮನೆಗೆ ಬಂದ ನಾಗಸಾಧುಗಳನ್ನು ತಮ್ಮ ಮನೆಗೆ ಕರೆಸಿ, ಸಿದ್ದರಾಮಯ್ಯ ಒಳಿತಿಗಾಗಿ ಕಾಂಗ್ರೆಸ್ ಮುಖಂಡರೊಬ್ಬರು ಮೈಸೂರಿನಲ್ಲಿ ಪೂಜೆ ನಡೆಸಿದ್ದಾರೆ.
ಮೈಸೂರು, ಅ 6: ಒಂದು ವಾರದ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಮನೆಗೆ ಬಂದಿದ್ದ ನಾಗಸಾಧುಗಳನ್ನು ತಮ್ಮ ಮನೆಗೆ ಕರೆಸಿ, ಸಿಎಂ ಸಿದ್ದರಾಮಯ್ಯ ಒಳಿತಿಗಾಗಿ ಕಾಂಗ್ರೆಸ್ ಮುಖಂಡರೊಬ್ಬರು ಪೂಜೆ ನಡೆಸಿದ್ದಾರೆ.
ನಗರದ ಕಂಸಾಳೆ ರವಿ ಎನ್ನುವ ಮುಖಂಡರು, ವಾರಣಾಸಿಯಿಂದ ಬಂದಿದ್ದ ನಾಗಸಾಧುಗಳನ್ನು ತಮ್ಮ ಮನೆಗೆ ಕರೆಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೋಲಾರ ಶಾಸಕ ವರ್ತೂರು ಪ್ರಕಾಶ್ ಅವರ ಒಳಿತಿಗಾಗಿ ಸಾಧುಗಳಿಂದ ಪೂಜೆ ಮಾಡಿಸಿದ್ದಾರೆ.

ಸಿದ್ದರಾಮಯ್ಯ ಮತ್ತು ವರ್ತೂರು ಪ್ರಕಾಶ್ ಅವರ ಭಾವಚಿತ್ರಗಳನ್ನು ಇಟ್ಟು ನಾಗಾಸಾಧುಗಳು ಪೂಜೆ ನಡೆಸಿದ್ದು, ಇಬ್ಬರಿಗೂ ಒಳ್ಳೆದಾಗಲಿ ಎಂದು ಆಶೀರ್ವದಿಸಿದ್ದಾರೆಂದು ಕಂಸಾಳೆ ರವಿ ಹೇಳಿದ್ದಾರೆ.
ನಾಲ್ಕು ಜನ ಸಾಧುಗಳಿಂದ ಕಾಂಗ್ರೆಸ್ ಮುಖಂಡ ರವಿ ಗುರುವಾರ (ಅ 5) ಪೂಜೆ ನಡೆಸಿದ್ದಾರೆ. ಯಡಿಯೂರಪ್ಪನವರ ಮನೆಗೆ ಬಂದಿದ್ದ ಹದಿನೆಂಟು ನಾಗಸಾಧುಗಳ ಪೈಕಿ ಈ ನಾಲ್ವರು ಸಾಧುಗಳು ಸೇರಿದ್ದಾರೆ.
ವಾರದ ಹಿಂದೆ ವಾರಣಾಸಿಯಿಂದ ದೇಶ ಸಂಚಾರ ಮಾಡಿಕೊಂಡು ಬಂದಿದ್ದ ಹದಿನೆಂಟು ನಾಗಸಾಧುಗಳು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರನ್ನು ಆಶೀರ್ವದಿಸಿ ಹೋಗಿದ್ದರು. ಮುಂದಿನ ಚುನಾವಣೆಯಲ್ಲಿ ನೂರಕ್ಕೂ ಹೆಚ್ಚು ಸ್ಥಾನವನ್ನು ಬಿಜೆಪಿ ಗೆಲ್ಲಲಿದೆ, ನೀವು ಮತ್ತೆ ಸಿಎಂ ಆಗಲಿದ್ದೀರಿ ಎಂದು ಸಾಧುಗಳು ಬಿಎಸ್ವೈ ಅವರನ್ನು ಹರಸಿದ್ದರು.
ಕೇಂದ್ರದಲ್ಲೂ ನರೇಂದ್ರ ಮೋದಿ ಸರಕಾರ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಗೆದ್ದು, ಮೋದಿ ಮತ್ತೆ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆಂದು ನಾಗಸಾಧುಗಳು ಆಶೀರ್ವದಿಸಿದ್ದಾರೆ ಎಂದು ಯಡಿಯೂರಪ್ಪ ಸಂತಸ ವ್ಯಕ್ತ ಪಡಿಸಿದ್ದರು.












Click it and Unblock the Notifications