ಮೈಸೂರು ಪಾಲಿಕೆ ಅಸಮಾಧಾನದ ಬೆಂಕಿ: ಶಾಸಕ ತನ್ವೀರ್ ಆಪ್ತನಿಗೆ ನೋಟಿಸ್ ನೀಡಿದ ಕಾಂಗ್ರೆಸ್
ಮೈಸೂರು, ಮಾರ್ಚ್ 16: ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಜತೆಗಿನ ದೋಸ್ತಿ ಬಳಿಕ "ಕೈ' ಪಾಳಯದಲ್ಲಿ ಭುಗಿಲೆದ್ದಿರುವ ಅಸಮಾಧಾನ ಇನ್ನೂ ಹೊಗೆಯಾಡುತ್ತಲೇ ಇದೆ. ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ವಿರುದ್ಧ ಶುರುವಾದ ಭಿನ್ನಮತ ಇದೀಗ ಅವರ ಆಪ್ತರ ಮೇಲೂ ಸ್ಪೋಟಿಸುತ್ತಿದೆ.
ಮೇಯರ್ ಚುನಾವಣೆ ಬಳಿಕ ಮೈಸೂರು ಕಾಂಗ್ರೆಸ್ನಲ್ಲಿ ನಡೆದ ರಾಜಕೀಯ ಬೆಳವಣಿಗೆ ವೇಳೆ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದ ಆರೋಪ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಘೋಷಣೆ ಕೂಗಿದ್ದಕ್ಕೆ ಶಾಸಕ ತನ್ವೀರ್ ಸೇಠ್ ಆಪ್ತನಿಗೆ ನಗರ ಕಾಂಗ್ರೆಸ್ ಅಧ್ಯಕ್ಷ ನೋಟಿಸ್ ಜಾರಿ ಮಾಡಿದ್ದಾರೆ.
ಮೈಸೂರು ಪಾಲಿಕೆ ಮೈತ್ರಿ; ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದವರು ಅಮಾನತು
ಎನ್.ಆರ್ ಕ್ಷೇತ್ರದ 8 ಮಂದಿಗೆ ನೋಟಿಸ್ ಜಾರಿ
ಶಾಸಕ ತನ್ವೀರ್ ಆಪ್ತ ಸೇರಿದಂತೆ ಎನ್.ಆರ್ ಕ್ಷೇತ್ರದ 8 ಮಂದಿಗೆ ನೋಟಿಸ್ ಜಾರಿಯಾಗಿದ್ದು, ನಿಮ್ಮ ಮೇಲೆ ಯಾಕೆ ಕ್ರಮ ಕೈಗೊಳ್ಳಬಾರದು ಎಂಬುದಕ್ಕೆ 7 ದಿನದ ಒಳಗೆ ಉತ್ತರ ನೀಡಿ ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಚುನಾವಣೆ ಮುಗಿದು ಒಂದು ತಿಂಗಳಾದರೂ ಕಾಂಗ್ರೆಸ್ನಲ್ಲಿ ಮಾತ್ರ ಒಳಜಗಳ ನಿಂತಂತೆ ಕಾಣದಿರುವುದು, ಕಾಂಗ್ರೆಸ್ ಒಳಜಗಳ ಬೂದಿ ಮುಚ್ಚಿದ ಕೆಂಡ ಎಂಬುದಕ್ಕೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ.
ನೋಟಿಸ್ ಕೊಡಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿ
ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಮೈತ್ರಿ ವಿಚಾರವಾಗಿ ತನ್ವೀರ್ ಪರಮಾಪ್ತನ ಮೇಲೆ ಕ್ರಮಕ್ಕೆ ಮುಂದಾಗಿರುವ ಮೈಸೂರು ನಗರ ಕಾಂಗ್ರೆಸ್ ಘಟಕ, ಅಧಿಕೃತವಾಗಿ ತನ್ವೀರ್ ಆಪ್ತ ಅಬ್ದುಲ್ ಖಾದರ್ ಶಾಹಿದ್ಗೆ ಕಾಂಗ್ರೆಸ್ನಿಂದ ನೋಟಿಸ್ ಜಾರಿ ಮಾಡಿದೆ. ಶಾಸಕ ತನ್ವೀರ್ ಬೆಂಬಲಿಗನಿಗೆ ನೋಟಿಸ್ ಕೊಡಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ ಅನ್ನುವ ಚರ್ಚೆ ಸಹ ಆರಂಭವಾಗಿರುವ ಹಿನ್ನೆಲೆಯಲ್ಲಿ, ನೋಟಿಸ್ ವಿಚಾರ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ.
ಮೈಸೂರು ಮೇಯರ್ ಚುನಾವಣೆ: ದೋಸ್ತಿಗೆ 'ಕೈ' ನಾಯಕರ ಭಿನ್ನರಾಗ!
ಪಕ್ಷ ವಿರೋಧಿ ಚಟುವಟಿಕೆ
ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ ಅವರು ಎನ್.ಆರ್ ಕ್ಷೇತ್ರದ ಅಜೀಜ್ ಸೇಠ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿರುವ ಅಬ್ದುಲ್ ಖಾದರ್ ಶಾಹಿದ್ ಇವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಪಾಲಿಕೆ ಚುನಾವಣೆ ನಂತರ ಫೆ.26 ರಂದು ಶಾಸಕ ತನ್ವೀರ್ ಮನೆ ಮುಂದೆ ಪ್ರತಿಭಟನೆ ನಡೆದಿತ್ತು. ಆ ಪ್ರತಿಭಟನೆಯಲ್ಲಿ ನೀವು ಕೆಲ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸೇರಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿರುತ್ತೀರಿ? ಇದು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಭಿತ್ತರವಾಗಿರುತ್ತದೆ. ನಿಮ್ಮ ಪ್ರತಿಭಟನೆಯಿಂದ ಪಕ್ಷದ ಹಾಗೂ ನಾಯಕರ ಘನತೆಗೆ ಕುಂದು ಉಂಟಾಗಿರುತ್ತದೆ, ಇದು ಪಕ್ಷ ವಿರೋಧಿ ಚಟುವಟಿಕೆಯಾಗಿರುತ್ತದೆ.
ಮೈತ್ರಿ ವಿಷಯದಲ್ಲಿ ದೊಡ್ಡವರ ನಡುವೆ ಶುರುವಾದ ಜಗಳ
ಈ ಕಾರಣದಿಂದ ಕೆಪಿಸಿಸಿ ಸೂಚನೆ ಮೇರೆಗೆ ನಿಮ್ಮ ಮೇಲೆ ಏಕೆ ಕ್ರಮ ಕೈಗೊಳ್ಳಬಾರದು ಎಂಬುದಕ್ಕೆ ಉತ್ತರ ನೀಡಿ, ಈ ನೋಟಿಸ್ ತಲುಪಿದ 7 ದಿನದ ಒಳಗೆ ಉತ್ತರ ನೀಡಿ ಎಂದು ನೋಟಿಸ್ ನೀಡಲಾಗಿದೆ. ಅಬ್ದುಲ್ ಖಾದರ್ ಸೇರಿದಂತೆ 8 ಮಂದಿಗೆ ನೋಟಿಸ್ ಜಾರಿಯಾಗಿದ್ದು, ಪ್ರತ್ಯೇಕವಾಗಿ ಅಬ್ದುಲ್ ಖಾದರ್ ಶಾಹಿದ್ ಹೆಸರಿಗೆ ನೋಟಿಸ್ ನೀಡಿರುವ ನಗರ ಕಾಂಗ್ರೆಸ್ ಅಧ್ಯಕ್ಷ, 8 ಮಂದಿಗೂ ಪ್ರತ್ಯೇಕ ನೋಟಿಸ್ ನೀಡಲಾಗಿದೆ. ನಗರ ಕಾಂಗ್ರೆಸ್ನಲ್ಲಿ ನಡೆದ ಈ ದಿಢೀರ್ ಬೆಳವಣಿಗೆ ಶಾಸಕ ತನ್ವೀರ್ ಸೇಠ್ ಆಪ್ತರು ಹಾಗೂ ಎನ್.ಆರ್. ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಅಚ್ಚರಿಗೆ ಕಾರಣವಾಗಿದೆ. ಅಲ್ಲದೇ ಮೈತ್ರಿ ವಿಷಯದಲ್ಲಿ ದೊಡ್ಡವರ ನಡುವೆ ಶುರುವಾದ ಜಗಳಕ್ಕೆ ಕಿರಿಯರ ಮೇಲೆ ಕ್ರಮಕ್ಕೆ ಮುಂದಾಗಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.